90 ಸಾವಿರ ಮುಕ್ತ ವಿವಿ ಪದವೀಧರರು ನಿರಾಳ!
ಬೆಂಗಳೂರು, ಫೆಬ್ರವರಿ 16 : ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಯುಜಿಸಿ ಮಾನ್ಯತೆ ರದ್ದಾಗಿರುವುದರಿಂದ ಸಮಸ್ಯೆ ಎದುರಿಸುತ್ತಿರುವ 90 ಸಾವಿರ ವಿದ್ಯಾರ್ಥಿಗಳಿಗೆ ರಿಲೀಫ್ ನೀಡಲು ರಾಜ್ಯ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿದೆ.
ಕೆಎಸ್ಒಯು ವಿಶ್ವವಿದ್ಯಾಲಯದಲ್ಲಿ ದೂರ ಶಿಕ್ಷಣ ಮಾದರಿಯಲ್ಲಿ ತಾಂತ್ರಿಕ ಶಿಕ್ಷಣ ನೀಡಲು ಅವಕಾಶವಿರಲಿಲ್ಲ. ಹೀಗಿದ್ದರೂ ನಿಯಮ ಮೀರಿ ತಾಂತ್ರಿಕ ಶಿಕ್ಷಣ ನೀಡುತ್ತಿದೆ ಎಂಬ ಕಾರಣಕ್ಕೆ ಯುಜಿಸಿಯ ಕೆಎಸ್ಒಯುನ ಮಾನ್ಯತೆ ರದ್ದುಗೊಳಿಸಿತ್ತು. 2015 ರಲ್ಲಿ ಮಾನ್ಯತೆ ರದ್ದಾಗಿದ್ದರಿಂದ 2016-17ನೇ ಸಾಲಿನಿಂದ ಪ್ರವೇಶ ನೀಡಿಲ್ಲ.
2012 ರಿಂದ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡಿ ಮುಗಿಸಿರುವ 90 ಸಾವಿರ ಮಂದಿ ವಿದ್ಯಾರ್ಥಿಗಳು ಪದವಿ ಪ್ರಮಾಣ ಪತ್ರಕ್ಕಾಗಿ ಕಾಯುತ್ತಿದ್ದಾರೆ. ಯುಜಿಸಿ ಮಾನ್ಯತೆ ಲಭಿಸದಿದ್ದರೆ ಪದವಿ ಪಡೆದರೂ ಸಿಂಧುವಾಗುವದಿಲ್ಲ ಎಂಬ ಆತಂಕದಲ್ಲಿದ್ದರು.
2015ರಲ್ಲಿ ಮಾನ್ಯತೆ ರದ್ದಾಗಿದ್ದರೂ ದ್ವಿತೀಯ, ತೃತೀಯ ವರ್ಷದ ವಿದ್ಯಾರ್ಥಿಗಳಿಗೆ ಶಿಕ್ಷಣ ಮುಂದುವರೆಸಲು ಉನ್ನತ ಶಿಕ್ಷಣ ಇಲಾಖೆ ಸೂಚಿಸಿತ್ತು. ಇದೀಗ ಅವರೆಲ್ಲಾ ಪದವಿ ಮುಗಿಸಿದ್ದು ವಿಶ್ವವಿದ್ಯಾಲಯಕ್ಕೆ ಮಾನ್ಯತೆ ಇಲ್ಲದೆ ಸಮಸ್ಯೆ ಎದುರಿಸುತ್ತಿದ್ದರು.
ಇವರಿಗೆ ನ್ಯಾಯಾಲಯದ ನಿರ್ದೇಶನದ ಆಧಾರದ ಮೇಲೆ ಪದವಿಗಳಿಗೆ ಮಾನ್ಯತೆ ನೀಡಲು ಅಗತ್ಯ ಕ್ರಮಕೈಗೊಳ್ಳುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಈ ಕ್ರಮದಿಂದಾಗಿ ಪದವಿಗಳಿಗೆ ಮಾನ್ಯತೆ ಲಭಿಸಲಿದ್ದು ಉದ್ಯೋಗ ಪಡೆಯಲು ಅನುಕೂಲವಾಗಲಿದೆ.