ಬೆಂಗಳೂರಲ್ಲಿ ಇನ್ನೆರೆಡು ದಿನ ಮಳೆ ಸಾಧ್ಯತೆ:ಇಲಾಖೆ ಮುನ್ಸೂಚನೆ
ಬೆಂಗಳೂರು, ಜು.12: ದಕ್ಷಿಣ ಒಳನಾಡಿನಲ್ಲಿ ನೈಋತ್ಯ ಮುಂಗಾರು ಚುರುಕುಗೊಂಡಿದೆ, ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಕೂಡ ಕಳೆದ ಮೂರುದಿನಗಳಿಂದ ಮೋಡಕವಿದ ವಾತಾವರಣ ನಿರ್ಮಾಣಾಗಿದ್ದು, ಮಂಗಳವಾರ ಅಲ್ಲಲ್ಲಿ ಸಾಧಾರಣ ಮಳೆಯಾಗಿತ್ತು, ಇದೇ ವಾತಾವರಣ ಗುರುವಾರವೂ ಮುಂದುವರೆದಿದ್ದು, ಗುರುವಾರ ಹಾಗೂ ಶುಕ್ರವಾರ ನಗರದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಬೀಳುವ ಸಾಧ್ಯತೆ
ದಕ್ಷಿಣ ಒಳನಾಡು, ಕರಾವಳಿ, ಮಲೆನಾಡಿನಲ್ಲಿ ಮಳೆ ಪ್ರಾರಂಭವಾದಾಗಿನಿಂದ ಬೆಂಗಳೂರಲ್ಲಿ ಮಳೆ ನಿಂತು ಹೋಗಿತ್ತು, ಜೂನ್ ಮಧ್ಯಭಾಗದಿಂದ ಮಳೆಯೇ ಇರಲಿಲ್ಲ, ಹಾಗೆಂದ ಮಾತ್ರ ತಾಪಮಾನದಲ್ಲೇನು ವ್ಯತ್ಯಾಸವಿರಲಿಲ್ಲ, ಮೋಡಕವಿದ ವಾತಾವರಣ ನಿರ್ಮಾಣವಾಗಿದ್ದ ಕಾರಣ ಚಳಿ ನಿರ್ಮಾಣವಾಗಿತ್ತು. ಹಾಗಾಗಿ ತಂಪಿನ ವಾತಾವರಣವೇ ಇತ್ತು.
ಮಳೆ ಬಂದಿರುವುದರಿಂದ ತಾಪಮಾನದಲ್ಲೂ ಇಳಿಕೆಯಾಗಿದೆ. ಇನ್ನೆರಡು ದಿನ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.ಗರಿಷ್ಠ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಇದ್ದು ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇದೆ.
ನಗರದಲ್ಲಿ ಗರಿಷ್ಠ 27.3 ಡಿಗ್ರಿ ಸೆಲ್ಸಿಯಸ್, ಕನಿಷ್ಠ 20 ಡಿಗ್ರಿ ಸೆಲ್ಸಿಯಸ್, ಕೆಐಎಎಲ್ನಲ್ಲಿ ಗರಿಷ್ಠ 28.2 ಡಿಗ್ರಿ ಸೆಲ್ಸಿಯಸ್, ಕನಿಷ್ಠ 19.6 ಡಿಗ್ರಿ ಸೆಲ್ಸಿಯಸ್, ಎಚ್ಎಎಲ್ನಲ್ಲಿ ಗರಿಷ್ಠ 28.9 ಡಿಗ್ರಿ ಸೆಲ್ಸಿಯಸ್ ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.