ಅಂತಾರಾಷ್ಟ್ರೀಯ ಗುಣಮಟ್ಟದ ಶತಾಯು ಆಯುರ್ವೇದ ಯೋಗ ರಿಟ್ರೀಟ್ ಲೋಕಾರ್ಪಣೆ
ಬೆಂಗಳೂರು, ಡಿಸೆಬರ್ 22: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ಆವತಿ ಗ್ರಾಮದ ಬೆಟ್ಟದ ತಪ್ಪಲಲ್ಲಿ ನೂತನವಾಗಿ ನಿರ್ಮಿಸಿರುವ ಶತಾಯು ಆಯುರ್ವೇದ ಯೋಗ ರಿಟ್ರೀಟ್ ಮತ್ತು ನ್ಯಾಚುರೋಪತಿ ಹಾಸ್ಪಿಟಲ್ ಇಂದು (ಡಿ.22) ಲೋಕಾರ್ಪಣೆಗೊಂಡಿತು.
ರಾಜ್ಯ ಲೋಕೋಪಯೋಗಿ ಸಚಿವ ಡಾ ಹೆಚ್ ಸಿ ಮಹದೇವಪ್ಪ ಅವರು ಶತಾಯು ಆಯುರ್ವೇದ ಯೋಗ ರಿಟ್ರೀಟ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, "117 ವರ್ಷಗಳ ಇತಿಹಾಸ ಹೊಂದಿರುವ ಶತಾಯು ಆಯುರ್ವೇದ ಕ್ಷೇತ್ರಕ್ಕೆ ತನ್ನದೇ ಆದ ವಿಶಿಷ್ಟತೆ ಇದೆ. ದೇಶ ವಿದೇಶಗಳಲ್ಲಿ ರಾಜ್ಯದ ಪಾರಂಪರಿಕ ಆರೋಗ್ಯ ಪದ್ಧತಿ ಪ್ರಚುರ ಪಡಿಸಿದೆ" ಎಂದು ಅಭಿಪ್ರಾಯಪಟ್ಟರು.
ಸಿಲಿಕಾನ್ ಸಿಟಿ, ಗಾರ್ಡನ್ ಸಿಟಿ ಹಾಗೂ ಸ್ಟಾರ್ಟ್ಅಪ್ ಸಿಟಿ ಎಂದೇ ವಿಶ್ವದೆಲ್ಲೆಡೆ ಹೆಸರುವಾಸಿಯಾಗಿರುವ ಬೆಂಗಳೂರು ನಗರದಲ್ಲಿ ವೆಲ್ ನೆಸ್ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿದ್ದು, ಇದನ್ನು ಪ್ರಚುರ ಪಡಿಸುವಲ್ಲಿ ಶತಾಯು ಆಯುರ್ವೇದ ಬಹಳ ಮುಖ್ಯ ಪಾತ್ರ ವಹಿಸುತ್ತಿದೆ ಎಂದು ಸಚಿವ ಡಾ ಹೆಚ್ ಸಿ ಮಹದೇವಪ್ಪ ಹೇಳಿದರು.
ದೇಶ ವಿದೇಶಗಳಲ್ಲಿ ರಾಜ್ಯದ ಪಾರಂಪರಿಕ ಆರೋಗ್ಯ ಪದ್ದತಿಯನ್ನು ಪ್ರಚುರ ಪಡಿಸಿದೆ. ಇದೀಗ ಹೊಸ ಕಲ್ಪನೆಯಲ್ಲಿ ಪ್ರಾರಂಭಿಸಲಾಗಿರುವ ಶತಾಯು ಆಯುರ್ವೇದ ಯೋಗ ಮತ್ತು ನ್ಯಾಚುರೋಪತಿ ಆಸ್ಪತ್ರೆ ಬಹಳ ಆಕರ್ಷಣೀಯವಾಗಿದೆ ಎಂದರು.
ಪ್ರಕೃತಿ ನಮ್ಮ ಮನಸ್ಸಿಗೆ ಮುದ ನೀಡುತ್ತದೆ
ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗೃಹ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಪ್ರಾಕೃತಿಕ ಚಿಕಿತ್ಸೆಗಳು ಬಹಳ ಪರಿಣಾಮಕಾರಿ, ಪ್ರಕೃತಿ ನಮ್ಮ ಮನಸ್ಸಿಗೆ ಮುದವನ್ನು ನೀಡುತ್ತದೆ. ಅದನ್ನೊಳಗೊಂಡ ಚಿಕಿತ್ಸಾ ಪದ್ದತಿಯನ್ನು ಶತಾಯು ಆಯುರ್ವೇದ ಹೊಸ ಕಲ್ಪನೆಯಲ್ಲಿ ಹೊರತಂದಿದೆ ಎಂದರು.
ರಿಟ್ರೀಟ್ ನಲ್ಲಿ ಅತ್ಯುತ್ತಮ ಚಿಕಿತ್ಸಾ ಪದ್ದತಿ
ಬೆಂಗಳೂರು ಇಂಟರ್ ನ್ಯಾಷನಲ್ ಏರ್ ಪೋರ್ಟ್ ನಿಂದ ಕೇವಲ 10 ನಿಮಿಷದ ದೂರದಲ್ಲಿರುವ ಈ ರಿಟ್ರೀಟ್, ಮೂರು ಭಾಗಗಳಿಂದಲೂ ಬೆಟ್ಟದಿಂದ ಆವೃತವಾಗಿದ್ದು, ಒಂದೆಡೆ ಮನಮೋಹಕ ಕೆರೆಯಿಂದ ಸುತ್ತುವರೆದಿದೆ. ಶತಾಯು ರಿಟ್ರೀಟ್ ನಲ್ಲಿ ಅತ್ಯುತ್ತಮ ಚಿಕಿತ್ಸಾ ಪದ್ದತಿಯನ್ನು ಅಳವಡಿಸಿಕೊಂಡಿದ್ದೇವೆ. ಇದು ಕೇವಲ ದೈಹಿಕ ಆರೋಗ್ಯವಲ್ಲ, ಮಾನಸಿಕ ಹಾಗೂ ಆಧ್ಯಾತ್ಮಿಕ ಆರೋಗ್ಯವೂ ಅಷ್ಟೇ ಮುಖ್ಯ ಎಂಬುದು ನಮ್ಮ ನಂಬಿಕೆಯಾಗಿದೆ. ಈ ಹಿನ್ನಲೆಯಲ್ಲಿ ಇಂದಿನ ಬಯೋಮೆಡಿಸಿನ್ ಹಾಗೂ ಸಾಂಪ್ರದಾಯಿಕ ಆಯುರ್ವೇದ ಸಮ್ಮಿಶ್ರಣದ ಆರೋಗ್ಯ ಪದ್ದತಿಯನ್ನು ಅಳವಡಿಸಿಕೊಂಡಿದ್ದೇವೆ. ಇದು ವ್ಯಕ್ತಿಯ ಆರೋಗ್ಯದ ಗುಣಮಟ್ಟವನ್ನು ಸರಿಯಾಗಿ ತಿಳಿದುಕೊಳ್ಳುವ ಮೂಲಕ ಸರಿಯಾದ ಚಿಕಿತ್ಸಾ ಪದ್ದತಿಯನ್ನು ಅನುಕರಿಸಲು ಅನುವು ಮಾಡಿಕೊಡಲಿದೆ ಎಂದು ಶತಾಯು ಆಯುರ್ವೇದ ವ್ಯವಸ್ಥಾಪಕ ನಿರ್ದೇಶಕ ಡಾ. ಮೃತ್ಯಂಜಯ ಸ್ವಾಮಿ ತಿಳಿಸಿದರು.
ರಾಜ್ಯದ ಪ್ರಮುಖ ಪ್ರವಾಸಿ ಕೇಂದ್ರಗಳಲ್ಲಿ ಸ್ಥಾಪನೆ
ಮೊದಲ ಪ್ರಯತ್ನವಾಗಿ ದೇವನಹಳ್ಳಿಯಲ್ಲಿ ಈ ರಿಟ್ರೀಟನ್ನು ಪ್ರಾರಂಭಿಸಿದ್ದು, ಇಲ್ಲಿನ ಯಶಸ್ಸಿನ ಆಧಾರದ ಮೇಲೆ ರಾಜ್ಯದ ಪ್ರಮುಖ ಪ್ರವಾಸಿ ಕೇಂದ್ರಗಳಾದ ಗೋಕರ್ಣ, ಮೈಸೂರು ಹಾಗೂ ಇನ್ನಿತರೆ ಪಟ್ಟಣಗಳಲ್ಲಿ ರಾಜ್ಯದ ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ಪ್ರಾರಂಭಿಸುವ ಉದ್ದೇಶವನ್ನು ಹೊಂದಿದ್ದೇವೆ ಎದು ಮೃತ್ಯಂಜಯ ಸ್ವಾಮಿ ಹೇಳಿದರು.
ಋತುವಿನ ಅನುಗಣವಾಗಿ ಚಿಕಿತ್ಸೆ: ಡಾ ಅನಿತಾ
ಆಯುರ್ವೇದ ಆರೋಗ್ಯ ಚಿಕಿತ್ಸಾ ಪದ್ದತಿಯ ಜೊತೆಯಲ್ಲೇ ಯೋಗ ಹಾಗೂ ನ್ಯಾಚುರೋಪತಿಯ ಹಲವಾರು ಅಂಶಗಳನ್ನು ಅಳವಡಿಸಿಕೊಂಡಿದ್ದೇವೆ. ಅಲ್ಲದೆ ಆಯಾ ವ್ಯಕ್ತಿಗಳ ಅಗತ್ಯತೆಗಳ ಅನುಗುಣವಾಗಿ ಹಾಗೂ ಋತುವಿನ ಅನುಗಣವಾಗಿ ಚಿಕಿತ್ಸೆಯನ್ನು ನೀಡಲಿದ್ದೇವೆ ಎಂದು ಶತಾಯು ಆಯುರ್ವೇದದ ಸಿಇಓ ಡಾ ಅನಿತಾ ಹೇಳಿದರು. ಕಾರ್ಯಕ್ರಮದಲ್ಲಿ ನಟಿ ಪೂಜಾಗಾಂಧಿ, ವಿಧಾನಪರಿಷತ್ ಸದಸ್ಯರಾದ ಭೈರತಿ ಸುರೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.