ಒಂದು ಗಿಡ ಬಿದ್ದರೇನಾಯಿತು? ಎರಡು ಸಸಿ ನೆಡೋಣ
ಬೆಂಗಳೂರು, ಆಗಸ್ಟ್, 09: ಬೆಂಗಳೂರಿನ ಜಯನಗರ ವ್ಯಾಪ್ತಿಯಲ್ಲಿ ಹಸಿರಿನ ಅಭಿಯಾನ ಶುರುವಾಗಿದೆ. ಜಯನಗರ ಶಾಸಕ ಬಿ ಎನ್ ವಿಜಯಕುಮಾರ್, ನಟಿ ಮಯೂರಿ 'ಹಸಿರಿಗೆ ಉಸಿರು' ಎನ್ನುವ ಅಭಿಯಾನಕ್ಕೆ ಮಂಗಳವಾರ ಚಾಲನೆ ನೀಡಿದರು.
'ಹಸಿರಿಗೆ ಉಸಿರು' "ಒಂದು ಗಿಡ ಬಿದ್ದರೇನಾಯ್ತು ಎರಡು ಸಸಿ ನೆಡೋಣ" ಅನ್ನೋ ಘೋಷಣೆಯೊಂದಿಗೆ ಈ ಕಾರ್ಯಕ್ರಮ ಜರುಗಿತು. ಜಯನಗರ ವಿಧಾನಸಭಾ ಕ್ಷೇತ್ರದ ಬೈರಸಂದ್ರ ವಾರ್ಡ್ ನ ವಿವಿಧ ಸ್ಥಳಗಳಲ್ಲಿ ಮಂಗಳವಾರ ಬೆಳಿಗ್ಗೆಯಿಂದ ಶಾಲಾ ಮಕ್ಕಳು ಸಸಿಗಳನ್ನು ನೆಟ್ಟರು.[ನಾವು ಎಲ್ಲಿ ಹೋಗಿ ಬಿದ್ದು ಸಾಯಬೇಕು ? ಮರದ ಪ್ರಶ್ನೆ]
ಅಶೋಕ ಪಿಲ್ಲರ್, ಎಲ್.ಐ.ಸಿ. ಕಾಲೋನಿ, ಕಾಸ್ಮೋ ಪಾಲಿಟೆನ್ ಕ್ಲಬ್, ಕಿತ್ತೂರು ರಾಣಿ ಚೆನ್ನಮ್ಮ ಆಟದ ಮೈದಾನದ ಸುತ್ತಮುತ್ತಲಿನ ರಸ್ತೆಗಳು ಸೇರಿದಂತೆ, ವಿವಿಧ ಸ್ಥಳಗಳಲ್ಲಿ ಶಾಲಾ ಮಕ್ಕಳು 60ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಬಿ.ಎನ್. ವಿಜಯಕುಮಾರ್ ಅವರು, ಹಸಿರೇ ಉಸಿರು ಅಡಿ ಈ ಯೋಜನೆಯನ್ನು ಬೈರಸಂದ್ರ ವಾರ್ಡನಲ್ಲಿ ಆರಂಭಿಸಲಾಗಿದೆ. ಮರ-ಗಿಡಗಳು ಬಿದ್ದ ಸ್ಥಳದಲ್ಲಿ ಸಸಿಗಳನ್ನು ನೆಡದೇ ಹೋದಲ್ಲಿ, ಹಸಿರು ಸಂಪತ್ತು ಅವನತಿಯತ್ತ ಸಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ನೆಟ್ಟ ಸಸಿಗಳನ್ನು ಆರು ತಿಂಗಳವರೆಗೆ 'ಬಾಂಧವ'ಎಂಬ ತಂಡ ನಿರ್ವಹಣೆ ಮಾಡಲಿದೆ ಎಂದು ಹೇಳಿದರು. ಚಿತ್ರನಟಿ ಮಯೂರಿ ಅವರು ಕೇವಲ ಕಲಾವಿದರು ಸಿನಿಮಾಗಳಲ್ಲಿ ನಟಿಸಿದರೆ, ಸಾಲದು. ಸಾಮಾಜಿಕ ಚೌಕಟ್ಟಿನಲ್ಲಿ ಇಂತಹ ಸೇವೆಗಳಿಗೆ ಮುಂದಾಗಬೇಕು. ಅದಕ್ಕಾಗಿ ನಾನೂ ಕೂಡ ಮಕ್ಕಳೊಂದಿಗೆ ಸಸಿ ನೆಟ್ಟಿದ್ದೇನೆ ಎಂದರು.[ಪರಿಸರ ಚರ್ಚೆಗೆ ನಾಂದಿ ಹಾಡಿದ ಸರ್ಕಾರದ ವಿಧೇಯಕ]
ನಗರದಲ್ಲಿ ಹಸಿರು ಸಂಪತ್ತು ಮಾಯವಾಗುತ್ತಿದೆ. ಮರ-ಗಿಡಗಳೇ ಕಾಣುತ್ತಿಲ್ಲ. ಹಾಗಾಗಿ ಪ್ರತಿಯೊಬ್ಬ ನಾಗರಿಕರೂ ಸಸಿಗಳನ್ನು ನೆಡುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ಬೈರಸಂದ್ರ ವಾರ್ಡ್ ನ ಸದಸ್ಯ ಎನ್. ನಾಗರಾಜ್ ಮಾತನಾಡಿ, ಬಾಂಧವ ತಂಡದ ಸದಸ್ಯರು ಮರ ಬಿದ್ದ ಸ್ಥಳಕ್ಕೆ ತೆರಳಿ ಆ ಪ್ರದೇಶವನ್ನು ಶುಚಿಗೊಳಿಸಿ ಅದೇ ಸ್ಥಳದಲ್ಲಿ ಎರಡು ಸಸಿಗಳನ್ನು ನೆಟ್ಟು ಕಾಲಕಾಲಕ್ಕೆ ಗಿಡದ ಪೋಷಣೆಗೂ ಕೈಜೋಡಿಸುತ್ತಾರೆ ಎಂದು ತಿಳಿಸಿದರು. ಈ ಯೋಜನೆ ಕೇವಲ ಒಂದು ದಿನಕ್ಕೆ ಸೀಮಿತವಾಗದೆ, ಮರ ಬೆಳೆದು ದೊಡ್ಡದಾಗುವವರೆಗೂ ನಡೆಯಲಿದೆ ಎಂದು ತಿಳಿಸಿದರು.