ಉದ್ಯೋಗಿಗಳಿಗೆ ಸಂಬಳ ನೀಡಲು ಸಾಲ ಮಾಡಿದ ಎಚ್ಎಎಲ್
ಬೆಂಗಳೂರು, ಜನವರಿ 5: ದೇಶದ ರಕ್ಷಣಾ ಸಾಧನಗಳನ್ನು ತಯಾರಿಸುವ ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದು, ತನ್ನ ಉದ್ಯೋಗಿಗಳಿಗೆ ವೇತನ ನೀಡಲು ಸಾಲ ಪಡೆದುಕೊಂಡಿದೆ.
ಹೊಸ ಖರೀದಿ ಮತ್ತು ಮಾರಾಟಗಾರರಿಗೆ ಪಾವತಿಸಲು ಹಣವಿಲ್ಲದೆ ಏಪ್ರಿಲ್ನಿಂದ ಕೆಲಸಗಳನ್ನು ನಿಲುಗಡೆ ಮಾಡಲಾಗಿದೆ. ಅಕ್ಟೋಬರ್ ಸಮಯದಲ್ಲಿ ಕಂಪೆನಿ ಬಳಿ ಕೇವಲ 1 ಸಾವಿರ ಕೋಟಿ ರೂ. ಇತ್ತು. ಇದು ಮೂರು ತಿಂಗಳ ವೇತನಕ್ಕೆ ಸಾಕಾಗುವಷ್ಟಿತ್ತು.
ಎಚ್ಎಎಲ್ ನಿರ್ಮಿತ ಹೆಲಿಕಾಪ್ಟರ್'ಎಲ್ಯುಎಚ್' ಯಶಸ್ವಿ ಹಾರಾಟ
'ನಮ್ಮ ಬಳಿ ಇರುವ ನಗದು ಖಾಲಿಯಾಗಿದೆ. ಹೀಗಾಗಿ ಸುಮಾರು 1 ಸಾವಿರ ಕೋಟಿಯಷ್ಟು ಓವರ್ ಡ್ರಾಪ್ಟ್ ಪಡೆದುಕೊಳ್ಳಬೇಕಾಗಿತ್ತು. ಮಾರ್ಚ್ ವೇಳೆಗೆ ನಮ್ಮ ಬಳಿ 6 ಸಾವಿರ ಕೋಟಿ ರೂ. ಕೊರತೆ ಉಂಟಾಗಲಿದೆ. ಇದನ್ನು ನಿಭಾಯಿಸುವುದು ಸಾಧ್ಯವಿಲ್ಲ. ನಾವು ದೈನಂದಿನ ಕೆಲಸಗಳಿಗಾಗಿ ಸಾಲ ಪಡೆದುಕೊಳ್ಳಬಹುದು, ಆದರೆ ಒಟ್ಟಾರೆ ಯೋಜನೆಯ ಖರೀದಿಗೆ ಸಾಧ್ಯವಿಲ್ಲ' ಎಂದು ಎಚ್ಎಎಲ್ ಸಿಎಂಡಿ ಆರ್. ಮಾಧವನ್ ತಿಳಿಸಿದ್ದಾರೆ.
ವಾಯುಪಡೆಯಿಂದ ಹಣ ಬಾಕಿ
ಪ್ರಸ್ತುತ 1,950 ಕೋಟಿ ಓ.ಡಿ. ಮಿತಿ ಹೊಂದಿದ್ದು, ಅದನ್ನು ವಿಸ್ತರಿಸಲು ಎಚ್ಎಎಲ್ ಪ್ರಯತ್ನಿಸುತ್ತಿದೆ. ಎಚ್ಎಎಲ್ ಇಷ್ಟು ಪ್ರಮಾಣದ ಆರ್ಥಿಕ ಮುಗ್ಗಟ್ಟು ಅನುಭವಿಸಲು ಭಾರತೀಯ ವಾಯು ಪಡೆ (ಐಎಎಫ್) ಸುದೀರ್ಘ ಕಾಲದಿಂದ ಮೊತ್ತ ಬಾಕಿ ಉಳಿಸಿಕೊಂಡಿರುವುದು ಪ್ರಮುಖ ಕಾರಣ. 2017ರ ಸೆಪ್ಟೆಂಬರ್ನಿಂದಲೂ ಐಎಎಫ್ ಹಣ ಪಾವತಿಸಿಲ್ಲ. ಅಕ್ಟೋಬರ್ ವೇಳೆಗೆ ಬಾಕಿ ಮೊತ್ತದ ಪ್ರಮಾಣ 10 ಸಾವಿರ ಕೋಟಿ ಇತ್ತು.
ಎಚ್ಎಲ್ಸುತ್ತ ಡ್ರೋಣ್ ಹಾರಾಟ, ಇಬ್ಬರ ಬಂಧನ
33,715 ಕೋಟಿ ರೂ. ಬಜೆಟ್
ಡಿಸೆಂಬರ್ 31ಕ್ಕೆ ಬಾಕಿ ಮೊತ್ತದ ಪ್ರಮಾಣ 15,700ಕ್ಕೆ ತಲುಪಿದ್ದು, ಮಾರ್ಚ್ 31ರ ವೇಳೆಗೆ 20 ಸಾವಿರ ಕೋಟಿ ಆಗಲಿದೆ. ರಕ್ಷಣಾ ಸಚಿವಾಲಯವು 2017-18ನೇ ಸಾಲಿಗೆ 13,700 ಕೋಟಿ ರೂ. ಬಜೆಟ್ಗೆ ಅನುಮೋದನೆ ನೀಡಿತ್ತು. 2018-19ರ ಸಾಲಿನ ಪರಿಷ್ಕೃತ ಬಜೆಟ್ನಲ್ಲಿ 2017-18ರ ಬಾಕಿ ಮೊತ್ತ ಸೇರಿದಂತೆ 33,715 ಕೋಟಿ ರೂ.ಗೆ ಅನುಮೋದನೆ ನೀಡಿದೆ.
ರಫೇಲ್ ಒಪ್ಪಂದಕ್ಕೆ ಎಚ್ಎಎಲ್ಅನ್ನು ಏಕೆ ಆಯ್ದುಕೊಳ್ಳಲಿಲ್ಲ: ಕಾರಣ ನೀಡಿದ ಕೇಂದ್ರ ಸರ್ಕಾರ
ರಕ್ಷಣಾ ಸಚಿವಾಲಯ ಅವಲಂಬನೆ
ಎಚ್ಎಎಲ್ನ ವ್ಯವಹಾರವು ರಕ್ಷಣಾ ಸಚಿವಾಲಯವನ್ನು ಅವಲಂಬಿಸಿದೆ. ಎಂಓಡಿ ಸೇನಾ ಪಡೆಗಳಿಗೆ ಬಜೆಟ್ ಮಂಜೂರು ಮಾಡುತ್ತದೆ. ಅದು ರಕ್ಷಣಾ ಸಾಮಗ್ರಿಗಳ ಖರೀದಿಗಾಗಿ ಎಚ್ಎಎಲ್ಗೆ ಬರುತ್ತದೆ. ಆದರೆ, ಅದರ ಸೇನಾ ಪಡೆಗಳಿಗೆ ಬಜೆಟ್ ಹಣ ಬಿಡುಗಡೆಯಾಗದೆ ಇದ್ದರೆ ಎಚ್ಎಎಲ್ ವ್ಯವಹಾರ ನಡೆಯುವುದಿಲ್ಲ.
2,000 ಕೋಟಿ ರೂ. ಪಾವತಿ
ಬಾಕಿ ಉಳಿಯಲಿರುವ 15,700 ಕೋಟಿ ರೂ.ನಲ್ಲಿ 14,500 ಐಎಎಫ್ನಿಂದ ಬರಬೇಕಿರುವುದು. ಉಳಿದ ಹಣವು ಭಾರತೀಯ ಸೇನೆ, ನೌಕಾಪಡೆ ಮತ್ತು ಕರಾವಳಿ ಕಾವಲು ಪಡೆಯಿಂದ ಪಾವತಿಯಾಗಬೇಕಿದೆ. 2017ರ ಸೆಪ್ಟೆಂಬರ್ನಿಂದ ಇದುವರೆಗೂ ಐಎಎಫ್ ಕೇವಲ 2,000 ಕೋಟಿ ರೂ. ಪಾವತಿಸಿದೆ.
'ನಾವು ಯಾವಾಗಲೂ ಸಿರಿವಂತರಾಗಿಯೇ ಇದ್ದೆವು. ಇದೇ ಮೊದಲ ಬಾರಿಗೆ ಅಥವಾ ಕಳೆದ ಎರಡು ಮೂರು ದಶಕಗಳಲ್ಲಿ ನಾವು ಹಣವನ್ನು ಸಾಲ ಪಡೆದಿದ್ದೇವೆ' ಎಂದು ಮಾಧವನ್ ತಿಳಿಸಿದ್ದಾರೆ.
ಸಣ್ಣ, ಮಧ್ಯಮ ಉದ್ಯಮಗಳಿಗೆ ಹೊಡೆತ
ಇದು ಬಹು ದೊಡ್ಡ ಸಂಗತಿ. ಸುಮಾರು 2,000 ಮಾರಾಟಗಾರರು ನಮ್ಮನ್ನು ಅವಲಂಬಿಸಿದ್ದಾರೆ. ಅವರೆಲ್ಲರೂ ಸಣ್ಣ ಮತ್ತು ಮಧ್ಯಮ ಉದ್ಯಮಗಳು. ಹಣದ ಕೊರತೆ ನಾವು ಬಾಕಿ ಉಳಿಸಿಕೊಳ್ಳುವಂತೆ ಮಾಡುತ್ತವೆ. ಇದರಿಂದ ಈ ಉದ್ಯಮಗಳಿಗೆ ಭಾರಿ ಹೊಡೆತ ಬೀಳುತ್ತದೆ. ಹೀಗಾಗಿ ನಾವು ಅವರಿಗೆ ಪಾವತಿ ಮಾಡುವ ಕಾರ್ಯವನ್ನು ನಿಭಾಯಿಸುತ್ತಿದ್ದೇವೆ ಎಂದು ಮಾಧವನ್ ತಿಳಿಸಿದ್ದಾರೆ.