ರಸ್ತೆ ಗುಂಡಿ: 4 ವಾರದಲ್ಲಿ ಅರ್ಜಿ ಪರಿಶೀಲಿಸಲು ಹೈಕೋರ್ಟ್ ನಿರ್ದೇಶನ
ಬೆಂಗಳೂರು, ಜನವರಿ 12: ನಗರದಲ್ಲಿನ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಅರ್ಜಿದಾರರ ಮನವಿಯನ್ನು ನಾಲ್ಕು ವಾರದೊಳಗೆ ಪರಿಶೀಲಿಸುವಂತೆ ಬಿಬಿಎಂಪಿಗೆ ಹೈಕೋರ್ಟ್ ಸೂಚನೆ ನೀಡಿದೆ.
ರಸ್ತೆ ಗುಂಡಿಗಳ ಸಮಸ್ಯೆ ಕುರಿತಂತೆ ಡವ್ ಡ್ರೈವ್ ವಿಥೌಟ್ ಬಾರ್ಡರ್ಸ್ ಫೌಂಡೇಶನ್ ಸಂಸ್ಥೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್.ಜಿ. ರಮೇಶ್ ಮತ್ತು ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ಪೀಠ ವಿಲೇವಾರಿ ಮಾಡಿದೆ.
ಅಮಾನತುಗೊಂಡ ಬಿಬಿಎಂಪಿ ಎಂಜಿನಿಯರ್ ಗಳು ಸದ್ದಿಲ್ಲದೆ ಹಾಜರ್
ವಿಚಾರಣೆ ವೇಳೆ ಅರ್ಜಿದಾರರ ವಕೀಲ ಬಿ.ವಿಕಾರ್ ಅಹಮದ್ ನಗರದಲ್ಲಿ ರಸ್ತೆಗಳು ಗುಂಡಿ ಹೆಚ್ಚಿದ್ದು ವಾಹನ ಅಪಘಾತ ಹೆಚ್ಚುತ್ತಿದ್ದು ಜನರ ಪ್ರಾಣಕ್ಕೆ ಕುತ್ತಾಗಿ ಪರಿಣಮಿಸಿವೆ. ಆದ್ದರಿಂದ ಗುಂಡಿಗಳನ್ನು ಮುಚ್ಚಲು, ರಸ್ತೆ ಉಬ್ಬು ಹಾಗೂ ವಿಭಜಕಗಳನ್ನು ಸೂಕ್ತ ರೀತಿಯಲ್ಲಿ ನಿರ್ಮಿಸಲು ಬಿಬಿಎಂಪಿಗೆ ನಿರ್ದೇಶಿಸಬೇಕು ಎಂದು ಕೋರಿದರು.
ಇದಕ್ಕೆ ಬಿಬಿಎಂಪಿ ಪರ ವಕೀಲರು ಈ ಕುರಿತು ಅಗತ್ಯ ಕ್ರಮ ಜರುಗಿಸಲು ಕಾಲಾವಕಾಶ ಬೇಕು ಎಂದು ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ ರಸ್ತೆ ಗುಂಡಿಗಳನ್ನು ಮುಚ್ಚಲು ನ್ಯಾಯಾಲಯ ನಿಮಗೆ ಈಗಾಗಲೇ ಸಾಕಷ್ಟು ಸಮಯ ನೀಡಿದೆ. ಆದರೂ ಏಕೆ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿತು.