ಯಶ್ ಗೆ ಬಾಡಿಗೆ ಮನೆ ತೊರೆಯುವಂತೆ ಸೂಚಿಸಿದ ಹೈಕೋರ್ಟ್
ಬೆಂಗಳೂರು, ಸೆಪ್ಟೆಂಬರ್ 06: ರಾಕಿಂಗ್ ಸ್ಟಾರ್ ಯಶ್ ಅವರ ಬಾಡಿಗೆ ಮನೆ ವಿವಾದ ಸುಮಾರು ಮೂರುವರೆ ವರ್ಷಗಳ ನಂತರ ಅಂತಿಮ ಹಂತ ತಲುಪಿದೆ. ಮನೆ ಬಾಡಿಗೆ ವಿಚಾರವಾಗಿ ಹೈಕೋರ್ಟ್ ಮೆಟ್ಟಿಲೇರಿದ್ದ ಯಶ್ ಕುಟುಂಬಕ್ಕೆ ಹಿನ್ನಡೆಯಾಗಿದೆ.
42ನೇ ಸಿಟಿ ಸಿವಿಎಲ್ ನ್ಯಾಯಾಲಯವು ಏಪ್ರಿಲ್ ತಿಂಗಳಿನಲ್ಲಿ ನೀಡಿದ್ದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ. ಮನೆ ಬಾಡಿಗೆ ಪಾವತಿಸಿ, ಇಲ್ಲವೇ ಮನೆ ಖಾಲಿ ಮಾಡಿ ಎಂದು ನಟ ಯಶ್ ತಾಯಿಗೆ ನಿರ್ದೇಶಿಸಿದೆ. ಹೀಗಾಗಿ, 23.27 ಲಕ್ಷ ರೂ. ಬಾಡಿಗೆ ಪಾವತಿಸಿ, ಮುಂದಿನ ಮಾರ್ಚ್ 31ರ ವರೆಗೆ ಇರಬಹುದಾಗಿದೆ. ಬಾಡಿಗೆ ಹಣ ನೀಡದಿದ್ದರೆ ಡಿಸೆಂಬರ್ ತಿಂಗಳೊಳಗೆ ಖಾಲಿ ಮಾಡಬೇಕಾಗುತ್ತದೆ.
ಯಶ್ 3 ತಿಂಗಳೊಳಗೆ ಮನೆ ಖಾಲಿ ಮಾಡ್ಬೇಕ್!
ನ್ಯಾಯಮೂರ್ತಿಗಳಾದ ಬೋಪಣ್ಣ, ಶ್ರೀನಿವಾಸ್ ಹರೀಶ್ಕುಮಾರ್ ಅವರನ್ನೊಳಗೊಂಡ ಹೈಕೋರ್ಟ್ ದ್ವಿಸದಸ್ಯ ಪೀಠವು ಈ ರೀತಿ ಆದೇಶಿಸಿದೆ. 3 ತಿಂಗಳಿನಲ್ಲಿ ಮನೆ ಖಾಲಿ ಮಾಡಬೇಕು ಎಂದು ಸೆಷನ್ಸ್ ಕೋರ್ಟ್ ಆದೇಶವನ್ನು ಪ್ರಶ್ನಿಸಿ ಯಶ್ ತಾಯಿ ಪುಷ್ಪಾ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಯಶ್ ಅವರ ಕುಟುಂಬ ಬಾಡಿಗೆ ನೀಡಿಲ್ಲ. ಅಲ್ಲದೇ ಅವರು ಬೇರೆ ಮನೆಯಲ್ಲಿ ವಾಸವಾಗಿದ್ದರೂ, ಬೀಗವನ್ನು ಹಾಕಿ ಬಾಡಿಗೆ ಮನೆಯನ್ನು ತಮ್ಮ ಸುಪರ್ದಿಯಲ್ಲಿಯೇ ಇಟ್ಟುಕೊಂಡಿದ್ದಾರೆ ಎಂದು ಬನಶಂಕರಿ ಮೂರನೇ ಹಂತ ಕತ್ರಿಗುಪ್ಪೆಯಲ್ಲಿರುವ ಮನೆಯ ಮಾಲೀಕ ಮುನಿಪ್ರಸಾದ್ ಹಾಗೂ ಡಾ. ವನಜಾ ದಂಪತಿ ಅವರು ಯಶ್ ಕುಟುಂಬದ ವಿರುದ್ಧ ಆರೋಪ ಹೊರೆಸಿ, ಕೋರ್ಟ್ ಮೆಟ್ಟಿಲೇರಿದ್ದರು.
'ಅದೃಷ್ಟ'ದ ಮನೆ ತೊರೆಯಲು ಸಿದ್ಧರಾದ ರಾಕಿಂಗ್ ಸ್ಟಾರ್ ಯಶ್
ಏನಿದು ವಿವಾದ: ಬನಶಂಕರಿ ಮೂರನೇ ಹಂತದ ಮೂರನೇ ಬ್ಲಾಕ್ ಕತ್ರಿಗುಪ್ಪೆಯಲ್ಲಿರುವ ಮನೆ ನಂಬರ್ 757 ರಲ್ಲಿ 2010ರಿಂದ ನಟ ಯಶ್ ಬಾಡಿಗೆಗೆ ವಾಸವಾಗಿದ್ದರು. ಅಂದು ಮಾಡಿಕೊಂಡಿದ್ದ ಬಾಡಿಗೆ ಕರಾರಿನ ಪ್ರಕಾರ 40 ಸಾವಿರ ರೂ.ಗೆ ನಟ ಯಶ್ ತಾಯಿ ಪುಷ್ಪಾ ಬಾಡಿಗೆ ಮನೆ ಪಡೆದುಕೊಂಡಿದ್ದರು. ಒಂದು ವರ್ಷದವರೆಗೆ ಬಾಡಿಗೆ ನೀಡಿದ್ದ ಯಶ್ ಕುಟುಂಬ, ನಂತರ ಬಾಡಿಗೆ ನೀಡಿಲ್ಲ ಎಂದು ಮುನಿಪ್ರಸಾದ್ ಆರೋಪಿಸಿದ್ದಾರೆ.