ಒತ್ತುವರಿಗೆ ಸಹಕರಿಸಿದವರ ವಿರುದ್ಧದ ತನಿಖೆಗೆ ತಡೆಯಾಜ್ಞೆ ಇಲ್ಲ
ಬೆಂಗಳೂರು, ಆಗಸ್ಟ್ 23 : ರಾಜ ಕಾಲುವೆ ಒತ್ತುವರಿಗೆ ಸಹಕಾರ ನೀಡಿದ ಅಧಿಕಾರಿಗಳ ವಿರುದ್ಧದ ತನಿಖೆಗೆ ತಡೆಯಾಜ್ಞೆ ನೀಡಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ. ಬಿಎಂಟಿಎಫ್ ನಡೆಸುವ ವಿಚಾರಣೆಗೆ ಸಹಕಾರ ನೀಡಿ ಎಂದು ಸೂಚನೆ ನೀಡಿದೆ.
ಕರ್ನಾಟಕ ಸರ್ಕಾರದ ಆದೇಶದಂತೆ ಬೆಂಗಳೂರು ಮಹಾನಗರ ಕಾರ್ಯಪಡೆ (ಬಿಎಂಟಿಎಫ್) ರಾಜ ಕಾಲುವೆ ಒತ್ತುವರಿಗೆ ಸಹಕಾರ ನೀಡಿದ 20 ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದೆ. ಇದನ್ನು ಪ್ರಶ್ನಿಸಿ ಕೆಲವು ಅಧಿಕಾರಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು.[ರಾಜ ಕಾಲುವೆ ಒತ್ತುವರಿ, ಈಗ ಅಧಿಕಾರಿಗಳಿಗೆ ಶಿಕ್ಷೆ]
ಮಂಗಳವಾರ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಬಿಎಂಟಿಎಫ್ ತನಿಖೆಗೆ ತಡೆಯಾಜ್ಞೆ ನೀಡಲು ನಿರಾಕರಿಸಿತು. ಅಧಿಕಾರಿಗಳನ್ನು ಬಂಧಿಸದಂತೆ ಬಿಎಂಟಿಎಫ್ಗೆ ಸೂಚನೆ ನೀಡಿತು ಮತ್ತು ಅಧಿಕಾರಿಗಳು ವಿಚಾರಣೆಗೆ ಸಹಕಾರ ನೀಡಬೇಕು ಎಂದು ನಿರ್ದೇಶನ ನೀಡಿತು.[ಬಿಬಿಎಂಪಿ ತೆರವು ಕಾರ್ಯಾಚರಣೆ ಬಂದ್ ಮಾಡಿದ್ದೇಕೆ?]
20 ಅಧಿಕಾರಿಗಳ ವಿರುದ್ಧ ಎಫ್ಐಆರ್ : ಕರ್ನಾಟಕ ಮುನ್ಸಿಪಲ್ ಕಾಯ್ದೆ 477 (ಡಿ) ಪ್ರಕಾರ ತಮಗೆ ರಕ್ಷಣೆ ಇದ್ದು, ಸರ್ಕಾರ ಕ್ರಿಮಿನಲ್ ಪ್ರಕರಣ ದಾಖಲಿಸಲು ಆದೇಶಿಸಿರುವುದು ಸರಿಯಲ್ಲ. ಆದ್ದರಿಂದ, ಬಿಎಂಟಿಎಫ್ನಲ್ಲಿ ದಾಖಲಾಗಿರುವ ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ಅರ್ಜಿಯಲ್ಲಿ ಅಧಿಕಾರಿಗಳು ಮನವಿ ಮಾಡಿದ್ದರು.['ಜೆ.ಪಿ.ನಗರವೋ ಮತ್ತೊಂದು ನಗರವೋ ಒತ್ತುವರಿ ತೆರವು ಖಚಿತ']
ಸಿದ್ದರಾಮಯ್ಯ ಖಡಕ್ ಆದೇಶ : ಒಂದು ಕಡೆ ಒತ್ತುವರಿಯಾದ ಮನೆಗಳನ್ನು ತೆರವುಗೊಳಿಸಲಾಗುತ್ತಿದೆ. ಮತ್ತೊಂದು ಕಡೆ ಒತ್ತುವರಿಗೆ ಸಹಾಯ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ ನೀಡಿದ್ದರು.[ಒತ್ತುವರಿ ತೆರವಿಗೆ ತೊಂದರೆ ಇಲ್ಲ ಎಂದ ದರ್ಶನ್]
ರಾಜ ಕಾಲುವೆ ಒತ್ತುವರಿ ಸಂಬಂಧ 20 ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಅವರು ಒಪ್ಪಿಗೆ ನೀಡಿದ್ದರು. ಇವರಲ್ಲಿ 13 ಮಂದಿ ಹಾಲಿ ಮತ್ತು 7 ಮಂದಿ ನಿವೃತ್ತ ಅಧಿಕಾರಿಗಳು ಸೇರಿದ್ದಾರೆ. ಹಾಲಿ ಅಧಿಕಾರಿಗಳನ್ನು ಅಮಾನತು ಮಾಡಲು ಸಿದ್ದರಾಮಯ್ಯ ಸೂಚನೆ ಕೊಟ್ಟಿದ್ದರು.