ತಲೆನೋವು ಪ್ರಾಣಕ್ಕೆ ಕುತ್ತು ತಂದೀತು ಹುಷಾರ್!
ಬೆಂಗಳೂರು, ಅಕ್ಟೋಬರ್ 25: ಸಾಮಾನ್ಯ ತಲೆನೋವು ಅಥವಾ ವಾಂತಿ ಯಾವಾಗಲಾದರೂ ಒಮ್ಮೆ ಕಂಡುಬರುತ್ತದೆ. ಆದರೆ ಇದು ಗಂಭೀರ ಸಮಸ್ಯೆಯೇ? ಈ ಪ್ರಶ್ನೆಗೆ ಉತ್ತರ ಬೇಕೆಂದರೆ ಬಿನು ನಾರಾಯಣ್ ಅವರ ಬಗ್ಗೆ ಹೇಳಬೇಕು. ಇದರಿಂದ ಸಾವಿನ ದವಡೆವರೆಗೆ ಹೋಗಿ ಪಾರಾಗಿ ಬಂದದ್ದನ್ನು ಹೇಳಬೇಕು.
ಬಿನು ನಾರಾಯಣ್ ಎಂದಿನಂತೆ ತಮ್ಮ ದೈನಂದಿನ ಕಾರ್ಯ ಚಟುವಟಿಕೆಯಲ್ಲಿ ತೊಡಗಿದ್ದರು. ಅವರಿಗೆ ಮಧುಮೇಹ ಅಥವಾ ರಕ್ತದೊತ್ತಡ ಇರಲಿಲ್ಲ ಅಥವಾ ಧೂಮಪಾನದ ಅಭ್ಯಾಸವೂ ಇರಲಿಲ್ಲ. 2 ದಿನ ಅವರಿಗೆ ತಲೆಸುತ್ತು ಮತ್ತು ವಾಂತಿ ಕಾಣಿಸಿಕೊಂಡಿದ್ದರಿಂದ ಬೆಂಗಳೂರಿನ ವಾಸವಿ ಆಸ್ಪತ್ರೆಗೆ ಚಿಕಿತ್ಸೆಗೆ ಬಂದರು.
ಅಲ್ಲಿ ವೈದ್ಯರಾದ ಬಿ.ಆರ್.ವೆಂಕಟೇಶ್ ಅವರು ಸಹ ಅಸಹಜವಾದುದೇನನ್ನೂ ಅನುಮಾನಿಸಲಿಲ್ಲ. ಸರಳ ಔಷಧಗಳನ್ನು ನೀಡಿದರು. ಆದರೆ ಸಮಸ್ಯೆ ಪರಿಹಾರವಾಗಲಿಲ್ಲ. ಆದ್ದರಿಂದ ಬಿನು ನಾರಾಯಣ್ ಅವರಿಗೆ ಮೆದುಳಿನ ಸಿಟಿ ಸ್ಕ್ಯಾನ್ ಮಾಡಲು ಸಲಹೆ ನೀಡಲಾಯಿತು. ವೈದ್ಯರ ಅನುಭವ ಮತ್ತು ಬಿನು ನಾರಾಯಣ್ ಅವರಲ್ಲಿ ವರ್ತನೆಯ ಬದಲಾವಣೆಗಳನ್ನು ಗಮನಿಸಿಯೇ ಸಿಟಿ ಸ್ಕ್ಯಾನ್ ಮಾಡಿಸಲು ಸೂಚಿಸಿದರು.[ಆಸ್ತಿ ಮಾರಿ ಆಸ್ಪತ್ರೆಗೆ ಬಂದವರಿಗೆ ಆಗಿದ್ದು ಎಂಥಾ ನಿರಾಸೆ?]
ಸ್ಕ್ಯಾನ್ ಮಾಡಿದಾಗ ಆತನ ಮೆದುಳಿನ ಬಲಭಾಗದಲ್ಲಿ ಬೃಹತ್ ಹೆಮರ್ರಾಜಿಕ್ ಇನ್ ಫ್ರಾಕ್ಷನ್ ಕಂಡು ಬಂದಿತು. ಅಂತಹ ಬೃಹತ್ ಗಡ್ಡೆಗಳು (ಹೆಮರ್ರಾಜಿಕ್ ಇನ್ ಫ್ರಾಕ್ಷನ್) ಮೆದುಳಿನ ಪ್ರಮುಖ ರಚನೆಗಳ ಮೇಲೆ ಗಮನಾರ್ಹ ಒತ್ತಡ ಬೀರುತ್ತವೆ. ಇವುಗಳಿಗೆ ಕೂಡಲೇ ಚಿಕಿತ್ಸೆ ನೀಡದಿದ್ದಲ್ಲಿ ಮಾರಣಾಂತಿಕವಾಗುತ್ತದೆ' ಎಂದು ಡಾ.ವೆಂಕಟೇಶ್ ಹೇಳುತ್ತಾರೆ.
ಮೆದುಳಿನಲ್ಲಿ ರಕ್ತಸ್ರಾವ ಆಗುತ್ತಿದ್ದರಿಂದ ವೆಂಕಟೇಶ್ ಕೂಡಲೇ ನರರೋಗ ತಜ್ಞ ಡಾ.ರಮೇಶ್ ರಂಗನಾಥನ್ ಅವರಲ್ಲಿ ಚಿಕಿತ್ಸೆ ಪಡೆಯಲು ಸೂಚಿಸಿದರು. ಮೆದುಳಿನ ಊತ ಮತ್ತು ಒತ್ತಡವನ್ನು ನಿವಾರಿಸಲು ಔಷಧ ನೀಡಿ, ಎಂಆರ್ಐ ಸ್ಕ್ಯಾನ್ ಮಾಡಲಾಯಿತು. ಅದರಿಂದ ರಕ್ತಸ್ರಾವದ ತೀವ್ರತೆ ತಿಳಿಯುತ್ತದೆ.[ಶಂಕರ ನೇತ್ರಾಲಯದೊಂದಿಗೆ ಇನ್ಫೋಸಿಸ್ ತರಬೇತಿ ಘಟಕ]
ಬಿನು ಅವರಿಗೆ ಸಿಗ್ಮಾಯ್ಡ್ ಸೈನಸ್ ನ ದೊಡ್ಡ ಥ್ರೊಂಬೋಸಿಸ್ ಇದ್ದು, ಅದು ಮೆದುಳಿನ ಬಲಭಾಗದಲ್ಲಿತ್ತು. ಕೂಡಲೇ ಶಸ್ತ್ರಚಿಕಿತ್ಸೆ ಅಗತ್ಯವಾಗಿತ್ತು. ಬಿನು ಅವರಿಗೆ ಡೀಕಂಪ್ರೆಸಿವ್ ಕ್ರೇನಿಯೊಟೊಮಿ ಶಸ್ತ್ರಚಿಕಿತ್ಸೆ ನಿರ್ವಹಿಸುವ ಮೂಲಕ ಮೆದುಳಿಗೆ ಹೊಂದಿಕೊಂಡ ರಚನೆ ಹಾನಿಗೊಳ್ಳದಂತೆ ನೋಡಿಕೊಳ್ಳಬೇಕಿತ್ತು.
ಈ ಶಸ್ತ್ರಚಿಕಿತ್ಸೆ ಅತ್ಯಂತ ಸಂಕೀರ್ಣವಾದುದು ಮತ್ತು ಬಿನು ಅವರ ಪರಿಸ್ಥಿತಿ ತೀವ್ರವಾಗಿ ಕೆಡುತ್ತಿದ್ದರಿಂದ ಅತ್ಯಂತ ತುರ್ತಾಗಿ ನಡೆಸಲಾದ ಶಸ್ತ್ರಚಿಕಿತ್ಸೆಯಾಗಿತ್ತು. ಈ ಶಸ್ತ್ರಚಿಕಿತ್ಸೆಯಲ್ಲಿ ಬುರುಡೆಯ ಪ್ರಮುಖ ಭಾಗವನ್ನು ಹೊರತೆಗೆದು, ಶಸ್ತ್ರಚಿಕಿತ್ಸೆ ನಿರ್ವಹಿಸಿ ಹೆಪ್ಪುಗಟ್ಟಿದ್ದನ್ನು ನಿವಾರಿಸಬೇಕಾಯಿತು.
ಬುರುಡೆಯ ಮೂಳೆಯನ್ನು 3 ತಿಂಗಳ ನಂತರ ಅವರ ಪರಿಸ್ಥಿತಿ ಉತ್ತಮಗೊಂಡ ನಂತರ ಅಲ್ಲಿಯೇ ಕೂರಿಸಲಾಗುತ್ತದೆ. ಶಸ್ತ್ರಚಿಕಿತ್ಸೆಯ ನಂತರ ಬಿನು ವೇಗವಾಗಿ ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ಈಗ ಆರೋಗ್ಯವಾಗಿದ್ದಾರೆ.[ನಾರಾಯಣ ಹೆಲ್ತ್ ಸಿಟಿಯಲ್ಲಿ ಕಡಿಮೆ ಖರ್ಚಿನಲ್ಲಿ ರೋಬೋಟಿಕ್ ಸರ್ಜರಿ]
ಬಿನು ಅವರನ್ನು ಬಾಧಿಸುತ್ತಿದ್ದ ಕಾರ್ಟಿಕಲ್ ಸೈನಸ್ ಥ್ರೊಂಬೊಸಿಸ್ ಅತ್ಯಂತ ಅಪರೂಪ ಮತ್ತು ಮಾರಣಾಂತಿಕ ರೋಗ. ಹತ್ತು ಲಕ್ಷ ಜನರಲ್ಲಿ 3 ರಿಂದ 4 ಮಂದಿಗೆ ಕಾಣಿಸಿಕೊಳ್ಳುತ್ತದೆ. ಶೇ 75ರಿಂದ ಶೇ 80ರಷ್ಟು ಮಹಿಳಾ ರೋಗಿಗಳಾಗಿದ್ದು, ಅವರಲ್ಲಿ ಗರ್ಭಧಾರಣೆ, ಪ್ಯೂಪೆರಿಯಂ, ರಕ್ತಹೀನತೆ, ಅತಿಸಾರ ಮತ್ತು ಹಾರ್ಮೋನಲ್ ರೀಪ್ಲೇಸ್ ಮೆಂಟ್ ಥೆರಪಿಗಳಿಂದ ಉಂಟಾಗುತ್ತದೆ.
ಸಾಮಾನ್ಯವಾದ ತಲೆನೋವು ಉಂಟಾಗಲು ನೂರಾರು ಕಾರಣಗಳಿರಬಹುದು ಮತ್ತು ಅದರಲ್ಲಿ ಒಂದು ಜೀವಹಾನಿ ಉಂಟು ಮಾಡಬಹುದು. ಆದ್ದರಿಂದ ಸಾಮಾನ್ಯ ತಲೆನೋವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ನಿಮ್ಮ ವೈದ್ಯರ ಮಾರ್ಗದರ್ಶನ ಪಡೆಯುವುದು ಉತ್ತಮ.