ಪ್ರಥಮ ಪ್ರಜೆಯಾಗಿ ರಾಮನಾಥ್ ಕೋವಿಂದ್: ಕನ್ನಡ ಪತ್ರಿಕೆಗಳು ಕಂಡಂತೆ
ಬೆಂಗಳೂರು, ಜುಲೈ 21: ವಿಶ್ವ-ರಾಷ್ಟ್ರದಲ್ಲಿ ಏನೇ ಮಹತ್ವದ್ದು ಘಟಿಸಿದರೂ ಶ್ರೀಸಾಮಾನ್ಯ ತವಕದಿಂದ ಕಾದುಕೂರುವುದು ಮರುದಿನದ ಪತ್ರಿಕೆಗೆ. 27x7 ಚಾನೆಲ್ ಗಳು ಎಷ್ಟೇ ಸುದ್ದಿಕೊಟ್ಟರೂ ಸೊಗಸಾದ ವಿಶ್ಲೇಷಣೆ, ಯಥೇಚ್ಛ ಮಾಹಿತಿಗೆ ಪತ್ರಿಕೆಗಳೇ ಬೇಕು.
ಅದಕ್ಕೆಂದೇ ಭಾರತದ ಪ್ರಥಮ ಪ್ರಜೆಯಾಗಿ ಎನ್ ಡಿಎ ಅಭ್ಯರ್ಥಿ ರಾಮನಾಥ್ ಕೋವಿಂದ್ ಆಯ್ಕೆಯಾಗುತ್ತಿದ್ದಂತೆಯೇ ಮರುದಿನದ ಪತ್ರಿಕೆಯಲ್ಲಿ ಏನಿರುತ್ತದೆ ಎಂಬ ಕುತೂಹಲ ಎಲ್ಲರಲ್ಲೂ ಇದ್ದಿದ್ದೇ. ಆದ್ದರಿಂದ ಕನ್ನಡದ ಪ್ರಮುಖ ಪತ್ರಿಕೆಗಳು ರಾಮನಾಥ್ ಕೋವಿಂದ್ ಗೆಲುವನ್ನು ವಿಶ್ಲೇಷಿಸಿದ್ದು ಹೇಗೆ ಎಂಬ ಬಗ್ಗೆ ಒಂದೇ ಕಡೆ ಚಿತ್ರ ಸಹಿತ ಮಾಹಿತಿ ನೀಡಿದೆ, 'ಒನ್ ಇಂಡಿಯಾ.'
ರೈತನ ಮಗ 14ನೇ ರಾಷ್ಟ್ರಪತಿ ರಾಮನಾಥ್ ಕೋವಿಂದ್
ಜುಲೈ 17 ರಂದು ನಡೆದ ರಾಷ್ಟ್ರಪತಿ ಚುನಾವಣೆಯ ಫಲಿತಾಂಶ ಜುಲೈ 20 ರಂದು ಬಿಡುಗಡೆಯಾಗಿದ್ದು, ಯುಪಿಎ ಅಭ್ಯರ್ಥಿ ಮೀರಾ ಕುಮಾರ್ ವಿರುದ್ಧ ಶೇ.65 ರಷ್ಟು ಮತಗಳನ್ನು ಪಡೆದು ಕೋವಿಂದ್, ಅಭೂತಪೂರ್ವ ಜಯಗಳಿಸಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿನ್ನೆಲೆಯಿಂದ ಬಂದ, ದಲಿತ ನಾಯಕ ರಾಮನಾಥ್ ಕೋವಿಂದ್ ಗೆಲುವನ್ನು ಕನ್ನಡದ ಪ್ರಮುಖ ಪತ್ರಿಕೆಗಳು ವಿಶ್ಲೇಷಿಸಿದ್ದು ಹೀಗೆ...
ನೂತನ ರಾಷ್ಟ್ರಪತಿ ಸೇರಿದಂತೆ ಈವರೆಗಿನ ರಾಷ್ಟ್ರಾಧ್ಯಕ್ಷರ ಪರಿಚಯ
ರಾಷ್ಟ್ರಪತಿ ಕೋwinದ
ರಾಷ್ಟ್ರಪತಿ ಕೋwinದ ಎಂಬ ತಲೆಬರಹ ನೀಡಿ ಕೋವಿಂದ್ ಹೆಸರಿನಲ್ಲೇ, 'ಗೆಲುವೂ' ಇದೆ ಎಂಬುದನ್ನು ಕಂಡುಕೊಂಡಿದ್ದು ವಿಜಯ ಕರ್ನಾಟಕ ಪತ್ರಿಕೆ. ಕೋವಿಂದ್ ಹೆಸರಿನಲ್ಲೇ ಅರ್ಥಪೂರ್ಣ ಶೀರ್ಷಿಕೆ ನೀಡಿ, ಪ್ರಧಾನಿ ನರೇಂದ್ರ ಮೋದಿ ನೂತನ ರಾಷ್ಟ್ರಪತಿಗೆ ಸಿಹಿ ತಿನ್ನಿಸುತ್ತಿರುವ ಚಿತ್ರವನ್ನು ವಿಜಯ ಕರ್ನಾಟಕ ಪ್ರಕಟಿಸಿದೆ.
ರಾಮನಾಥ ಪ್ರಥಮ
ಪ್ರಥಮ ಪ್ರಜೆಯಾಗಿ ರಾಮನಾಥ್ ಕೋವಿಂದ್ ಆಯ್ಕೆಯಾಗಿದ್ದನ್ನು 'ರಾಮನಾಥ ಪ್ರಥಮ' ಎಂಬ ತಲೆಬರಹದೊಂದಿಗೆ ಉದಯವಾಣಿ ವಿಶ್ಲೇಷಿಸಿದೆ.
ಕೋವಿಂದಾಯನಮೋ
ನರೇಂದ್ರ ಮೋದಿಯವರು ಸೂಚಿಸಿದ್ದ ರಾಷ್ಟ್ರಪತಿ ಅಭ್ಯರ್ಥಿ ರಾಮನಾಥ್ ಕೋವಿಂದ್ ಗೆಲುವನ್ನು ವಿಜಯವಾಣಿ ಪತ್ರಿಕೆ 'ಕೋವಿಂದಾಯನಮೋ' ಎಂದು, ವ್ಯಾಖ್ಯಾನಿಸಿದೆ. 'ಒಲಿದ 14 ನೇ ರಾಷ್ಟ್ರಪತಿ ಪಟ್ಟ: ಫಲಿಸಿದ ಮೋದಿ-ಷಾ ತಂತ್ರ' ಎಂಬ ಕಿಕ್ಕರ್ ನೀಡಿ, ತಲೆಬರಹದ ಅರ್ಥವನ್ನು ಮತ್ತಷ್ಟು ಹೆಚ್ಚಿಸುವಂತೆ ಮಾಡಿದೆ.
ದೇಶದ ಅತ್ಯುನ್ನತ ಹುದ್ದೆಗೇರಿದ ಸ್ವಯಂಸೇವಕ
ಕೋವಿಂದ್ 14 ನೇ ರಾಷ್ಟ್ರಪತಿ ಎಂಬ ಸರಳ ತಲೆಬರಹ ನೀಡಿದ್ದರೂ, ಪುಟಕ್ಕೆ ಆಕರ್ಷಕ ವಿನ್ಯಾಸ ನೀಡುವಲ್ಲಿ ಹೊಸ ದಿಗಂತ ಪತ್ರಿಕೆ, ಯಶಸ್ವಿಯಾಗಿದೆ. ಹಾಗೆಯೇ ದೇಶದ ಅತ್ಯನ್ನತ ಹುದ್ದೆಗೇರಿದ ಸ್ವಯಂಸೇವಕ ಎಂಬ ಕಿಕ್ಕರ್ ನೊಂದಿಗೆ, ಕೋವಿಂದ್ ಆರ್ ಎಸ್ ಎಸ್ ಹಿನ್ನೆಲೆಯವರು ಎಂಬುದನ್ನು ನೆನಪಿಸಿದೆ.
ರಾಮನಾಥ ರಾಷ್ಟ್ರಪತಿ
ಪ್ರಜಾವಾಣಿ ಎಂದಿನಂತೆ ಸರಳವಾಗಿ, 'ರಾಮನಾಥ ರಾಷ್ಟ್ರಪತಿ' ಎಂಬ ತಲೆಬರಹವನ್ನು ನೀಡಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ತಮ್ಮ ಪತ್ನಿ ಸವಿತಾ ಕೋವಿಂದ್ ಅವರೊಂದಿಗೆ ಗೆಲುವಿನ ಸಂಭ್ರಮ ಹಂಚಿಕೊಳ್ಳುತ್ತಿರುವ ಚಿತ್ರವನ್ನು ಪ್ರಕಟಿಸಿದೆ.
ಕೋವಿಂದ್ ಪ್ರಥಮಪ್ರಜೆ
ಕನ್ನಡ ಪ್ರಭ ಪತ್ರಿಕೆ ಸಹ ಸರಳವಾಗಿ ಕೋವಿಂದ್ ಪ್ರಥಮ ಪ್ರಜೆ' ಎಂಬ ಶೀರ್ಷಿಕೆ ನೀಡಿದೆ.
ದೇಶಕ್ಕೆ ನೂತನ ಪುರುಷೋತ್ತಮ
ಸಂಯುಕ್ತ ಕರ್ನಾಟಕ ಪತ್ರಿಕೆ ರಾಷ್ಟ್ರಪತಿ ಕೋವಿಂದ್ ಅವರಿಗಾಗಿ ಅರ್ಧ ಪುಟ ಮೀಸಲಿಟ್ಟು, 'ದೇಶಕ್ಕೆ ನೂತನ ಪುರುಷೋತ್ತಮ' ಎಂಬ ಶೀರ್ಷಿಕೆ ನೀಡಿದೆ. ಯಾವ ಕಳಂಕವಿಲ್ಲದ, ಹೆಸರಿನಲ್ಲೇ 'ರಾಮ'ನನ್ನು ಹೊಂದಿದ ಕಾರಣಕ್ಕೆ ಕೋವಿಂದ್ ಅವರನ್ನು ಪುರುಷೋತ್ತಮ ಎಂದು ಸಂಯುಕ್ತ ಕರ್ನಾಟಕ ಕರೆದಿದೆ. 'ಪುರುಷೋತ್ತಮ' ಫಾಂಟ್ ಸಹ ಆಕರ್ಷಕವಾಗಿದೆ.
ಕೋವಿಂದ್ 14 ನೇ ರಾಷ್ಟ್ರಪತಿ
ವಾರ್ತಾ ಭಾರತಿ, ಕೋವಿಂದ್ 14 ನೇ ರಾಷ್ಟ್ರಪತಿ ಎಂಬಸರಳ ಶೀರ್ಷಿಕೆ ನೀಡಿ, ತಮ್ಮ ಗೆಲುವಿಗೆ ಶುಭಹಾರೈಸಿದ ಸರ್ವರಿಗೂ ವಂದನೆ ಸಲ್ಲಿಸುತ್ತಿರುವ ಕೋವಿಂದ್ ಅವರ ಚಿತ್ರವನ್ನು ಪ್ರಕಟಿಸಿದೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್
ವಿಶ್ವವಾಣಿ ಪತ್ರಿಕೆಯ ಮುಖಪುಟದಲ್ಲಿ ರಾಜ್ಯ ಸುದ್ದಿಗಳಿಗೇ ಮಹತ್ವ ನೀಡಿದ್ದು, 9 ನೇ ಪುಟದಲ್ಲಿ ಕೋವಿಂದ್ ಅವರಿಗೆ ಜಾಗ ಕಲ್ಪಿಸಲಾಗಿದೆ! 9 ನೇ ಪುಟದ ಮುಕ್ಕಾಲು ಭಾಗ ಆಕರ್ಷಕ ಫೋಟೋ, ಮತ್ತು ಉಪಯುಕ್ತ ಮಾಹಿತಿಗಳೊಂದಿಗೆ ಪ್ರಥಮ ಪ್ರಜೆಗೆ ಅಭಿನಂದನೆ ಸಲ್ಲಿಸಲಾಗಿದೆ.