ಸಿ.ವಿ.ರಾಮನ್ ನಗರಕ್ಕೆ ಎಚ್.ಸಿ.ಮಹದೇವಪ್ಪ ಅಭ್ಯರ್ಥಿ?
ಬೆಂಗಳೂರು, ಡಿಸೆಂಬರ್ 29 : ಬೆಂಗಳೂರಿನ ಸಿ.ವಿ.ರಾಮನ್ ನಗರ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಅಂತಿಮವಾಗಿದೆ?. ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸ್ಪರ್ಧೆಗೆ ಒಪ್ಪಿಗೆ ಸಿಕ್ಕಿದೆ ಎಂಬ ಸುದ್ದಿ ಹಬ್ಬಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಪರಮಾಪ್ತರಾದ ಎಚ್.ಸಿ.ಮಹದೇವಪ್ಪ ಕ್ಷೇತ್ರ ಬದಲಾವಣೆ ಮಾಡಲಿದ್ದಾರೆ. ಬೆಂಗಳೂರಿನ ಸಿ.ವಿ.ರಾಮನ್ ನಗರದಿಂದ ಅವರು 2018ರ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಒಂದು ವಾರದಿಂದ ಹಬ್ಬಿತ್ತು.
ಬೆಂಗಳೂರು ರಾಜಕೀಯ : ಮಹದೇವಪ್ಪ ಚಿತ್ತ ರಾಮನ್ ನಗರದತ್ತ!
ಸಿ.ವಿ.ರಾಮನ್ ನಗರದಲ್ಲಿ ಮುಂದಿನ ಚುನಾವಣೆ ಅಭ್ಯರ್ಥಿ ಮಹದೇವಪ್ಪ ಎಂದಿ ಕ್ರಿಸ್ಮಸ್ ಮತ್ತು ಹೊಸ ವರ್ಷದ ಶುಭಾಶಯ ಕೋರಿ ಬ್ಯಾನರ್ ಹಾಕಲಾಗಿತ್ತು. ಇಂದು ಈ ಕುರಿತು ಸ್ಪಷ್ಟ ಚಿತ್ರಣ ಲಭ್ಯವಾಗಿದೆ.
ಪುತ್ರನಿಗೆ ಕ್ಷೇತ್ರ ಬಿಟ್ಟುಕೊಟ್ಟ ಮಹದೇವಪ್ಪ ಚಿತ್ತ ನಂಜನಗೂಡಿನ ಮೇಲೆ?!
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು ಮಹದೇವಪ್ಪ ಅವರ ಸ್ಪರ್ಧೆಗೆ ಒಪ್ಪಿಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ತಿ.ನರಸೀಪುರದಲ್ಲಿನ ಮಹದೇವಪ್ಪ ನಿವಾಸದ ಮುಂದೆ ನೂರಾರು ಅಭಿಮಾನಿಗಳು ಆಗಮಿಸಿ ಕ್ಷೇತ್ರ ಬಿಡಬಾರದು ಎಂದು ಒತ್ತಾಯಿಸುತ್ತಿದ್ದಾರೆ.
ಬಿಜೆಪಿ ವಶದಲ್ಲಿರುವ ಕ್ಷೇತ್ರ : ಸಿ.ವಿ.ರಾಮನ್ ನಗರ ಕ್ಷೇತ್ರ ಬಿಜೆಪಿಯ ವಶದಲ್ಲಿದೆ. ಎಸ್.ರಾಘು ಕ್ಷೇತ್ರದ ಶಾಸಕರು. 2013ರ ಚುನಾವಣೆಯಲ್ಲಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಪಿ.ರಮೇಶ್ ಸ್ಪರ್ಧಿಸಿದ್ದರು 44,982 ಮತಗಳನ್ನು ಪಡೆದಿದ್ದರು. ಈ ಬಾರಿಯೂ ಅವರು ಟಿಕೆಟ್ ಆಕಾಂಕ್ಷಿ.
ಶುಕ್ರವಾರ ಮಾಧ್ಯಮಗಳ ಜೊತೆ ಮಾತನಾಡಿದ ಪಿ.ರಮೇಶ್, 'ನಾನು ಟಿಕೆಟ್ ಆಕಾಂಕ್ಷಿಯಾಗಿದ್ದೆ. ಮಹದೇವಪ್ಪ ಅವರು ಕ್ಷೇತ್ರದಿಂದ ಸ್ಪರ್ಧಿಸುವುದಾದರೆ ನಾನು ಸ್ವಾಗತಿಸುತ್ತೇನೆ' ಎಂದು ಹೇಳಿದರು.