ಖಾಸಗಿ ಆಸ್ಪತ್ರೆಗಳ ಹಿತ ಕಾಪಾಡೋದು ಸರ್ಕಾರದ ಜವಾಬ್ದಾರಿ: ಸಂದರ್ಶನ
ಬೆಂಗಳೂರು, ನವೆಂಬರ್ 16 : ಕರ್ನಾಟಕ ಖಾಸಗಿ ಆಸ್ಪತ್ರೆ ನಿಯಂತ್ರಣ ತಿದ್ದುಪಡಿ ವಿಧೇಯಕ(ಕೆಪಿಎಂಇ) ವಿರುದ್ಧ ಖಾಸಗಿ ವೈದ್ಯರು ನಡೆಸುತ್ತಿರುವ ಮುಷ್ಕರ ಗುರುವಾರ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಸರ್ಕಾರದೊಂದಿಗೆ ಸಂಧಾನ ಮಾತುಕತೆ ವಿಫಲವಾದ ಹಿನ್ನೆಲೆ ಬೆಂಗಳೂರಿನಲ್ಲಿ ಇಂದು ಹೊರರೋಗಿಗಳ ವಿಭಾಗವನ್ನು ಬಂದ್ ಮಾಡಲಾಗಿದೆ ಈ ವಿಷಯ ಕುರಿತು ದಿ ಬೆಂಗಳೂರು ಆಸ್ಪತ್ರೆಯ ಮಧುಮೇಹತಜ್ಞರಾದ ಡಾ. ಸಿ. ಮುನಿಚೂಡಪ್ಪ ಅವರು "ಒನ್ ಇಂಡಿಯಾ"ಕ್ಕೆ ಸಂದರ್ಶನ ನೀಡಿದ್ದಾರೆ.
In Pics:ವೈದ್ಯರ ಮುಷ್ಕರ : ಎಲ್ಲಾ ಕಡೆ ಆಸ್ಪತ್ರೆ ಬಂದ್ ಬಂದ್ ಬಂದ್
ಕೆಪಿಎಂಇ ಕಾಯ್ದೆಯನ್ನು ನಾವು ವಿರೋಧಿಸುತ್ತೇವೆ ಕಾಯ್ದೆಯಲ್ಲಿ ತಿದ್ದುಪಡಿ ತರುವ ಅಗತ್ಯವಿದೆ. ಎಲ್ಲಾ ಆಸ್ಪತ್ರೆಗಳು ಒಂದೇ ರೀತಿಯಾಗಿರುವುದಿಲ್ಲ. ಕೆಲವು ಆಸ್ಪತ್ರೆಗಳು ಹೆಚ್ಚು ಹಣವನ್ನು ಪಡೆಯಬಹುದು ಇನ್ನು ಕೆಲವು ಆಸ್ಪತ್ರೆಗಳು ಕಡಿಮೆ ಹಣವನ್ನು ಪಡೆಯಬಹುದು. ಆದರೆ ಆ ಕೆಲವು ಆಸ್ಪತ್ರೆಗಳಿಂದಾಗಿ ನಮ್ಮ ಆಸ್ಪತ್ರೆಗಳಿಗೆ ತೊಂದರೆಯಾಗುತ್ತಿದೆ.
ಸರ್ಕಾರ ಎಲ್ಲಾ ಖಾಸಗಿ ಆಸ್ಪತ್ರೆಗಳಿಗೆ ಸೇರಿಸಿ ಈ ವಿಧೇಯಕವನ್ನು ಜಾರಿ ಮಾಡುವುದು ತಪ್ಪು. ನಾವು ನಮ್ಮ ಆಸ್ಪತ್ರೆಯಲ್ಲಿ ನಷ್ಟ ಮಾಡಿಕೊಳ್ಳದೆ ಅತಿಯಾದ ಲಾಭವನ್ನು ಇಟ್ಟುಕೊಳ್ಳದೆ ಕೆಲಸ ನಿರ್ವಹಿಸುತ್ತಿದ್ದೇವೆ.
ಸರ್ಕಾರಿ ವೈದ್ಯರಿಗೆ ಸರ್ಕಾರದ ಬೆಂಬಲವಿದೆ: ಸರ್ಕಾರಿ ಆಸ್ಪತ್ರೆಗಳಲ್ಲಿ ಒಂದೊಮ್ಮೆ ರೋಗಿಗಳು ಮೃತಪಟ್ಟರೆ ಸರ್ಕಾರ ಪ್ರಶ್ನೆ ಮಾಡುವುದಿಲ್ಲ. ಆದರೆ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ವೇಳೆಯಲ್ಲಿ ಯಾವುದೇ ವೇಳೆಯಲ್ಲಿ ಮೃತಪಟ್ಟರೂ, ಗ್ರಾಹಕರ ನ್ಯಾಯಾಲಯಕ್ಕೆ ಸೂರು ನೀಡುತ್ತಾರೆ. ಐದು ಲಕ್ಷದವರೆ ದಂಡ ಮತ್ತು ಐದು ವರ್ಷದವರೆಗೆ ಜೈಲುಶಿಕ್ಷೆ ವಿಧಿಸಲಾಗುತ್ತದೆ. ವೈದ್ಯರು ರೋಗಿಗಳ ಚೇತರಿಕೆಯನ್ನೇ ಬಯಸುತ್ತಾರೆ ವಿನಃ ಅವರ ಸಾವನ್ನಲ್ಲ.
ಮಾನವೀಯತೆ ಮರೆತ ವೈದ್ಯರು ನಿಲ್ಲದ ರೋಗಿಗಳ ಅಳಲು
ಖಾಸಗಿ ಆಸ್ಪತ್ರೆ ಕಟ್ಟುವುದು ಸುಲಭದ ಕೆಲಸವಲ್ಲ: ಸರ್ಕಾರಿ ಆಸ್ಪತ್ರೆಗಳನ್ನು ನಿರ್ಮಿಸುವುದಾದರೆ ಸರ್ಕಾರ ಅದರ ವೆಚ್ಚವನ್ನು ಭರಿಸುತ್ತದೆ, ಆಸ್ಪತ್ರೆಗೆ ಬೇಕಾದ ಉಪಕರಣಗಳನ್ನು ಸರ್ಕಾರ ಒದಗಿಸುತ್ತದೆ. ಆದರೆ ಖಾಸಗಿ ಆಸ್ಪತ್ರೆಗಳನ್ನು ಕಟ್ಟಲು ಸ್ವಂತವಾಗಿ ಜಾಗವನ್ನು ಖರೀದಿ ಮಾಡಬೇಕು.
ತಂತ್ರಜ್ಞರನ್ನು ನೇಮಿಸಕೊಳ್ಳುವುದು, ಸ್ವಂತವಾಗಿ ಉಪಕರಣವನ್ನು ಕೊಂಡುಕೊಳ್ಳುವುದು, ವೈದ್ಯರ ನೇಮಕ ಸೇರಿದಂತೆ ಎಲ್ಲಾ ಕೆಲಸವನ್ನು ಸ್ವಂತ ಹಣದಲ್ಲಿ ನಿರ್ವಹಿಸಬೇಕಾಗುತ್ತದೆ. ಹೀಗಿರುವಾಗ ಸರ್ಕಾರಿ ಆಸ್ಪತ್ರೆಗಳಲ್ಲಿ ನೀಡುವ ಅಷ್ಟೇ ಹಣವನ್ನು ಖಾಸಗಿ ಆಸ್ಪತ್ರೆಯಲ್ಲಿ ಪಡೆದರೆ ಆಸ್ಪತ್ರೆಯ ನಿರ್ವಹಣೆ ಕಷ್ಟವಾಗುತ್ತದೆ.
ಖಾಸಗಿ ಆಸ್ಪತ್ರೆ ವೈದ್ಯರಿಗೆ ಜೋಗಿ ಬರೆದ ಆತ್ಮೀಯ ಪತ್ರ
ರಾಜಕಾರಣಿಗಳು ಯಾರೂ ಸರ್ಕಾರಿ ಆಸ್ಪತ್ರೆಗಳಿಗೆ ಹೋಗುವುದಿಲ್ಲ: ಎಲ್ಲಾ ರಾಜಕಾರಣಿಗಳು ಖಾಸಗಿ ಆಸ್ಪತ್ರೆಗೆ ತೆರಳುತ್ತಾರೆ. ಆದರೆ ಖಾಸಗಿ ಆಸ್ಪತ್ರೆಯನ್ನೇ ದೂರುತ್ತಾರೆ. ಸ್ವಾತಂತ್ರ್ಯ ನಂತರದ ಕೆಲವು ವರ್ಷಗಳಲ್ಲಿ ರಾಜಕಾರಣಿಗಳು ಎಂದರೆ ಗೌರವವಿತ್ತು. ಅಧಿಕಾರ ಅವಧಿ ಮುಗಿದರೂ ಅವರು ಬದುಕಿದಷ್ಟು ವರ್ಷ ಅವರ ಬಳಿ ಹಣವಿರಲಿ ಸ್ವಂತ ಮನೆಯೂ ಕೂಡ ಇರುತ್ತಿರಲಿಲ್ಲ. ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತಿದ್ದರು. ಆದರೆ ಈಗ ಎಲ್ಲರಿಗೂ ಹಣ ಪಕ್ಷವೇ ಮುಖ್ಯವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ರಮೇಶ್ ರಮೇಶ್ ಕುಮಾರ್ ಎಲ್ಲರೂ ಮೊಂಡು ತನವನ್ನು ತೋರುತ್ತಿದ್ದಾರೆ.
ಒಂದು ವೇಳೆ ವಿಧೇಯಕ ಮಂಡನೆಯಾದರೆ ಎಲ್ಲಾ ಖಾಸಗಿ ಆಸ್ಪತ್ರೆಗಳು ಬಾಗಿಲು ಮುಚ್ಚುತ್ತವೆ. ಸರ್ಕಾರಿ ಆಸ್ಪತ್ರೆಗಳಿಗೆ ರೋಗಿಗಳು ಬರುತ್ತಾರೆ ಆದರೆ ಎಲ್ಲಾ ರೋಗಿಗಳಿಗೆ ಸಮರ್ಪಕವಾದ ಚಿಕಿತ್ಸೆ ನೀಡಲು ಸರ್ಕಾರಕ್ಕೆ ಸಾಧ್ಯವಿದೆಯೇ ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ. ಖಾಸಗಿ ಆಸ್ಪತ್ರೆಗಳು ನಷ್ಟದಲ್ಲಿ ಮುಂದುವರೆಸಿಕೊಂಡು ಹೋಗಲು ಸಾಧ್ಯವಿಲ್ಲ ಎಂದು ಡಾ. ಮುನಿಚೂಡಪ್ಪ ನುಡಿದಿದ್ದಾರೆ.