ರೈಲು ಪ್ರಯಾಣದಲ್ಲಿ ವಿಕಲಚೇತನರ ಸಮಸ್ಯೆ ನಿವಾರಿಸಲು ಒತ್ತಾಯ
ಬೆಂಗಳೂರು, ಫೆಬ್ರವರಿ 20 : ರೈಲ್ವೆ ನಿಲ್ದಾಣದಲ್ಲಿ ಹಾಗೂ ರೈಲ್ವೆ ಪ್ರಯಾಣದ ವೇಳೆ ವಿಕಲಚೇತನರು ಎದುರಿಸುತ್ತಿರುವ ಸಮಸ್ಯೆಗಳ ನಿವಾರಣೆಗೆ ಒತ್ತಾಯಿಸಿ, ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ ಪ್ರತಿಭಟನೆ ನಡೆಸಿದರು.
ಸಿಟಿ ರೈಲ್ವೆ ನಿಲ್ದಾಣದ ಮುಂದೆ ಕರ್ನಾಟಕ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ ಮಂಗಳವಾರ ಪ್ರತಿಭಟನೆ ನಡೆಸಿದರು. ರೈಲ್ವೆ ಇಲಾಖೆ ಇನ್ನೂ ಅಂಗವಿಕಲರ ಸ್ನೇಹಿಯಾಗಿಲ್ಲ. ಹಾಗಾಗಿ ಅಂಗವಿಕಲರು ರೈಲು ಪ್ರಯಾಣದ ವೇಳೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ವಿಕಚಲಚೇತನರ ಸವಲತ್ತುಗಳ ಅನುಷ್ಠಾನ: ಕರ್ನಾಟಕ ಅತ್ಯುತ್ತಮ ರಾಜ್ಯ
ಪ್ಲಾಟ್ ಫಾರಂಗಳಲ್ಲಿ ಓಡಾಡುವ ಸಮಸ್ಯೆಯಿಂದ ಹಿಡಿದು ಬೋಗಿ ಎಲ್ಲಿ ನಿಲ್ಲುತ್ತದೆ, ಒಂದು ಫ್ಲಾಟ್ ಫಾರಂನಿಂದ ಇನ್ನೊಂದು ಫ್ಲಾಟ್ ಫಾರಂ ಗೆ ಹೋಗುವುದು , ಶೌಚಾಲಯ ಸಮಸ್ಯೆ ಸೇರಿದಂತೆ ಇನ್ನಿತರೆ ತೊಂದರೆಗಳು ಎದುರಾಗುತ್ತಿವೆ.ಇದನ್ನು ನಿವಾರಿಸುವಂತೆ ಒತ್ತಾಯಿಸಲಾಯಿತು.
ಅಂಗವಿಕಲರ ವೈದ್ಯಕೀಯ ಪ್ರಮಾಣಪತ್ರವನ್ನು ಅನಗತ್ಯವಾಗಿ ನಿರಾಕರಿಸಲಾಗುತ್ತಿದೆ. ಇದರಿಂದ ಸಾಕಷ್ಟು ಸಮಸ್ಯೆಗೆ ಅಂಗವಿಕಲರು ಈಡಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಂಬಂಧಿತ ಅಧಿಕಾರಿಗಳು ಸೂಕ್ತ ಕ್ರಮವಹಿಸಬೇಕೆಂಬ ಮನವಿಯನ್ನು ರೈಲ್ವೆ ವಿಭಾಗೀಯ ವ್ಯವಸ್ಥಾಪಕರಿಗೆ ಸಲ್ಲಿಸಲಾಯಿತು.
ಎಲ್ಲಾ ಅಂಗವಿಕಲರಿಗೆ ಶೇ.75 ರಷ್ಟು ಏಕರೂಪ ರಿಯಾಯಿತಿ ನಿಗದಿಯಾಗಬೇಕು , ಅಂಗವಿಕಲರ ಟಿಕೆಟ್ ಗಳಿಗೆ ನೀಡಿದ ರಿಯಾಯಿತಿ ಮಾದರಿಯಲ್ಲೇ ತತ್ಕಾಲ್ ಬುಕ್ಕಿಂಗ್ ರಿಯಾಯಿತಿ ಅನ್ವಯವಾಗಬೇಕು ಎಂದು ಒತ್ತಾಯಿಸಿದರು.