ಹೋಟೆಲ್ ಉದ್ಯಮದ ಮೂಲಕ ಟೂರಿಸಂ ಬಲವರ್ಧನೆಗೆ ಸಿಎಂ ಸೂಚನೆ
ಬೆಂಗಳೂರು ಆಗಸ್ಟ್ 02 : ಹೋಟೆಲ್ ಉದ್ಯಮದ ಮೂಲಕ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಅಗತ್ಯವಿರುವ ಎಲ್ಲ ಕ್ರಮ ಕೈಗೊಳ್ಳಲು ಎಚ್.ಡಿ.ಕುಮಾರಸ್ವಾಮಿ ಅವರು ಗುರುವಾರ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕರ್ನಾಟಕ ಪ್ರದೇಶ ಹೋಟೆಲ್ ಮತ್ತು ಉಪಹಾರ ಮಂದಿರಗಳ ಸಂಘದ ಪದಾಧಿಕಾರಿಗಳೊಂದಿಗೆ ಇಂದು ತಮ್ಮ ಗೃಹ ಕಚೇರಿ 'ಕೃಷ್ಣಾದಲ್ಲಿ ಚರ್ಚಿಸಿದ ಮುಖ್ಯಮಂತ್ರಿಗಳು, ರಾಜ್ಯದಲ್ಲಿ ಹೋಟೆಲ್ ಉದ್ಯಮವಲ್ಲದೆ ಪ್ರವಾಸೋದ್ಯಮಕ್ಕೂ ವಿಫುಲ ಅವಕಾಶಗಳಿವೆ.
ಹಂಪಿ ಸೇರಿ ರಾಜ್ಯದ ಐದು ಪ್ರವಾಸಿ ತಾಣಗಳ ಅಭಿವೃದ್ಧಿ
ಸಾಂಸ್ಕೃತಿಕ ರಾಜಧಾನಿ ಎನಿಸಿರುವ ಮೈಸೂರು, ವಾಣಿಜ್ಯ ಕೇಂದ್ರವೆನಿಸಿದ ಹುಬ್ಬಳ್ಳಿ, ಕರಾವಳಿಯ ಮಂಗಳೂರು-ಉಡುಪಿ, ಮಲೆನಾಡಿನ ಶಿವಮೊಗ್ಗ, ಘಟ್ಟ ಪ್ರದೇಶವಾದ ಕೊಡಗು ಸೇರಿದಂತೆ, ಉತ್ತರ ಕರ್ನಾಟಕದ ಬೆಳಗಾವಿ ಬೀದರ್, ಗುಲ್ಬರ್ಗ ಮತ್ತಿತರ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲೂ ಅನೇಕ ಪ್ರವಾಸಿ, ಐತಿಹಾಸಿಕ ಮತ್ತು ಧಾರ್ಮಿಕ ಪ್ರೇಕ್ಷಣೀಯ ಸ್ಥಳಗಳಿವೆ.
ಇವುಗಳ ಅಭಿವೃದ್ಧಿಯನ್ನು ಆದ್ಯತೆ ಮೇರೆಗೆ ಕೈಗೊಳ್ಳಲು ಸೂಚನೆ ನೀಡಿದರು. ಶಿವಮೊಗ್ಗವನ್ನು ಕೇಂದ್ರವಾಗಿಟ್ಟುಕೊಂಡು ಸುತ್ತಲಿನ ಉತ್ತರಕನ್ನಡ, ಉಡುಪಿ ಜಿಲ್ಲೆಗಳ ಪ್ರವಾಸಿ ತಾಣಗಳಲ್ಲಿ ಉತ್ತಮ ರಸ್ತೆ, ಪ್ರಯಾಣ ಮತ್ತು ವಸತಿಗೆ ಉತ್ತಮ ವ್ಯವಸ್ಥೆ, ಗೈಡ್ಗಳ ನೇಮಕ ಮುಂತಾದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಮತ್ತು ಸೂಕ್ತ ಮಾಹಿತಿಯನ್ನು ಪ್ರವಾಸಿಗರಿಗೆ ನೀಡುವ ಕಾರ್ಯಕ್ಕೆ ಹೆಚ್ಚಿನ ಒತ್ತು ನೀಡುವಂತೆ ಸೂಚಿಸಿದರು.
ಹೋಟೆಲ್ಗಳ ಪರವಾನಗಿ ನವೀಕರಣ ಹಾಗೂ ಬೆಂಗಳೂರು ನಗರದ ವಸತಿ ಬಡಾವಣೆಗಳ ಹೋಟೆಲ್ಗಳ ಪರವಾನಗಿ ನವೀಕರಣ ಸರಳೀಕರಿಸುವ ಬಗ್ಗೆ ಪರಿಶೀಲಿಸುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದರು. ಸಭೆಯಲ್ಲಿ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾದ ಸುಬ್ರಮಣ್ಯಂ ಉಪಸ್ಥಿತರಿದ್ದರು.