16- 40ರ ವಯಸ್ಸಿನವರಲ್ಲಿ ಹೆಚ್ಚುತ್ತಿದೆ ಹೃದಯಾಘಾತ! ಯಾರು ಅಪಾಯದಲ್ಲಿ?
ಬೆಂಗಳೂರು, ಆಗಸ್ಟ್ 11: ನಲವತ್ತರ ವಯಸ್ಸು ದಾಟಿದ ಮೇಲೆ ಹೃದಯದ ಬಗ್ಗೆ ಹೆಚ್ಚಿನ ಕಾಳಜಿ ಇರಬೇಕು. ಏಕೆಂದರೆ, ಹೃದಯಾಘಾತದ ಸಾಧ್ಯತೆ ಜಾಸ್ತಿ ಅನ್ನೋ ಮಾತು ಈಗ ಒಂದೆರಡು ವರ್ಷದ ಹಿಂದೆ ಕೇಳಿಬರ್ತಿತ್ತು. ಆದರೆ ಈಗ ಹದಿನಾರನೇ ವಯಸ್ಸಿಗೇ ಹುಷಾರಾಗಿರಿ ಎಂದು ಹೇಳುವ ಪರಿಸ್ಥಿತಿ ಬಂದಿದೆ.
ಏಷ್ಯಾ ಪೆಸಿಫಿಕ್ ದೇಶಗಳಲ್ಲೇ ಬಹಳ ಹೆಸರು ಪಡೆದ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ದಾಖಲಾಗುತ್ತಿರುವ ರೋಗಿಗಳನ್ನು ಕಂಡ ವೈದ್ಯರೇ ದಂಗುಬಡಿದು ಹೋಗಿದ್ದಾರೆ. ಹದಿನಾರರಿಂದ ನಲವತ್ತು ವಯೋಮಾನ ಮಧ್ಯೆ ಹೃದಯಾಘಾತದ ಕಾರಣಕ್ಕೆ ಆಸ್ಪತ್ರೆಗೆ ದಾಖಲಾದವರ ಸಂಖ್ಯೆ ಅಷ್ಟಿದೆ. ನೂರೈವತ್ತು ಮಂದಿ ಯುವ ಜನರೇ ದಾಖಲಾಗಿದ್ದಾರೆ. ಆ ಪೈಕಿ ಎಂಟು ಮಂದಿ ವಯಸ್ಸು ಇಪ್ಪತ್ತೈದಕ್ಕಿಂತ ಕಡಿಮೆ.
ಗರ್ಭಿಣಿಯರಲ್ಲಿ ಹೆಚ್ಚುತ್ತಿರುವ ಹೃದಯಾಘಾತ, ಏನು ಹೇಳತ್ತೆ ಅಧ್ಯಯನ?
ಇದು ತಿಂಗಳ ಲೆಕ್ಕ ಆಯಿತು. ಅದನ್ನು ದಿನದ ಲೆಕ್ಕಕ್ಕೆ ಪರಿವರ್ತಿಸಿದ ಕನಿಷ್ಠ ಮೂರರಿಂದ ನಾಲ್ಕು ಮಂದಿ ಪ್ರತಿ ದಿನ ದಾಖಲಾದಂತೆ ಆಗುತ್ತದೆ. ಪ್ರಿಮೆಚೂರ್ ಕರೋನರಿ ಆರ್ಟರಿ ಡಿಸೀಸ್ (ಪಿಸಿಎಡಿ) ಪ್ರಾಜೆಕ್ಟ್ ಅಡಿಯಲ್ಲಿ ಆಸ್ಪತ್ರೆಯಿಂದ 16-40ರ ವಯೋಮಾನದವರ ಪ್ರಕರಣಗಳ ಬಗ್ಗೆ ಅಧ್ಯಯನ ಮಾಡಲಾಗಿದೆ.
ಹದಿನಾರು ವರ್ಷದ ಬಾಲಕನಿಗೆ ಶಸ್ತ್ರಚಿಕಿತ್ಸೆ
2017ರ ಏಪ್ರಿಲ್ ನಿಂದ ಈಚೆಗೆ 1864 ಮಂದಿ ಯುವ ಸಮುದಾಯದವರು ದಾಖಲಾಗಿದ್ದಾರೆ. ಅಷ್ಟೇ ಏಕೆ, ಆಗಸ್ಟ್ ಹತ್ತನೇ ತಾರೀಕು ಶುಕ್ರವಾರ ಒಂದೇ ದಿನ ಆರು ಮಂದಿ ದಾಖಲಾಗಿದ್ದಾರೆ. ಈಚೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಅತಿ ಚಿಕ್ಕ ವಯಸ್ಸಿನವ ಅಂದರೆ ಹದಿನಾರು ವರ್ಷದ ಬಾಲಕ. ಆತ ಮೂಲತಃ ಆಂಧ್ರ ಪ್ರದೇಶದವನು. ಬೆಂಗಳೂರಿನಲ್ಲಿ ವಾಸವಿದ್ದಾನೆ. ಪ್ರಥಮ ಪಿಯುಸಿ ವಿದ್ಯಾರ್ಥಿಯಾದ ಆತ, ಹೃದಯಾಘಾತದ ಲಕ್ಷಣಗಳನ್ನು ಗ್ಯಾಸ್ಟ್ರಿಕ್ ಅಂದುಕೊಂಡು ಬಿಟ್ಟಿದ್ದ ಎಂದು ವೈದ್ಯರು ಹೇಳುತ್ತಾರೆ. ಬಹುತೇಕ ರೋಗಿಗಳ ಸಮಸ್ಯೆಯೇ ಇದು. ಎದೆಯುರಿಯನ್ನು ಗ್ಯಾಸ್ಟ್ರಿಕ್ ಸಮಸ್ಯೆ ಎಂದು ತಪ್ಪಾಗಿ ತಿಳಿದುಕೊಂಡು ಬಿಡುತ್ತಾರೆ. ಆದರೆ ಪರಿಸ್ಥಿತಿ ತೀರಾ ವಿಕೋಪಕ್ಕೆ ಹೋದಾಗ ಏನಾಗಿದೆ ಅಂತ ಗೊತ್ತಾಗುತ್ತದೆ.
ಕ್ಯಾಬ್ ಚಾಲಕರ ಪ್ರಮಾಣ ಶೇಕಡಾ ಇಪ್ಪತ್ತೈದರಷ್ಟು
ಇನ್ನೂ ವಿಚಿತ್ರ ಏನೆಂದರೆ, ಕೊಲೆಸ್ಟ್ರಾಲ್, ಮಧುಮೇಹ, ಸ್ಥೂಲಕಾಯ ಅಥವಾ ಧೂಮಪಾನ ಇಂಥ ಯಾವುದೇ ಅಭ್ಯಾಸ ಅಥವಾ ಸಮಸ್ಯೆ ಇಲ್ಲದಿದ್ದರೂ ಹೃದಯಾಘಾತವಾದ ಉದಾಹರಣೆಗಳಿವೆ ಎನ್ನುತ್ತಾರೆ ವೈದ್ಯರು. ಜೀವನ ಶೈಲಿಯಲ್ಲಿನ ಬದಲಾವಣೆ, ಆಹಾರ ಪಥ್ಯ, ವಾಯು ಮಾಲಿನ್ಯ, ಒತ್ತಡ ಹಾಗೂ ಕುಟುಂಬದಿಂದ ಬಂದಂಥ ಆರೋಗ್ಯ ಸಮಸ್ಯೆಗಳು ಕೂಡ ಇದಕ್ಕೆ ಕಾರಣ ಎಂದು ಅಭಿಪ್ರಾಯ ಪಡುತ್ತಾರೆ. ಇನ್ನು ಜಯದೇವ ಆಸ್ಪತ್ರೆಗೆ ಬರುವ ಪ್ರಕರಣಗಳ ಪೈಕಿ ಶೇ ನಲವತ್ತೈದರಷ್ಟು ಬೆಂಗಳೂರಿಗರದೇ. ಇನ್ನು ಇತರ ಪ್ರಕರಣಗಳಲ್ಲಿ ಆಯಾ ಜಿಲ್ಲೆಯಲ್ಲಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಇನ್ನು ಇಪ್ಪತ್ತೈದರಷ್ಟು ರೋಗಿಗಳು ಕ್ಯಾಬ್ ಚಾಲಕರು. ಬೇರೆ ಯಾರಿಗೆ ಸಮಸ್ಯೆ ಅಂತ ನೋಡಿದರೆ ನಗರದ ಸಂಚಾರ ದಟ್ಟಣೆ ಹಾಗೂ ಮಾಲಿನ್ಯದಲ್ಲಿ ದಿನಕ್ಕೆ ಒಂದು ಗಂಟೆಗಿಂತ ಹೆಚ್ಚು ಪ್ರಯಾಣ ಮಾಡುವವರಿಗೆ ಅಪಾಯ ಹೆಚ್ಚು ಎನ್ನುತ್ತಾರೆ ವೈದ್ಯರು.
ಸಾಧಿಸಲಾಗದ ಗುರಿ ಇರಿಸಿಕೊಂಡು ಹೆಚ್ಚಿನ ಒತ್ತಡ
ಇಂದಿನ ಯುವಕರಲ್ಲಿ ವಿಪರೀತ ಅನಿಸುವಷ್ಟು ಮಹತ್ವಾಕಾಂಕ್ಷೆಗಳಿವೆ. ಅದು ಕೂಡ ಸಾಧಿಸಲಾರದಂಥ ಗುರಿಗಳನ್ನು ಹಾಕಿಕೊಳ್ಳುತ್ತಾರೆ. ಇದರಿಂದ ಒತ್ತಡ ಹೆಚ್ಚಾಗುತ್ತದೆ. ಇನ್ನು ಪುಟ್ಟ-ಪುಟ್ಟ ಕುಟುಂಬಗಳಾಗಿ, ಸಣ್ಣ ವಯಸ್ಸಿನ ದಂಪತಿಗೆ ಸಾಮಾಜಿಕವಾಗಿ ಒಂದು ಬೆಂಬಲ ಸಿಗುವುದೇ ಇಲ್ಲ. ಇದರಿಂದ ಕೂಡ ಒತ್ತಡ ಬೀಳುತ್ತದೆ. ಈಚೆಗೆ ಲೋಕಸೇವೆ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ಇಪ್ಪತ್ತರ ಹರೆಯದ ಯುವಕರೊಬ್ಬರು ಅತಿಯಾದ ಒತ್ತಡದಿಂದಲೇ ಹೃದಯಾಘಾತಕ್ಕೆ ಒಳಗಾಗಿ ಜಯದೇವ ಆಸ್ಪತ್ರೆಯಲ್ಲಿ ದಾಖಲಾಗಿದ್ದರು ಎಂದು ನೆನಪಿಸಿಕೊಳ್ಳುತ್ತಾರೆ ಜಯದೇವದ ನಿರ್ದೇಶಕರಾದ ಡಾ.ಸಿ.ಎನ್.ಮಂಜುನಾಥ್.
ಹೃದಯಾಘಾತ ಪ್ರಮಾಣ ಪುರುಷರಲ್ಲೇ ಹೆಚ್ಚು
ಇನ್ನು ಹೃದಯಾಘಾತ ಆಗುವವರ ಪೈಕಿ ಶೇಕಡಾ 92ರಷ್ಟು ಮಂದಿ ಪುರುಷರು. ಅದೇ ಮಹಿಳೆಯರಿಗೆ ಸಂತಾನೋತ್ಪತ್ತಿ ಹಾರ್ಮೋನ್ ಗಳು ಹೃದಯಾಘಾತದಿಂದ ರಕ್ಷಿಸುತ್ತವೆ. ಆದರೆ ಬಹಳ ಬೇಗ ಮೆನೋಪಾಸ್ ಎದುರಿಸುವ ಹಾಗೂ ಹಾರ್ಮೋನ್ ಅಸಮತೋಲನದಿಂದ ಮಹಿಳೆಯರಲ್ಲಿ ಕೂಡ ಹೃದಯಾಘಾತದ ಸಾಧ್ಯತೆ ಹೆಚ್ಚು ಎನ್ನುತ್ತಾರೆ ವೈದ್ಯರು.