ದಸರಾ ಶಾಪಿಂಗ್ ಉತ್ಸಾಹ ಕುಗ್ಗಿಸಿದ ಬೆಂಗಳೂರಿನ ಸಂಜೆಯ ಮಳೆ
ಬೆಂಗಳೂರು, ಅಕ್ಟೋಬರ್ 17 : ದಸರಾ ಹಬ್ಬದ ಶಾಪಿಂಗ್, ಊರಿಗೆ ಹೋಗುವ ತಯಾರಿ, ಕಚೇರಿಯಿಂದ ಮನೆಗೆ ಹೋಗುವ ಧಾವಂತ ಎಲ್ಲವನ್ನು ಬೆಂಗಳೂರು ನಗರದ ಬುಧವಾರ ಸಂಜೆಯ ಮಳೆ ಹಾಳು ಮಾಡಿದೆ. ಜನರು ಪರದಾಡುವಂತೆ ಮಾಡಿದೆ.
ಹೌದು, ಬುಧವಾರ ಸಂಜೆ 4 ಗಂಟೆ ಸುಮಾರಿಗೆ ಆರಂಭವಾದ ಮಳೆ ಬಿಟ್ಟು ಬಿಟ್ಟು ಬರುತ್ತಿದೆ. ಮಳೆಯ ಜೊತೆ ಮಿಂಚು ಸಿಡಲಿನ ಅರ್ಭಟವೂ ಜೋರಾಗಿದೆ. ಸಂಜೆ ವೇಳೆಗೆ ಆರಂಭವಾದ ಮಳೆಯಿಂದ ವಾಹನ ಸವಾರರು ಪರದಾಡಿದರು.
ಬೆಂಗಳೂರು, ಚಿಕ್ಕಮಗಳೂರು, ಮಂಡ್ಯ ಜಿಲ್ಲೆಗಳಲ್ಲಿ ಭಾರಿ ಮಳೆ
ಗಾಂಧಿ ನಗರ, ಹಡ್ಸನ್ ಸರ್ಕಲ್, ಜೆ.ಸಿ.ನಗರದಲ್ಲಿ ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡವು. ಕೆ.ಆರ್.ಸರ್ಕಲ್, ಓಕಳಿಪುರಂ, ಕೋರಮಂಗಲ ಅಂಡರ್ಪಾಸ್ನಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.
ವಿಜಯದಶಮಿ ವೇಳೆ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ ಎಚ್ಚರಿಕೆ
ಬೆಂಗಳೂರು ದಸರಾ: ಬಾನೆತ್ತರಕ್ಕೇರಿದ ಬೂದುಗುಂಬಳ, ಹೂವಿನ ದರ
ಪ್ಯಾಲೇಸ್ ಗುಟ್ಟಹಳ್ಳಿ, ಶ್ರೀನಗರ, ಜಯನಗರ, ಚಾಮರಾಜಪೇಟೆ, ಬಸವನಗುಡಿ, ವಿಜಯನಗರ, ಯಶವಂತಪುರ ಸೇರಿದಂತೆ ನಗರದ ವಿವಿಧ ಪ್ರದೇಶಗಳಲ್ಲಿ ಭಾರೀ ಮಳೆಯಾಗಿದೆ. ರಸ್ತೆಗಳು ಜಲಾವೃತಗೊಂಡಿವೆ.
ಸಂಜೆ ವೇಳೆಗೆ ಮಳೆ ಆರಂಭವಾದ ಕಾರಣ ಭರ್ಜರಿ ವ್ಯಾಪಾರದ ನಿರೀಕ್ಷೆಯಲ್ಲಿದ್ದ ವ್ಯಾಪಾರಸ್ಥರು ನಿರಾಸೆಗೊಂಡರು. ಗಾಂಧಿ ಬಜಾರ್ ಸೇರಿದಂತೆ ನಗರದ ವಿವಿಧ ಪ್ರದೇಶಗಳಲ್ಲಿ ರಸ್ತೆಯ ಅಕ್ಕಪಕ್ಕದಲ್ಲಿ ಬಾಳೆಕಂಬ, ಹೂವು, ಕುಂಬಳಕಾಯಿಗಳನ್ನು ಮಾರಾಟಕ್ಕೆ ಹಾಕಿಕೊಳ್ಳಲಾಗಿದೆ.
ಆಯುಧಪೂಜೆ, ವಿಜಯದಶಮಿ, ಶನಿವಾರ, ಭಾನುವಾರ ಹೀಗೆ ನಾಲ್ಕು ದಿನ ಸರಣಿ ರಜೆ ಇದೆ. ಆದ್ದರಿಂದ, ಬೇರೆ ಊರುಗಳಿಗೆ ಹೋಗಲು ಜನರು ತಯಾರಿ ನಡೆಸಿದ್ದರು. ಆದರೆ, ಮಳೆಯ ಕಾರಣ ಮೆಜೆಸ್ಟಿಕ್ ತಲುಪಲು ಸಹ ಜನರು ಪರದಾಡಿದರು.
ಮೆಜೆಸ್ಟಿಕ್ ಸುತ್ತ-ಮುತ್ತ, ಕೆ.ಜಿ.ರಸ್ತೆ, ಕೆ.ಆರ್. ಮಾರುಕಟ್ಟೆ, ಜೆ.ಸಿ.ರಸ್ತೆ ಮುಂತಾದ ಕಡೆ ಸಂಚಾರ ದಟ್ಟಣೆ ಉಂಟಾಗಿದೆ. ಇನ್ನೂ ಮೂರು ದಿನ ನಗರದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.