ಕೆಸಿ ವ್ಯಾಲಿ ಮೂಲಕ ಕೋಲಾರಕ್ಕೆ ನೀರು ಹರಿಸದಂತೆ ಹೈಕೋರ್ಟ್ ಆದೇಶ
Recommended Video
ಕೋಲಾರ, ಜು.25: ಕೋರಮಂಗಲ-ಚೆಲ್ಲಘಟ್ಟ ವ್ಯಾಲಿ(ಕೆಸಿ ವ್ಯಾಲಿ) ಯೋಜನೆ ಮೂಲಕ ಕೋಲಾರ ಜಿಲ್ಲೆಯ ಕೆರೆಗಳಿಗೆ ನೀರುವ ಹರಿಸುವ ಕಾರ್ಯಕ್ಕೆ ಮೊದಲ ಹಿನ್ನಡೆಯಾಗಿದೆ. ಆಗಸ್ಟ್ 1ರವರೆಗೆ ಕೆಸಿ ವ್ಯಾಲಿ ನೀರನ್ನು ಕೋಲಾರ ಜಿಲ್ಲೆಯ ಕೆರೆಗಳಿಗೆ ಹರಿಸದಂತೆ ಹೈಕೋರ್ಟ್ ಆದೇಶ ನೀಡಿದೆ.
ಆಗಸ್ಟ್ 1ರ ಒಳಗೆ ನೀರಿನ ಗುಣಮಟ್ಟದ ವರದಿಯನ್ನು ನೀಡುವಂತೆ ಅಧಿಕಾರಿಗಳಿಗೆ ನ್ಯಾಯಾಧೀಶ ದಿನೇಶ್ ಮಹೇಶ್ವರಿ ಸೂಚನೆ ನೀಡಿದ್ದಾರೆ. ಕೆಸಿ ವ್ಯಾಲಿ ನೀರಿನ ಗುಣಮಟ್ಟ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಲಯ ನೀರಿನ ಗುಣಮಟ್ಟ ಪೂರ್ಣ ವರದಿಯನ್ನು ಹೈಕೋರ್ಟ್ಗೆ ಸಲ್ಲಿಸುವರೆಗೂ ನೀರು ಹರಿಸಬಾರದು ಎಂದು ತಿಳಿಸಿದೆ.
ಕೆಸಿ ವ್ಯಾಲಿ, ಪೈಪ್ ದುಡ್ಡು ಹೊಡೆಯೋ ಯೋಜನೆ: ಜೆಡಿಎಸ್ ಅಭ್ಯರ್ಥಿ ಬಚ್ಚೇಗೌಡ ಸಂದರ್ಶನ
ನೀರಿನ ಗುಣಮಟ್ಟದ ಬಗ್ಗೆ ನೀಡಿರುವ ವರದಿಗಳನ್ನು ಪರಿಶೀಲಿಸಿರುವ ನ್ಯಾಯಪೀಠ ಅತೃಪ್ತಿ ವ್ಯಕ್ತಪಡಿಸಿ, ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು. ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್. ಆಂಜನೇಯ ರೆಡ್ಡಿ ಮತ್ತಿತರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಆಲಿಸಿದ ದಿನೇಶ್ ಮಹೇಶ್ವರಿ ಮತ್ತು ನ್ಯಾ. ಆರ್ ದೇವದಾಸ್ ಅವರಿದ್ದ ಪೀಠ ಮುಂದಿನ ಆದೇಶದವರೆಗೆ ಕೆರೆಗೆ ನೀರು ಹರಿಸಬಾರದು ಎಂದು ಮಧ್ಯಂತರ ಆದೇಶ ನೀಡಿದೆ.
ನೀರಿನ ಗುಣಮಟ್ಟದ ಪ್ರಶ್ನೆ ಕುರಿತಾಗಿ ಕೋಲಾರ-ಚಿಕ್ಕಬಳ್ಳಾಪುರ ಶಾಶ್ವತ ನೀರಾವರಿ ಹೋರಾಟ ಸಮಿತಿಯ ವತಿಯಿಂದ ಹೈಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿತ್ತು. ಇತ್ತೀಚೆಗೆ ಬೆಳ್ಳಂದೂರು ಕೆರೆಯಲ್ಲಿ ನೊರೆ ಬರುವಂತೆ ಕೆಸಿ ವ್ಯಾಲಿಯಲ್ಲೂ ಬಂದ ಪರಿಣಾಮ ಬಂದ ಹಿನ್ನೆಲೆಯ ಸಾರ್ವಜನಿಕರು ಹಲವಾರು ಊಹಾಪೋಹಗಳಿಗೂ ಕಾರಣವಾಗಿತ್ತು. ಇಂದು ಪಿಐಎಲ್ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಾಧೀಶರು ನೀರು ಹರಿಸುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಸೂಚಿಸಿದ್ದಾರೆ.
ಅಂತರ್ಜಲ ಹೆಚ್ಚಳ ಉದ್ದೇಶದಿಂದ ನೀವು ಹರಿಸುತ್ತಿರುವ ನೀರು, ಕುಡಿಯುವ ನೀರನ್ನು ಕಲುಷಿತಗೊಳಿಸುವುದಿಲ್ಲ ಎಂಬುದಕ್ಕೆ ದಾಖಲೆ ಏನಿದೆ, ಯೋಜನೆಗೆ ನ್ಯಾಯಾಲಯದ ವಿರೋಧವಿಲ್ಲ, ಆದರೆ ನೀರನ್ನು ಶ್ರೇಷ್ಠ ತಂತ್ರಜ್ಞಾನ ಬಳಸಿ ಸಂಸ್ಕರಿಸಬೇಕು, ಅದರಿಂದ ಯಾವುದೇ ಮಾಲಿನ್ಯವಾಗಬಾರದು. ಜನರ ಆರೋಗ್ಯದ ಮೇಲೆ ಪರಿಣಾಮ ಬೀರಬಾರದು ಎಂಬುದಷ್ಟೇ ನಮ್ಮ ಕಾಳಜಿ ಎಂದು ನ್ಯಾಯಪೀಠ ಹೇಳಿದೆ.