ದೇವೇಗೌಡರಿಂದ ಕಾವೇರಿಗಾಗಿ ಉಪವಾಸ ಸತ್ಯಾಗ್ರಹ
ಬೆಂಗಳೂರು, ಅಕ್ಟೋಬರ್ 01: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರು ಅಹೋರಾತ್ರಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಸುಪ್ರೀಂಕೋರ್ಟಿನಿಂದ ಮತ್ತೆ ಮತ್ತೆ ಅನ್ಯಾಯವಾಗುತ್ತಿದೆ. ನ್ಯಾಯಕ್ಕಾಗಿ ಆಗ್ರಹಿಸಿ ಅನಿರ್ಧಿಷ್ಟಾವಧಿ ಉಪವಾಸ ಕೂರುತ್ತಿದ್ದೇನೆ ಎಂದು ದೇವೇಗೌಡ ಅವರು ಹೇಳಿದರು. ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಕೂಡಾ ಈಗ ದೇವೇಗೌಡರ ಜತೆಗೂಡಿದ್ದಾರೆ.
ಉಪವಾಸ ಕೂರುವುದಕ್ಕೂ ಮುನ್ನ ಬಸವನಗುಡಿಯ ಕಾರಂಜಿ ಆಂಜನೇಯ ದೇಗುಲ, ಕೋಟೆ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಎಚ್ ಡಿ ದೇವೇಗೌಡ ಅವರು, ವಿಶೇಷ ಪೂಜೆ ಸಲ್ಲಿಸಿದರು. ದೇವೇಗೌಡರ ಜತೆ ವೈಎಸ್ ವಿ ದತ್ತಾ, ಜೆಡಿಎಸ್ ಶಾಸಕ ಶರವಣ ಅವರಿದ್ದರು. [ ದೇವೇಗೌಡರ ಕಂಬನಿ: ಕಾವೇರಿ ವಿಷ್ಯದಲ್ಲಿ ಕರ್ನಾಟಕಕ್ಕೆ ಅನ್ಯಾಯ]
ಕಾವೇರಿ ನಿರ್ವಹಣಾ ಮಂಡಳಿ ರಚನೆ ವಿರುದ್ಧ ಸುಪ್ರೀಂಕೋರ್ಟಿನಲ್ಲಿ ಅರ್ಜಿಸಲ್ಲಿಸಬೇಕಿದೆ. ಈ ಬಗ್ಗೆ ಸಮರ್ಥವಾದ ವಾದ ಮಂಡಿಸಲು ಅವಕಾಶವೇ ನೀಡದಿದ್ದರೆ ಹೇಗೆ? ಮೂರು ದಿನದೊಳಗೆ ಸಾವಿರಾರು ಕ್ಯೂಸೆಕ್ಸ್ ನೀರು ಹರಿಸುವಂತೆ ಮತ್ತೆ ಸೂಚಿಸಿರುವುದು ಅನ್ಯಾಯ. ತಜ್ಞರ ಸಮಿತಿ ಬಂದು ಇಲ್ಲಿನ ವಸ್ತುಸ್ಥಿತಿ ಪರಿಶೀಲಿಸಲು ಬಿಡುತ್ತಿಲ್ಲ. ಕೋರ್ಟ್ ಆದೇಶದಿಂದ ಮನನೊಂದಿದ್ದೇನೆ ಎಂದು ದೇವೇಗೌಡರು ಹೇಳಿದರು.[ಕಾವೇರಿ ನೀರು ಬಿಡುವ ಅಗತ್ಯವಿಲ್ಲ: ಸಿದ್ದುಗೆ ಎಚ್ಡಿಡಿ ಸಲಹೆ]
ಮೂರು ದಿನದೊಳಗೆ ಬೆಳೆ ನಾಶವಾಗುತ್ತದೆ ಎಂದು ತಮಿಳುನಾಡು ವಾದಿಸಿರುವುದನ್ನು ಕೇಳಿ, ನನ್ನ ರಾಜಕೀಯ ಜೀವನದಲ್ಲಿ ಇಂಥ ಸುಳ್ಳಲು ಕೇಳಿಯೇ ಇಲ್ಲ ಎಂದು ಇತ್ತೀಚೆಗೆ ಕಣ್ಣೀರಿಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.
ಉಭಯ ರಾಜ್ಯಗಳ ನಡುವೆ ಸಂಧಾನ ಮಾತುಕತೆ ಸಭೆ ನಡೆಸಿದ್ದ ಕೇಂದ್ರ ಜಲ ಸಂಪನ್ಮೂಲ ಸಚಿವೆ ಉಮಾ ಭಾರತಿ ಅವರು ಕೂಡಾ ಕಾವೇರಿ ವಿಷಯವಾಗಿ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಘೋಷಿಸಿದ್ದಾರೆ. ಕಾವೇರಿ ವಿವಾದ ತಾರಕಕ್ಕೇರಿ ಉಭಯ ರಾಜ್ಯಗಳ ಶಾಂತಿಗೆ ಧಕ್ಕೆ ಉಂಟಾದರೆ ಅನಿರ್ಧಿಷ್ಟಾವಧಿ ಉಪವಾಸ ಕೂರುತ್ತೇನೆ ಎಂದಿದ್ದಾರೆ.