ಬೂತ್ ಮಟ್ಟದ ಫಲಿತಾಂಶ ತಡೆಗೆ ಅರ್ಜಿ: ನೋಟಿಸ್ ಜಾರಿ
ಬೆಂಗಳೂರು, ಮೇ 22: ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳಲ್ಲಿ ಪ್ರತಿ ಕ್ಷೇತ್ರಗಳ ಅಭ್ಯರ್ಥಿಯ ಫಲಿತಾಂಶವನ್ನು ಬೂತ್ ಮಟ್ಟದಲ್ಲಿ ವಿಂಗಡಣೆ ಮಾಡುವುದನ್ನು ನಿಲ್ಲಿಸುವಂತೆ ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಸಂಬಂಧ ರಾಜ್ಯ ಚುನಾವಣಾ ಆಯೋಗದ ಮುಖ್ಯ ಚುನಾವಣಾಧಿಕಾರಿ ಹಾಗೂ ಕೇಂದ್ರ ಕಾನೂನು ಸಚಿವಾಲಯದ ಕಾರ್ಯದರ್ಶಿಗೆ ಹೈಕೋರ್ಟ್ ಮಂಗಳವಾರ ನೋಟಿಸ್ ಜಾರಿಗೊಳಿಸಿದೆ.
ಈ ಸಂಬಂಧ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಶಿವರಾಂ ಗೋಪಾಲಕೃಷ್ಣ ಗಾಂವ್ಕರ್ ಎಂಬುವರು ಸಲ್ಲಿಸಿರುವ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಹಾಗೂ ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ರಜಾಕಾಲದ ಪೀಠದಲ್ಲಿ ನಡೆಯಿತು. ಕೆಲ ಕಾಲ ವಾದ ಆಲಿಸಿದ ನ್ಯಾಯಪೀಠ, ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಪ್ರತಿವಾದಿಗಳಿಗೆ ಸೂಚಿಸಿ, ವಿಚಾರಣೆಯನ್ನು ರಜಾಕಾಲದ ನಂತರಕ್ಕೆ ಮುಂದೂಡಿತು.
ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ 2018: ಗೆದ್ದವರ ಸಂಪೂರ್ಣ ಪಟ್ಟಿ
ಅರ್ಜಿಯಲ್ಲೇನಿದೆ?: ಬೂತ್ ಮಟ್ಟದಲ್ಲಿ ಅಭ್ಯರ್ಥಿಗಳ ಫಲಿತಾಂಶ ಪ್ರಕಟಿಸುವುದರಿಂದ ಕಡಿಮೆ ಮತಗಳು ಬಂದ ಪ್ರದೇಶದ ಅಭಿವೃದ್ಧಿಗೆ ಚುನಾಯಿತ ಜನ ಪ್ರತಿನಿಧಿಗಳು ಪ್ರಾಶಸ್ತ್ಯ ನೀಡುವುದಿಲ್ಲ. ಕಡಿಮೆ ಮತ ಪಡೆದಿದ್ದಾರೆಂಬ ಕಾರಣಕ್ಕೆ ಆ ಪ್ರದೇಶಗಳನ್ನು ನಿರ್ಲಕ್ಷಿಸುತ್ತಾರೆ. ಅಲ್ಲಿನ ಜನರ ಕುಂದು ಕೊರತೆಗಳನ್ನೂ ಆಲಿಸುವುದಿಲ್ಲ. ಇದು ಜನತಾ ಪ್ರಾತಿನಿಧ್ಯ ಕಾಯ್ದೆಗೆ ವಿರುದ್ಧವಾಗಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.
ಹೀಗಾಗಿ, ಪ್ರತಿ ಕ್ಷೇತ್ರದ ಮತಗಳನ್ನು ಕ್ರೋಡೀಕರಿಸಿ ಒಟ್ಟಿಗೆ ಫಲಿತಾಂಶ ಪ್ರಕಟಿಸಬೇಕು. ಚುನಾವಣೆ ನಡೆಸುವ ನಿಯಮಗಳು-1961ಕ್ಕೆ ತಿದ್ದುಪಡಿ ತರಬೇಕು. ಈ ದಿಸೆಯಲ್ಲಿ ರಾಷ್ಟ್ರೀಯ ಕಾನೂನು ಆಯೋಗವು 2015ರಲ್ಲಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ವರದಿಯನ್ನು ಪರಿಗಣಿಸಿ ಅದನ್ನು ಜಾರಿಗೊಳಿಸಲು ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.