ಅರ್ಕಾವತಿ ಡಿನೋಟಿಫಿಕೇಷನ್: ದಾಖಲೆ ನೀಡದ ಬಿಡಿಎ ಆಯುಕ್ತರಿಗೆ ದಂಡ
ಬೆಂಗಳೂರು, ಜೂನ್ 5: ಅರ್ಕಾವತಿ ಬಡಾವಣೆಯ ಡಿನೋಟಿಫಿಕೇಷನ್ ಹಗರಣ ಸಂಬಂಧ ಸೂಕ್ತ ದಾಖಲೆಗಳನ್ನು ಒದಗಿಸದ ಹಿನ್ನೆಲೆಯಲ್ಲಿ ಬಿಡಿಎ ಆಯುಕ್ತರಿಗೆ ಹೈಕೋರ್ಟ್ 50 ಸಾವಿರ ರೂಗಳ ದಂಡ ವಿಧಿಸಿದೆ.
ಪ್ರಕರಣದ ಸಂಬಂಧ ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಸಾಕಷ್ಟು ಕಲಾವಕಾಶ ನೀಡಿದರೂ ಅರ್ಕಾವತಿ ಡಿನೋಟಿಫಿಕೇಷನ್ ಸಂಬಂಧ ದಾಖಲೆಗಳನ್ನು ಸಲ್ಲಿಸುವಲ್ಲಿ ಬಿಡಿಎ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಬಿಡಿಎ ಆಯುಕ್ತರು ದಂಡ ಪಾವತಿಸಿ ತಕ್ಷಣ ದಾಖಲೆಗಳನ್ನು ಸಲ್ಲಿಸಬೇಕು ಎಂದು ಆದೇಶಿಸಿದೆ.
ಅರ್ಕಾವತಿ ಬಡಾವಣೆ: ಅನುಷ್ಠಾನ ವರದಿ ಸಲ್ಲಿಸಲು ಹೈಕೋರ್ಟ್ ನಿರ್ದೇಶನ
ಅರ್ಕಾವತಿ ಬಡಾವಣೆ ನಿರ್ಮಾಣ ಸಂಬಂಧ 2010ರಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಅನುಷ್ಠಾನದ ಬಗ್ಗೆ ಸಮಗ್ರ ವರದಿ ಸಲ್ಲಿಸುವಂತೆ ಹೈಕೋರ್ಟ್, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಏಪ್ರಿಲ್ 18ರಂದು ನಿರ್ದೇಶನ ನೀಡಿತ್ತು.
ವಿವಾದಿತ ಬಡಾವಣೆ ಬೂ ಸ್ವಾಧೀನ ಕುರಿತಂತೆ ಎಚ್ ಬಿ ಶಿವರಾಂ ಮತ್ತಿತರು ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ನ್ಯಾ. ವಿನೀತ್ ಕೊಠಾರಿ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿತ್ತು.
ಸುಪ್ರೀಂಕೋರ್ಟ್ ಆದೇಶ ಆಧರಿಸಿ ಹೆಬ್ಬಾಳ-ಕೆಂಪಾಪುರ ಪ್ರದೇಶಗಳಲ್ಲಿ ದ್ವೀಪಗಳಂತಿದ್ದ ಪ್ರದೇಶದಲ್ಲಿ ಎಷ್ಟು ಭೂಮಿಯನ್ನು ಸ್ವಾಧೀನದಿಂದ ಕೈಬಿಡಲಾಗಿದೆ. ಎಷ್ಟು ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಲಾಗಿದೆ ಎಷ್ಟು ನಿವೇಶನ ಹಂಚಿಕೆ ಮಾಡಲಾಗಿದೆ ಎಂಬ ಬಗ್ಗೆ ಎಲ್ಲ ವಿವರಗಳನ್ನು ವರದಿಯಲ್ಲಿ ವಿವರಿಸಬೇಕು ಎಂದು ನ್ಯಾಯಪೀಠ ಸೂಚಿಸಿತ್ತು ಆದರೆ ವರದಿ ಸಲ್ಲಿಸುವಲ್ಲಿ ವಿಫಲವಾದ ಬಿಡಿಎಗೆ 50 ಸಾವಿರ ರೂ ದಂಡ ವಿಧಿಸಿದೆ.