ಹಿಂದಿನ ಕಾಲದ ಆಹಾರ ಪದ್ಧತಿ ರೂಢಿಸಿಕೊಳ್ಳಿ: ವಜುಭಾಯಿ ವಾಲಾ
ಬೆಂಗಳೂರು ಅಕ್ಟೋಬರ್, 21: ಇಂದಿನ ಪೀಳಿಗೆ ಹಿಂದಿನ ಕಾಲದ ಆಹಾರ ಪದ್ಧತಿಗಳನ್ನು ಕಡೆಗಣಿಸಿ ವಿದೇಶಿ ಆಹಾರ ಪದ್ಧತಿಗಳಿಗೆ ಮಾರುಹೋಗುತ್ತಿದೆ. ಇದರಿಂದ ಕ್ಷಯರೋಗದಂತಹ ಮಹಾಮಾರಿಗೆ ಜನರು ಬಲಿಯಾಗುತ್ತಿದ್ದಾರೆ. ಕ್ಷಯರೋಗ ನಿಯಂತ್ರಣಕ್ಕೆ ಸರ್ಕಾರದ ಜೊತೆ ನಾಗರಿಕರು ಸಹಕರಿಸಬೇಕು ಎಂದು ರಾಜ್ಯಪಾಲ ವಜುಭಾಯಿ ವಾಲಾ ತಿಳಿಸಿದರು.
ನಗರದ ರಾಜಭವದ ಸಭಾಂಗಣದಲ್ಲಿ ಅಕ್ಟೋಬರ್ 20ರ ಮಂಗಳವಾರ ಸಂಜೆ 6 ಗಂಟೆಗೆ ಕರ್ನಾಟಕ ರಾಜ್ಯ ಕ್ಷಯರೋಗ ನಿವಾರಣಾ ಸಂಸ್ಥೆ ಏರ್ಪಡಿಸಿದ್ದ 66ನೇ 'ಕ್ಷಯ ರೋಗ ಮುದ್ರೆಗಳ ಬಿಡುಗಡೆಯ ಅಂದೋಲನ' ಕಾರ್ಯಕ್ರಮವನ್ನು ರಾಜ್ಯಪಾಲ ವಜುಭಾಯಿ ವಾಲಾ ಉದ್ಘಾಟಿಸಿದರು.[ಭಲಾ, ರಾಜಭವನಕ್ಕೆ 4 ಕೋಟಿ ಖರ್ಚು ಮಾಡಿದ ವಾಲಾ!]
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಜುಭಾಯಿ ವಾಲಾ ಅವರು, 'ಹಿಂದಿನ ಕಾಲದ ಜನರು ಉತ್ತಮ ಆಹಾರ ಪದ್ದತಿ ರೂಡಿಸಿಕೊಂಡಿದ್ದರು. ಆದ್ದರಿಂದ ಅವರ ಬದುಕು, ದೇಹ ಆರೋಗ್ಯಯುತವಾಗಿತ್ತು. ಇಂದಿನ ಪೀಳಿಗೆ ಹಿಂದಿನ ಆಹಾರಪದ್ಧತಿಯನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಇದರಿಂದ ವಿವಿಧ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಹಾಗಾಗಿ ತಮ್ಮ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸುವ ಅಗತ್ಯತೆ ಇದೆ' ಎಂದು ಕಿವಿಮಾತು ಹೇಳಿದರು.
ಅಲ್ಲದೇ ಕೇವಲ ಸರ್ಕಾರ ಮಾತ್ರವೇ ಕ್ಷಯರೋಗ ನಿಯಂತ್ರಣ ಮಾಡುವುದು ಅಸಾಧ್ಯ. ಸಮಾಜದ ಪ್ರತಿಯೊಬ್ಬರು ಇದರಲ್ಲಿ ಪಾಲ್ಗೊಂಡು ರೋಗವನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡುವಲ್ಲಿ ಸಹಕರಿಸಬೇಕು. ಆಗ ಮಾತ್ರ 'ಮುಕ್ತ ಕ್ಷಯರೋಗ ರಾಜ್ಯ' ನಿರ್ಮಾಣ ಮಾಡಲು ಸಾಧ್ಯ ಎಂದು ಘನತೆವೆತ್ತ ರಾಜ್ಯಪಾಲ ವಜುಭಾಯಿ ವಾಲ ಅವರು ಕರೆ ನೀಡಿದರು.[ರಾಷ್ಟ್ರಗೀತೆ ವೇಳೆ ವೇದಿಕೆ ಬಿಟ್ಟಿಳಿದ ರಾಜ್ಯಪಾಲರು]
ಪ್ರತಿ ರೋಗಿಗೆ ಮನೆ ಸಮೀಪವೇ ಪೂರ್ಣಾವಧಿ ಔಷಧಿ ದೊರೆಯುವ ಸಲುವಾಗಿ ನೇರ ನಿಗಾವಣೆ ಅಲ್ಪಾವಧಿ ಚಿಕಿತ್ಸೆ (ಡಾಟ್ಸ್) ವಿಧಾನವನ್ನು ಅಳವಡಿಸಿ ಸುಮಾರು 40,400 ಡಾಟ್ಸ್ ಕೇಂದ್ರಗಳನ್ನು ತೆರೆಯಲಾಗಿದೆ. ಕ್ಷಯ ರೋಗದ ಔಷಧಿಗಳನ್ನು ಎಲ್ಲಾ ಆರೋಗ್ಯ ಕೇಂದ್ರಗಳಲ್ಲೂ ದೊರೆಯುವ ವ್ಯವಸ್ಥೆ ಮಾಡಲಾಗಿದೆ.
ಒಟ್ಟಿನಲ್ಲಿ ಕ್ಷಯರೋಗವನ್ನು ಸಂಪೂರ್ಣವಾಗಿ ನಿಯಂತ್ರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾಧರ್ ಹೇಳಿದರು.[ಬೆಂಗಳೂರಿನಲ್ಲಿ ಲಸಿಕೆಯಿಲ್ಲದ ಮಾರಣಾಂತಿಕ ಕ್ಷಯ?]
ಕರ್ನಾಟಕ ರಾಜ್ಯ ಕ್ಷಯರೋಗ ನಿವಾರಣಾ ಸಂಸ್ಥೆ ರಾಜ್ಯ ಕ್ಷಯರೋಗ ನಿಯಂತ್ರಣಾ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿದೆ. ಪ್ರತಿಯೊಂದು ಜಿಲ್ಲೆಗಳು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ, ರಾಜ್ಯ ಕ್ಷಯರೋಗ ಸಂಸ್ಥೆಗಳು ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು, ಕ್ಷಯ ರೋಗ ನಿಯಂತ್ರಣ ಕಾರ್ಯಕ್ರಮದಲ್ಲಿ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ ಎಂದು ತಿಳಿಸಿದರು.