ಸೇವಾ ಭದ್ರತೆಗಾಗಿ ಅತಿಥಿ ಉಪನ್ಯಾಸಕರ ತರಗತಿ ಬಹಿಷ್ಕಾರ
ಬೆಂಗಳೂರು, ಮಾರ್ಚ್ 08: ಕನಿಷ್ಠ ಸೇವಾ ಭದ್ರತೆ ಒದಗಿಸದಿದ್ದರೆ ಮಾ.11ರಿಂದ ರಾಜ್ಯಾದ್ಯಂತ ತರಗತಿಗಳನ್ನು ಬಹಿಷ್ಕರಿಸಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಲು ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಒಕ್ಕೂಟ ನಿರ್ಧರಿಸಿದೆ.
ಕಳೆದ 20 ವರ್ಷಗಳಿಂದಲೂ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಕನಿಷ್ಠ ಮಾಸಿಕ ವೇತನ ಪಡೆದು, ಸೇವೆ ಸಲ್ಲಿಸುತ್ತಿದ್ದೇವೆ. ಪ್ರತಿ 6ತಿಂಗಳಿಗೊಮ್ಮೆ ವೇತನವನ್ನು ಪಡೆಯುತ್ತಿದ್ದೇವೆ. ಪಿಎಚ್ ಡಿ ಹಾಗೂ ಸರಿಸಮಾನ ಅರ್ಹತೆ ಹೊಂದಿದವರಿಗೆ 13 ಸಾವಿರ ಇತರರಿಗೆ 11 ಸಾವಿರ ಮಾಸಿಕ ವೇತನ ನೀಡಲಾಗುತ್ತಿದೆ.
ಯುಜಿಸಿ ನಿಯಮದನ್ವಯ ವೇತನ ಪಾವತಿಸುವಂತೆ ಮನವಿ ಮಾಡಿದರೂ ಸರ್ಕಾರ ಪರಿಗಣಿಸಿಲ್ಲ ಎಂದು ಒಕ್ಕೂಟದ ರಾಜ್ಯಾಧ್ಯಕ್ಷ ಆರ್.ಡಿ. ಛಲವಾದಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಸಾವಿರಾರು ಜನ ಅತಿಥಿ ಉಪನ್ಯಾಸಕರು ವಯೋಮಿಯನ್ನುಮೀರಿದ್ದಾರೆ. ಕಾರಣ ಕಷ್ಟಕರ ಜೀವನ ಸಾಗಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ಸರ್ಕಾರಿ ಸೇವೆಯಲ್ಲಿ ವಿಲೀನಗೊಳಿಸಬೇಕೆಂದು ಅವರು ಒತ್ತಾಯಿಸಿದರು.
2003ರಲ್ಲಿ ಅರೆಕಾಲಿಕ ಉಪನ್ಯಾಸಕರ ನೇಮಕದಂತೆ ಮೊರಾರ್ಜಿ ದೇಸಾಯಿ ಶಾಲೆಗಳಲ್ಲಿನ ಶಿಕ್ಷಕರ ನೇಮಕಾತಿಯಲ್ಲಿ ಶೇ.04 ರಿಂದ 40ರಷ್ಟು ಪ್ರತಿಶತ ಗರಿಷ್ಠ ಅಂಕಗಳನ್ನು ನೀಡಿ ನೇಮಕ ಮಾಡಿಕೊಂಡಿರುವಂತೆ ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯನ್ನು ಸೇವೆಯಲ್ಲಿ ವಿಲೀನಗೊಳಿಸದಂತೆ ನಮ್ಮ ಸೇವೆಯನ್ನು ವಿಲೀನಗೊಳಿಸಬೇಕೆಂದು ಒತ್ತಾಯಿಸಿದರು.