ಸರ್ಕಾರಿ ಶಾಲೆಯಲ್ಲಿ ಮೊಬೈಲ್ ಟವರ್: ಮುಖ್ಯಶಿಕ್ಷಕ ಅಮಾನತು
ಬೆಂಗಳೂರು, ಮಾರ್ಚ್ 1: ಸರ್ಕಾರಿ ಶಾಲಾ ಆವರಣದಲ್ಲಿ ಮೊಬೈಲ್ ಟವರ್ ಅಳವಡಿಸಲು ಅವಕಾಶ ಕೊಟ್ಟು ಬಾಡಿಗೆ ಪಡೆದಿದ್ದಾರೆಂದು ಆರೋಪಿಸಿ ಶಾಲೆಯ ಮುಖ್ಯ ಶಿಕ್ಷಕ ವಿರುದ್ಧ ಜ್ಞಾನಭಾರತಿ ಠಾಣೆಗೆ ಶಿಕ್ಷಣ ಇಲಾಖೆ ದೂರು ನೀಡಿದೆ.
ನಾಗರಬಾವಿ ಬಳಿಯ ಮಮುತ್ತುರಾಯ ನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಪಿ. ಪ್ರಕಾಶ್ ವಿರುದ್ಧ ದಕ್ಷಿಣ ವಿಭಾಗದ ಬಿಇಒ ಎನ್. ವೆಂಕಟೇಶ್ ದೂರು ನೀಡಿದ್ದು, ಸೇವೆಯಿಂದ ಅಮಾನತು ಮಾಡಲಾಗಿದೆ.
ಶಾಲಾ ಆವರಣದಲ್ಲಿ ಮೊಬೈಲ್ ಟವರ್ ಅಳವಡಿಸಲು ಪಿ. ಪ್ರಕಾಶ್ ಟವರ್ ವಿಷನ್ ಇಂಡಿಯಾದ ಪ್ರೈ. ಲಿ ಬ್ರಿಗೇಡ್ ಪ್ಲಾಜಾ ಸಂಸ್ಥೆ ಜತೆ ಕಾನೂನು ಬಾಹಿರವಾಗಿ ಒಡಂಬಡಿಕೆ ಮಾಡಿಕೊಂಡಿದ್ದರು. 2008 ರಲ್ಲಿ ಟವರ್ ನಿರ್ಮಿಸಿದ್ದು 48 ಸಾವಿರ ರೂ ಮುಂಗಡ ಪಡೆದು ತಿಂಗಳಿಗೆ 8 ಸಾವಿರ ರೂ ಬಾಡಿಕೆ ಪಡೆಯುತ್ತಿದ್ದರು.
ಶಾಲೆ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯರು ಹಾಗೂ ಪ್ರಕಾಶ್ ಜಂಟಿ ಬ್ಯಾಂಕ್ ಖಾತೆ ತೆರೆದು ಅದಕ್ಕೆ ಬಾಡಿಗೆ ಹಣ ಜಮಾ ಮಾಡುತ್ತಿದ್ದರು. ಅದರಲ್ಲಿ ಶೇ.೧೦ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಸರ್ಕಾರದ ನಿಯಮ ಉಲ್ಲಂಘನೆ ಮಾಡಿರುವ ಮುಖ್ಯ ಶಿಕ್ಷಕನ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಹಾಗೂ ಶಾಲಾ ಮಕ್ಕಳ ಶೈಕ್ಷಣಿಕ ಮತ್ತು ಸುರಕ್ಷತೆ ದೃಷ್ಟಿಯಿಂದ ಟವರ್ ತೆರವುಗೊಳಿಸುವಂತೆ ದೂರಿನಲ್ಲಿ ಬಿಇಒ ಮನವಿ ಮಾಡಿದ್ದಾರೆ.