ನಾಯಿಗೆ ಲೈಸೆನ್ಸ್: ಬಿಬಿಎಂಪಿಯಿಂದ ವಿವರಣೆ ಕೇಳಿದ ಹೈಕೋರ್ಟ್
ಬೆಂಗಳೂರು, ಜೂನ್ 16: ಬಿಬಿಎಂಪಿಯು ಸಾಕು ನಾಯಿಗಳಿಗೆ ಪರವಾನಗಿ ಕಡ್ಡಾಯಗೊಳಿಸಿರುವ ಅರ್ಜಿ ಸಂಬಂಧ ಹೈಕೋರ್ಟ್, ಬಿಬಿಎಂಪಿಯಿಂದ ವಿವರವಾದ ಮಾಹಿತಿ ಕೇಳಿದೆ.
ಎನ್ಜಿಇಎಫ್ ಪೂರ್ವ ಬಡಾವಣೆಯ ಇಂದಿರಾ ಗೋಪಾಲಕೃಷ್ಣ ಮತ್ತಿತರು ಸಲಲ್ಇಸಿರುವ ಪಿಐಎಲ್ ವಿಭಾಗೀಯ ಪೀಠದ ಮುಂದೆ ಶುಕ್ರವಾರ ವಿಚಾರಣೆಗೆ ಬಂದಿತು. ಆಗ ನ್ಯಾಯಪೀಠ ಕೇಳಿದ ಯಾವ ಪ್ರಶ್ನೆಗೂ ಅರ್ಜಿದಾರ ಪರ ವಕೀಲರು ಸರಿಯಾದ ಉತ್ತರ ನೀಡಲಿಲ್ಲ ಹಾಗಾಗಿ ನ್ಯಾಯಪೀಠ ಅರ್ಜಿದಾರರ ವಕೀಲರಿಗೆ ವಾದ ಮಂಡನೆಗೆ ಸೂಕ್ತ ಸಿದ್ಧತೆಯೊಂದಿಗೆ ಬರುವಂತೆ ಸೂಚನೆ ನೀಡಿ ಜೂ.20ಕ್ಕೆ ಮುಂದೂಡಿತು.
ಬೆಂಗಳೂರಿನಲ್ಲಿ ನಾಯಿ ಸಾಕಲು ಇನ್ನು ಲೈಸೆನ್ಸ್ ಕಡ್ಡಾಯ
ನ್ಯಾಯಪೀಠದಲ್ಲಿದ್ದ ನ್ಯಾ. ಕೃಷ್ಣ ದೀಕ್ಷಿತ್ ನಾಯಿಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಹಿಂದೆ ಕೆಲವು ತೀರ್ಪುಗಳನ್ನು ನೀಡಿದೆ. ಅವುಗಳನ್ನು ನೋಡಿದ್ದೀರಾ ಎಂದು ಅರ್ಜಿದಾರರನ್ನು ಕೇಳಿದರು. ಕಾನೂನಿನ ಪ್ರಕಾರ ನಾಯಿಗಳನ್ನು ನಿಯಂತ್ರಿಸುವ ಹಕ್ಕು ಪಾಲಿಕೆಗೆ ಇಲ್ಲವೇ ಎಂದು ಪ್ರಶ್ನಿಸಿದರು.
ಅಲ್ಲದೆ ಪಾಲಿಕೆ ಪರ ವಕೀಲರಾದ ವಿ. ಶ್ರೀನಿಧಿ ಅವರಿಗೆ ಅರ್ಜಿದಾರರು ಪ್ರಶ್ನಿಸಿರುವ ಅಂಶದ ಬಗ್ಗೆ ಬಿಬಿಎಂಪಿಯಿಂದ ವಿವರ ಪಡೆದು ಸಲ್ಲಿಸುವಂತೆ ಸೂಚಿಸಲಾಯಿತು. ಹೈಕೋರ್ಟ್ನ ವಿಭಾಗೀಯ ಪೀಠ 2012ರಲ್ಲಿ ನೀಡಿರುವ ತೀರ್ಪು ಆಧರಿಸಿ ಹಾಗೂ ನಿಯಮಗಳಿಗೆ ಅನುಗುಣವಾಗಿಯೇ ಬಿಬಿಎಂಪಿ ಸಾಕು ನಾಯಿಗಳಿಗೆ ಪರವಾನಗಿ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ಇದರಲ್ಲಿ ಯಾವುದೇ ಲೋಪವಾಗಿಲ್ಲ ಎಂದು ಶ್ರೀನಿಧಿ ನ್ಯಾಯಪೀಠಕ್ಕೆ ತಿಳಿಸಿದರು.