ಬಿಜೆಪಿ ನಾಯಕನ ಹಠದಿಂದ ಹೋಯ್ತು ಆ್ಯಂಬುಲೆನ್ಸ್ ನಲ್ಲಿದ್ದ ರೋಗಿ ಪ್ರಾಣ
ತಮ್ಮ ಕಾರಿಗೆ ಗುದ್ದಿದ ಕಾರಣದಿಂದ ಆ್ಯಂಬುಲೆನ್ಸ್ ತಡೆದ ಹರ್ಯಾಣದ ಕೌನ್ಸಿಲರ್. ಡ್ರೈವರ್ ಜತೆಗೆ ವಾಗ್ವಾದದಿಂದಾಗಿ ಸಮಯ ವ್ಯರ್ಥ. ಆಂಬುಲೆನ್ಸ್ ನಲ್ಲಿದ್ದ ರೋಗಿಯ ಸಂಬಂಧಿಕರ ಮನವಿಗೆ ಸ್ಪಂದಿಸದ ಕೌನ್ಸಿಲರ್.
ಹರ್ಯಾಣ, ಆಗಸ್ಟ್ 7: ಇತ್ತೀಚೆಗೆ, ಬೆಂಗಳೂರಿನ ರಾಜಭವನದ ಬಳಿ ಟ್ರಾಫಿಕ್ ಪೊಲೀಸ್ ಒಬ್ಬರು, ರೋಗಿಯನ್ನು ಹೊತ್ತು ಬಂದ ಆ್ಯಂಬುಲೆನ್ಸ್ ಗೆ ದಾರಿ ಮಾಡಿಕೊಡುವ ಉದ್ದೇಶದಿಂದ ರಾಷ್ಟ್ರಪತಿಯವರ ವಾಹನವನ್ನೇ ಕೆಲ ನಿಮಿಷಗಳವರೆಗೆ ನಿಲ್ಲಿಸಿದ್ದರು! ಇದನ್ನು ಖುದ್ದು ರಾಷ್ಟ್ರಪತಿಯವರಾಗಲೀ, ಯಾವುದೇ ರಾಜಕೀಯ ಪಕ್ಷವಾಗಲೀ ಅಥವಾ ಮಾಧ್ಯಮಗಳಾಗಲೀ ಆಕ್ಷೇಪಿಸಲಿಲ್ಲ ಹಾಗೂ ಇದು ಶಿಷ್ಟಾಚಾರದ ಉಲ್ಲಂಘನೆಯೆಂದೂ ಪರಿಗಣಿಸಲಿಲ್ಲ. ಬದಲಿಗೆ, ಆ ಪೊಲೀಸ್ ಅಧಿಕಾರಿಗೆ ಪ್ರಶಂಸೆ ಹಾಗೂ ಬಹುಮಾನಗಳು ಸಂದವು.
ರಾಷ್ಟ್ರಪತಿ ಇದ್ದರೂ ಆಂಬ್ಯುಲೆನ್ಸ್ಗೆ ದಾರಿಮಾಡಿಕೊಟ್ಟ ಪಿಎಸ್ಐ
ಆದರೆ, ದೂರದ ಹರ್ಯಾಣದಲ್ಲಿ ಇದಕ್ಕೆ ತದ್ವಿರುದ್ಧವಾದ ಘಟನೆಯೊಂದು ಸೋಮವಾರ (ಆಗಸ್ಟ್ 7) ನಡೆದಿದೆ. ಅಲ್ಲಿನ ಫತೇಹಾಬಾದ್ ನ ಬಿಜೆಪಿಯ ಕೌನ್ಸಿಲರ್ ದರ್ಶನ್ ನಾಗ್ಪಾಲ್ ವಾಹನಕ್ಕೆ, ರೋಗಿಯನ್ನು ಹೊತ್ತೊಯ್ಯುತ್ತಿದ್ದ ಆ್ಯಂಬುಲೆನ್ಸ್ ಲಘುವಾಗಿ ಡಿಕ್ಕಿ ಹೊಡೆದಿದೆ, ಅಷ್ಟೆ.
ಕಾರಿನಿಂದ ಇಳಿದ ಆ ಕೌನ್ಸಿಲರ್, ಆ್ಯಂಬುಲೆನ್ಸ್ ವಾಹನವನ್ನು ಅಡ್ಡಗಟ್ಟಿ ಸತಾಯಿಸಿದ್ದಾನೆ. ಆ್ಯಂಬುಲೆನ್ಸ್ ವಾಹನ ಮುಂದೆ ಸಾಗದಂತೆ ತಡೆದು, ದಂಡ ಕಟ್ಟಬೇಕೆಂದು ಬಲವಂತ ಮಾಡಿದ್ದಾನೆ.
ಆ ಹೊತ್ತಿನಲ್ಲಿ ಆ್ಯಂಬುಲೆನ್ಸ್ ನಲ್ಲಿದ್ದ ರೋಗಿ ನವೀನ್ ಸೋನಿಯ ಸಂಬಂಧಿಕರಾದ ಸೀತಾರಾಂ ಸೋನಿ ಹಾಗೂ ಅರುಣ್ ಸೋನಿಯವರು ಕೆಳಗಿಳಿದು ಬಂದು ಆ ಕೌನ್ಸಿಲರ್ ಬಳಿ ಪರಿಪರಿಯಾಗಿ ಮನವಿ ಮಾಡಿದರೂ, ಆತ ಕ್ಯಾರೇ ಅಂದಿಲ್ಲ.
ಹಲವಾರು ನಿಮಿಷಗಳವರೆಗೆ ಆತ ಮುಂದುವರಿಸಿದ ವಾಗ್ವಾದ ಮುಗಿಸಿ ಕಡೆಗೆ ಹೇಗೋ ದಾರಿ ಮಾಡಿಕೊಂಡು ಆಸ್ಪತ್ರೆಗೆ ಸೇರುವಷ್ಟರಲ್ಲಿ ನವೀನ್ ಸೋನಿ ಅವರು ಮೃತರಾಗಿದ್ದರು. ಅವರನ್ನು ತಪಾಸಣೆ ನಡೆಸಿದ ವೈದ್ಯರು, 15 ನಿಮಿಷಗಳ ಹಿಂದೆ ತಂದಿದ್ದರೂ ಉಳಿಸಬಹುದಿತ್ತು ಎಂದಿದ್ದಾರೆ.
ಈ ಮಾತನ್ನು ಕೇಳಿದ ನಂತರ, ಕೌನ್ಸಿಲರ್ ವಿರುದ್ದ ರೊಚ್ಚಿಗೆದ್ದ ನವೀನ್ ಸೋನಿ ಸಂಬಂಧಿಕರು, ಶಾಸಕರ ವಿರುದ್ಧ ದೂರು ದಾಖಲಿಸಿದ್ದು, ತಮಗಾದ ಅನ್ಯಾಯಕ್ಕೆ ಪರಿಹಾರ ನೀಡಬೇಕೆಂದು ಕೋರಿದ್ದಾರೆ.
ಆದರೆ, ತಮ್ಮ ಮೇಲಿನ ಆರೋಪಗಳನ್ನು ತಳ್ಳಿಹಾಕಿದ ದರ್ಶನ್ ನಾಗ್ಪಾಲ್, ಆ್ಯಂಬುಲೆನ್ಸ್ ಬಂದು ತಮ್ಮ ಕಾರಿಗೆ ಗುದ್ದಿದ್ದು ನಿಜ. ಹಾಗಾಗಿ, ನಾನು ಕೆಳಗಿಳಿದು ಹೋಗಿ ಪ್ರತಿಭಟಿಸಿದೆ. ಆದರೆ, ಆ್ಯಂಬುಲೆನ್ಸ್ ನಲ್ಲಿ ರೋಗಿ ಇದ್ದಿದ್ದನ್ನು ನೋಡಿ ಆ್ಯಂಬುಲೆನ್ಸ್ ಗೆ ದಾರಿ ಮಾಡಿಕೊಟ್ಟಿದ್ದೆ. ಹಾಗಾಗಿ, ಆ್ಯಂಬುಲೆನ್ಸ್ ನಿಲ್ಲಿಸಿದ್ದರೆಂಬ ಆರೋಪ ಸುಳ್ಳು ಎಂದಿದ್ದಾರೆ ಅವರು.