ವಾಯುಮಾಲಿನ್ಯ: ಆತಂಕದ ಸ್ಥಿತಿಯಲ್ಲಿ ರಾಜ್ಯದ ನಗರಗಳು
ಬೆಂಗಳೂರು, ಜನವರಿ 12: ಕರ್ನಾಟಕದ ತುಮಕೂರು, ಬೆಂಗಳೂರು, ದಾವಣಗೆರೆ, ರಾಯಚೂರು, ಹುಬ್ಬಳ್ಳಿ ನಗರಗಳಲ್ಲಿ ವಾಯು ಮಾಲಿನ್ಯದ ಸ್ಥಿತಿ ಆತಂಕಕಾರಿಯಾಗಿದೆ ಎಂದು ಗ್ರೀನ್ ಪೀಸ್ ಇಂಡಿಯಾ ಸಂಸ್ಥೆ ವರದಿ ಜಾಹೀರುಗೊಳಿಸಿದೆ.
ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಾಹನಗಳ ಸಂಖ್ಯೆ, ನಗರೀಕರಣ, ಕಾರ್ಖಾನೆ, ಕೈಗಾರಿಕೆಗಳಿಂದ ನಗರದ ಕೆಲವು ಭಾಗಗಳಲ್ಲಿ ಗಾಳಿಯಲ್ಲಿರುವ ತೇಲಾಡುವ ದೂಳಿನ ಕಣದ (ಆರ್ಎಸ್ಪಿಎಂ) ಪ್ರಮಾಣ ಹೆಚ್ಚಾಗಿರುವುದೇ ಇದಕ್ಕೆ ಕಾರಣ ಎಂದು ವರದಿಯಲ್ಲಿ ವಿವರಿಸಲಾಗಿದೆ.[ದೆಹಲಿ ವಾಯು ಮಾಲಿನ್ಯ: ಮೂರು ದಿನ ಶಾಲೆ ಕಾಲೇಜು ಬಂದ್]
ದೇಶದ 168 ನಗರಗಳಲ್ಲಿ ಮಾಲಿನ್ಯ ಪರಿಶೀಲನೆ ನಡೆಸಿರುವ ಸಂಸ್ಥೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಅಂತರ್ಜಾಲ ವರದಿ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರ ಮಂಡಳಿಗಳಿಂದ ಮಾಹಿತಿ ಪಡೆದು ವರದಿಯನ್ನು ಸಿದ್ದ ಪಡಿಸಿದೆ. ವರದಿಯಲ್ಲಿ ವಾಯುಮಾಲಿನ್ಯಕ್ಕೆ ವಾಹನಗಳ ಹೊಗೆ ಶೇ.40ರಷ್ಟು ಇದ್ದರೆ, ರಸ್ತೆ ದೂಳಿನ ಪ್ರಮಾಣ ಶೇ.20ರಷ್ಟು ಇದೆ. ಇನ್ನು ಉಳಿದ ಶೇ. ಪ್ರಮಾಣ ಕೈಗಾರಿಕೆ ಇತ್ಯಾದಿಗೆ ಸೇರಿದೆ. [ವಾಯುಮಾಲಿನ್ಯ: ಭಾರತದಲ್ಲಿ ತೀವ್ರವಾಗಿದೆ ಶ್ವಾಸಕೋಶ ಸೋಂಕು]
ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ವಾಯುಗುಣಮಟ್ಟ 1000 ಲೀಟರ್ ಗಾಳಿಗೆ ತೆಲಾಡುವ ದೂಳಿನ ಪ್ರಮಾಣ 20 ಮೈಕ್ರೋ ಗ್ರಾಂ ಕ್ಯೂಬಿಕ್ ಮೀಟರ್ ಇರಬೇಕು. ಆದರೆ ರಾಜ್ಯದ ನಗರಗಳಲ್ಲಿ ವಾರ್ಷಿಕ ಪಿಎಂ-10 ಪ್ರಮಾಣ ಸುಮಾರು 120 ಮೈಕ್ರೋ ಕ್ಯೂಬಿಕ್ ಮೀಟರ್ ನಷ್ಟಿದೆ. ಇದರಲ್ಲಿ ದಾವಣಗೆರೆ, ರಾಯಚೂರು, ಹುಬ್ಬಳ್ಳಿ ನಗರಗಳು ಪ್ರಮಾಣ ಕಡಿಮೆ ಇದ್ದರೂ ಇದೇ ಬೆಳವಣಿಗೆ ಕಂಡರೆ ಮುಂದೆ ಬೆಂಗಳೂರಿನ ಪ್ರಮಾಣಕ್ಕೆ ಬರಲಿದೆ ಎಂದು ವರದಿ ಹೇಳಿದೆ.[ಉಸಿರುಗಟ್ಟಿಸುವ ವಾತಾವರಣದಲ್ಲಿ ಬೆಂಗಳೂರು ವಿಲವಿಲ]
ಇನ್ನು ಬೆಂಗಳೂರಿನ ವೈಟ್ ಫೀಲ್ಡ್ ನಂತಹ ಕೈಗಾರಿಕಾ ಪ್ರದೇಶದಲ್ಲಿ ಈ ವರ್ಷ ಆರ್ಎಸ್ಪಿಎಂ ಪ್ರಮಾಣ 189 ಮೈಕ್ರೋ ಗ್ರಾಂ ಇದೆ. ಇದು ರಾಷ್ಟ್ರದಲ್ಲಿ ವಾಯುಮಾಲಿನ್ಯದ ಆತಂಕಮಟ್ಟ ಎನ್ನಲಾಗಿದೆ. ದೇಶದಲ್ಲಿ ಮರಗಳನ್ನು ಕಡಿಯುತ್ತಿರುವುದು ಒಂದೆಡೆಯಾದರೆ, ಕೈಗಾರಿಕೆ, ವಾಹನಗಳ ಹೆಚ್ಚಳ ಮತ್ತೊಂದೆಡೆಯಾಗಿದೆ ಹೀಗಾಗಿ ಪರಿಸರದ ಮೇಲೆ ಮಾಲಿನ್ಯದ ಒತ್ತಡ ಹೆಚ್ಚಿದೆ.