ರಾಜ್ಯ ರಾಜಕೀಯ ಬೆಳವಣಿಗೆ ಬಗ್ಗೆ HDK ಖಡಕ್ ಪ್ರತಿಕ್ರಿಯೆ
ಬೆಂಗಳೂರು, ಜನವರಿ 16: "ನಮಗೆ ಯಾವ ಶಾಸಕರನ್ನೂ ರೆಸಾರ್ಟ್ ಗೆ ಶಿಫ್ಟ್ ಮಾಡುವ ಅಗತ್ಯವಿಲ್ಲ. ಸರ್ಕಾರ ಸುಭದ್ರವಾಗಿದೆ. ನಮ್ಮ ಬಳಿ ಸಂಖ್ಯೆಗಳೂ ಇವೆ. ನನಗೆ ಯಾವ ತಲೆಬಿಸಿಯೂ ಇಲ್ಲ. ರಾಜ್ಯದ ಜನತೆಯನ್ನು ತಪ್ಪುಹಾದಿಗೆ ಎಳೆಯುತ್ತಿರುವವರು ಮಾಧ್ಯಮ ಮಿತ್ರರು" ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಬುಧವಾರ ಮಾಧ್ಯಮ ಮಿತ್ರರನ್ನು ತರಾಟೆಗೆ ತೆಗೆದುಕೊಂಡರು.
ರಾಜ್ಯದಲ್ಲಿ ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ರಾಜಕೀಯ ಬೆಳವಣಿಗೆಯ ಬಗ್ಗೆ ಎಚ್ ಡಿ ಕುಮಾರಸ್ವಾಮಿ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದರು.
ಆಪರೇಷನ್ ಕಮಲ 2ನೇ ಹಂತ: ಎಷ್ಟು ಮಂದಿ ಅತೃಪ್ತ ಶಾಸಕರಿಂದ ರಾಜೀನಾಮೆ?
"ಇಲ್ಲಸಲ್ಲದನ್ನೆಲ್ಲ ಪ್ರಚಾರ ಮಾಡುವ ಮೂಲಕ ಮಾಧ್ಯಮ ಮಿತ್ರರು ತಮ್ಮ ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತಿದ್ದಾರೆ. ಇದರಿಂದ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ. ನಾವೆಲ್ಲರೂ ನಮ್ಮದಿಯಿಂದಲೇ ಇದ್ದೇವೆ. ಬಹುಶಃ ನಿಮಗೆ ನೆಮ್ಮದಿ ಇಲ್ಲದಿರಬಹುದು. ಆದರೆ ನಾವು ಸಾಕಷ್ಟು ನೆಮ್ಮದಿಯಿಂದಿದ್ದೇವೆ" ಎಂದು ಕುಮಾರಸ್ವಾಮಿ ಹೇಳಿದರು.
ಐವರು ಶಾಸಕರೂ ಸಂಪರ್ಕದಲ್ಲಿದ್ದಾರೆ!
"ಶಾಸಕ ರಮೇಶ್ ಜಾರಕಿಹೊಳಿ ಸೇರಿದಂತೆ ಆರು ಶಾಸಕರು ಕಾಂಗ್ರೆಸ್ ನಿಂದ ಆಚೆ ಹೋಗಲು ಸಿದ್ಧರಿದ್ದಾರೆ ಎಂಬ ವದಂತಿ ಕಳೆದ ಎರಡು ದಿನಗಳಿಂದ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಈ ಆರು ಶಾಸಕರೂ ಮಾಧ್ಯಮಗಳಿಗೆ ನಾಟ್ ರೀಚೇಬಲ್ ಇರಬಹುದು. ಆದರೆ ನಮಗೆ ಅವರು ರೀಚೇಬಲ್. ಅವರೆಲ್ಲರೂ ನಮ್ಮ ಸಂಪರ್ಕದಲ್ಲೇ ಇದ್ದಾರೆ" ಎಂದು ಎಚ್ ಡಿ ಕುಮಾರಸ್ವಾಮಿ ಮಾಧ್ಯಮಗಳಿಗೆ ಹೇಳಿದರು.
ಈ ರಾಜಕೀಯ ನನಗಷ್ಟೇ ಗೊತ್ತು!
ಕರ್ನಾಟಕದ ರಾಜಕೀಯ ಬೆಳವಣಿಗೆ ನನಗಷ್ಟೇ ಗೊತ್ತು. ಆದ್ದರಿಂದ ನಾನು ನೆಮ್ಮದಿಯಿಂದಲೇ ಇದ್ದೇನೆ. ನಾಯಕರೆಲ್ಲರೂ ನೆಮ್ಮದಿಯಿಂದಲೇ ಇದ್ದೇವೆ. ಬಹುಶಃ ಟೆನ್ಷನ್ ಮಾಡಿಕೊಳ್ಳುತ್ತಿರುವವರು ನೀವೇ(ಮಾಧ್ಯಮ)ಅನ್ನಿಸುತ್ತೆ. ಕಾಂಗ್ರೆಸ್ ಉಸ್ತುವಾರಿ ಕೆ ಸಿ ವೇಣುಗೋಪಾಲ್ ಅವರೊಂದಿಗೆ ನಾನು ಹುಡುಗಾಟ ಆಡುವ ಅಗತ್ಯವಿಲ್ಲ. ಹೈಕಮಾಂಡಿಗೆ ಎಷ್ಟು ಗೌರವ ನೀಡಬೇಕೋ ನೀಡುತ್ತಿದ್ದೇನೆ. ನಮ್ಮಲ್ಲಿ ಯಾವುದೇ ಅಸಮಾಧಾನವಿಲ್ಲ. ಸರ್ಕಾರ ಸುಭದ್ರವಾಗಿದೆ ಎಂದು ಅವರು ಹೇಳಿದರು.
ದೇವೇಗೌಡ್ರ ಮನೆಯಲ್ಲಿ ಕುಮಾರಸ್ವಾಮಿ: ಮಣ್ಣಿನಮಗನ ಆಟವ ಬಲ್ಲವರಾರು?
ಯಡಿಯೂರಪ್ಪ ಅವರನ್ನು ಕೇಳಿ!
ಬಿಜೆಪಿ ಶಾಸಕರಮನ್ನು ಮುಂಬೈ ಮತ್ತು ಗುರುಗ್ರಾಮ(ಗುರ್ಗಾಂವ್)ದಲ್ಲಿ ಯಾಕೆ ಕೂಡಿಹಾಕ್ಕೊಂಡಿದ್ದಾರೆ ಎಂಬುದನ್ನು ಯಡಿಯೂರಪ್ಪ ಅವರನ್ನು ಕೇಳಬೇಕು. ಅದರ ಬಗ್ಗೆ ನನಗೆ ಹೇಗೆ ಗೊತ್ತಿರಬೇಕು ಎಂದು ಎಚ್ ಡಿ ಕುಮಾರಸ್ವಾಮಿ ಕೇಳಿದರು. ಅತ್ತ ಗುರುಗ್ರಾಮದಲ್ಲಿ ಬಿಜೆಪಿ ಶಾಸಕರು ತಂಗಿರುವ ಹೊಟೇಲ್ ಬಳಿ ಕಾಂಗ್ರೆಸ್ ಧರಣಿ ನಡೆಸುತ್ತಿದೆ.
ಯಾವೆಲ್ಲ ಶಾಸಕರು ನಾಪತ್ತೆ?
ಕಾಂಗ್ರೆಸ್ಸಿನಿಂದ ಹೊರ ಹೋಗಲು ಸಿದ್ಧರಿದ್ದು, ಸದ್ಯಕ್ಕೆ ನಾಪತ್ತೆಯಾಗಿರುವ ಶಾಸಕರೆಂದರೆ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ಬಳ್ಳಾರಿ ಗ್ರಾಮಾಂತರ ಶಾಸಕ ನಾಗೇಂದ್ರ, ಚಿಂಚೋಳಿ ಶಾಸಕ ಉಮೇಶ್ ಜಾಧವ್, ಅಥಣಿ ಶಾಸಕ ಮಹೇಶ್ ಕುಮಟಳ್ಳಿ , ಹಗರಿಬೊಮ್ಮನಳ್ಳಿ ಶಾಸಕ ಭೀಮಾ ನಾಯ್ಕ್ , ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಮತ್ತು ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್. ಈ ಆರು ಜನ ಸದ್ಯಕ್ಕೆ ಸಮ್ಮಿಸ್ರ ಸರ್ಕಾರಕ್ಕೆ ದುಃಸ್ವಪ್ನವಾಗಿದ್ದಾರೆ.