ಸರಕಾರ, ಬಿಡಿಎ ಸೇರಿಕೊಂಡು ಬೆಂಗ್ಳೂರನ್ನು ಹಾಳು ಮಾಡ್ತಿವೆ: ಸುಪ್ರೀಂ
ಬೆಂಗಳೂರಿನಲ್ಲಿನ ಗೊಂದಲಕ್ಕೆ ಕರ್ನಾಟಕ ಸರಕಾರ ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಜವಾಬ್ದಾರಿ. ಡಾ.ಕೆ.ಶಿವರಾಂ ಕಾರಂತ ಬಡಾವಣೆಗೆ ಸ್ವಾಧೀನ ಪಡಿಸಿಕೊಳ್ಳಬೇಕು ಅಂತಿದ್ದ 650 ಎಕರೆ ಜಾಗವನ್ನು ಕೈ ಬಿಡಬಾರದು ಎಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
2008ರಲ್ಲಿ ಈ ಬಡಾವಣೆ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಿ, ಆ ನಂತರ ರಾಜಕೀಯ ಪ್ರಭಾವಿಗಳು ಅಥವಾ ಬೇರೆ ಯಾವುದೋ ಪ್ರಭಾವಕ್ಕೆ ದೊಡ್ಡ ಮಟ್ಟದ ಭೂ ಸ್ವಾಧೀನವನ್ನು ಕೈ ಬಿಡಲಾಗಿದೆ ಎಂಬ ಆರೋಪಕ್ಕೆ ಸುಪ್ರೀಂ ಕೋರ್ಟ್ ಪ್ರಬಲವಾಗಿ ಆಕ್ಷೇಪ ವ್ಯಕ್ತಪಡಿಸಿದೆ.
ಬಿಡಿಎ ಹೊಸ ಕಟ್ಟಡ : 171 ಮರಗಳಿಗೆ ಕೊಡಲಿ ಪೆಟ್ಟು, ಸ್ಥಳೀಯರ ವಿರೋಧ
ನ್ಯಾ. ಅರುಣ್ ಮಿಶ್ರಾ, ಎಸ್. ಅಬ್ದುಲ್ ನಜೀರ್ ಅವರನ್ನು ಒಳಗೊಂಡ ಪೀಠವು ಕರ್ನಾಟಕ ಹೈಕೋರ್ಟ್ ನ ನಿವೃತ್ತ ನ್ಯಾ. ಕೆ.ಎನ್.ಕೇಶವನಾರಾಯಣ ಅವರನ್ನು ನೇಮಿಸಿ, ಬಿಡಿಎ ಅಥವಾ ಸರಕಾರಿ ಅಧಿಕಾರಿಗಳಲ್ಲಿ ಯಾರು ಜವಾಬ್ದಾರರು ಎಂದು ನಿರ್ಧರಿಸುವುದಕ್ಕೆ ವಿಚಾರಣೆ ನಡೆಸಲು ತಿಳಿಸಿತ್ತು.
ಭೂಸ್ವಾಧೀನ ಮುಂದುವರಿಸಬೇಕು ಹಾಗೂ ಮೂರು ತಿಂಗಳ ಒಳಗಾಗಿ ಈ ಬಗ್ಗೆ ವರದಿ ಸಲ್ಲಿಸಬೇಕು ಎಂದು ಸರಕಾರ ಮತ್ತು ಬಿಡಿಎಗೆ ಸುಪ್ರೀಂ ಕೋರ್ಟ್ ನಿರ್ದೇಶಿಸಿತ್ತು. ಯೋಜನಾಬದ್ಧ ಹಾಗೂ ಸರಿಯಾದ ನಗರಕ್ಕೆ ಭೂ ಸ್ವಾಧೀನವು ಬಹಳ ಅಗತ್ಯ ಎಂದು ಸುಪ್ರೀಂ ತಿಳಿಸಿದೆ.
ಡಿಸೆಂಬರ್ 30,2008ರಲ್ಲಿ ಈ ಯೋಜನೆಗೆ ಚಾಲನೆ ದೊರೆತಿತ್ತು. 45% ಭೂಮಿ ರಸ್ತೆ, ಮೈದಾನದಂಥ ನಾಗರಿಕ ಸೌಲಭ್ಯಗಳಿಗಾಗಿ ಹಾಗೂ 55% ಸ್ಥಳ ವಸತಿ ನಿವೇಶನಗಳಿಗೆ ಎಂದು ತೀರ್ಮಾನಿಸಲಾಗಿತ್ತು. ಒಂದೋ ವಸತಿ ನಿವೇಶನ ಅಥವಾ ಪರಿಹಾರ ಎರಡರಲ್ಲಿ ಒಂದನ್ನು ರೈತರಿಗೆ ಭೂಸ್ವಾಧೀನ ಕಾಯ್ದೆ ಅಡಿಯಲ್ಲಿ ಪರಿಹಾರವಾಗಿ ನೀಡಲು ನಿರ್ಧರಿಸಲಾಗಿತ್ತು.
ಆದರೆ, ಆ ನಂತರ ಭೂ ಸ್ವಾಧೀನದಿಂದ ದೊಡ್ಡ ಪ್ರಮಾಣದ ಭೂಮಿಯನ್ನು ಕೈಬಿಡಲು ನಿರ್ಧರಿಸಲಾಯಿತು. ವಿಶೇಷ ಭೂಸ್ವಾಧೀನಾಧಿಕಾರಿಯೇ 498 ಎಕರೆ ಭೂಮಿಯನ್ನು ಕೈ ಬಿಡಲು ತೀರ್ಮಾನಿಸಿದ್ದು ವಿಧಾನಸಭೆಯಲ್ಲಿ ಹಾಗೂ ಸಾರ್ವಜನಿಕರಲ್ಲಿ ಹುಬ್ಬೇರುವಂತೆ ಮಾಡಿತ್ತು ಎಂದು ಪೀಠವು ಹೇಳಿದೆ.