ಗೋವಿಂದೇ ಗೌಡ ಹತ್ಯೆ : ಹೆಗ್ಗನಹಳ್ಳಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ಬೆಂಗಳೂರು, ಡಿಸೆಂಬರ್. 10 : ಮಾಜಿ ಕಾರ್ಪೊರೇಟರ್ ಗೋವಿಂದೇಗೌಡ ಹತ್ಯೆ ಬಳಿಕ ಹೆಗ್ಗನಹಳ್ಳಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಬೆಂಗಳೂರಿನಲ್ಲಿ ಮಾಜಿ ಜೆಡಿಎಸ್ ಕಾರ್ಪೋರೇಟರ್ ಬರ್ಬರ ಹತ್ಯೆ
ಜೆಡಿಎಸ್ ನಾಯಕ, ಮಾಜಿ ಕಾರ್ಪೊರೇಟರ್ ಗೋವಿಂದೇಗೌಡ (59) ಅವರನ್ನು ಶನಿವಾರ ಸಂಜೆ ನಡು ರಸ್ತೆಯಲ್ಲಿಯೇ ಹತ್ಯೆ ಮಾಡಲಾಗಿತ್ತು. ಇಂದು ಮರಣೋತ್ತರ ಪರೀಕ್ಷೆ ನಡೆಯಲಿದ್ದು, ನಂತರ ಶವವನ್ನು ಕುಟುಂಬದವರಿಗೆ ಹಸ್ತಾಂತರ ಮಾಡಲಾಗುತ್ತದೆ.
ಬಿಜೆಪಿ ಕಾರ್ಯಕರ್ತ ಚಿಕ್ಕತಿಮ್ಮೇಗೌಡ ಕೊಲೆ ಆರೋಪಿ ಬಂಧನ
ಗೋವಿಂದೇಗೌಡ ಹತ್ಯೆ ಬಳಿಕ ಹೆಗ್ಗನಹಳ್ಳಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಡಿಸಿಪಿ ಚೇತನ್ ಸಿಂಗ್ ರಾಥೋಡ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚಿಕ್ಕತಿಮ್ಮೇಗೌಡ ಮತ್ತು ಗೋವಿಂದೇಗೌಡ ಮನೆಗೆ ಭದ್ರತೆ ಒದಗಿಸಲಾಗಿದೆ.
2016ರಲ್ಲಿ ನಡೆದ ಬಿಜೆಪಿ ಕಾರ್ಯಕರ್ತ ಚಿಕ್ಕತಿಮ್ಮೇಗೌಡ ಹತ್ಯೆ ಪ್ರಕರಣದಲ್ಲಿ ಗೋವಿಂದೇಗೌಡ ಆರೋಪಿಯಾಗಿದ್ದರು. ಹಳೇ ದ್ವೇಷದ ಹಿನ್ನಲೆಯಲ್ಲಿ ಹತ್ಯೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ರಾಜಗೋಪಾಲನಗರ ಪೊಲೀಸರು ಪ್ರಕರಣದ ದಾಖಲು ಮಾಡಿಕೊಂಡಿದ್ದಾರೆ.
ಚಿಕ್ಕತಿಮ್ಮೇಗೌಡ ಹತ್ಯೆ ಬಳಿಕ ಗೋವಿಂದೇಗೌಡರಿಗೆ ಜೀವ ಬೆದರಿಕೆ ಇತ್ತು. ಆದ್ದರಿಂದ, ಅವರು ಇಬ್ಬರು ಅಂಗ ರಕ್ಷಕರನ್ನು ನೇಮಿಸಿಕೊಂಡಿದ್ದರು. ಶನಿವಾರ ಹತ್ಯೆ ನಡೆಯುವಾಗ ಅವರು ಜೊತೆಗೆ ಇರಲಿಲ್ಲ. ತುಮಕೂರಿನಲ್ಲಿ ಇಂದು ನಡೆಯುವ ಜೆಡಿಎಸ್ ಸಮಾವೇಶಕ್ಕೆ ಜನರನ್ನು ಆಹ್ವಾನಿಸಲು ಹೋಗುತ್ತಿದ್ದಾಗ ಏಳು ದುಷ್ಕರ್ಮಿಗಳು ಹತ್ಯೆ ನಡೆಸಿದ್ದಾರೆ.
'ಕೊಲೆಗೆ ಕಾರಣವೇನು? ಎಂಬುದು ಇನ್ನೂ ತಿಳಿದುಬಂದಿಲ್ಲ. ತನಿಖೆಗೆ ಮಲ್ಲೇಶ್ವರ ಎಸಿಪಿ ನೇತೃತ್ವದಲ್ಲಿ ಮೂರು ತಂಡಗಳನ್ನು ರಚನೆ ಮಾಡಲಾಗಿದೆ' ಎಂದು ಹೆಚ್ಚುವರಿ ಪೊಲೀಸ್ ಆಯುಕ್ತರಾದ ಮಾಲಿನಿ ಕೃಷ್ಣಮೂರ್ತಿ ಹೇಳಿದ್ದಾರೆ.