ಪೇದೆಗಳ ಮೇಲೆ ಹಲ್ಲೆ, ಬಂದೂಕು ಕಸಿದು ಪರಾರಿ
ಬೆಂಗಳೂರು, ಜನವರಿ 18: ರಾತ್ರಿ ಪಾಳಿಯಲ್ಲಿ ಗಸ್ತು ತಿರುಗುತ್ತಿದ್ದ ಇಬ್ಬರು ಪೊಲೀಸ್ ಪೇದೆಗಳ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳ ತಂಡ ಪೇದೆಗಳ ಬಂದೂಕನ್ನು ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಕೊಡಿಗೆಹಳ್ಳಿಯಲ್ಲಿ ನಡೆದಿದೆ.
ಕೊಡಿಗೆಹಳ್ಳಿ ಠಾಣೆಯ ಪೇದೆಗಳಾದ ಪರಮೇಶ್ವರ್ ಮತ್ತು ಸಿದ್ದಪ್ಪ ಬುಧವಾರ ರಾತ್ರಿ ಪಾಳಿಯಲ್ಲಿದ್ದರು, ಕೊಡಿಗೆಹಳ್ಳಿ ಬಳಿ ಭದ್ರಪ್ಪಾ ಲೇಔಟ್ ಬಳಿ ರಾತ್ರಿ 2 ಗಂಟೆಗೆ ಸುಮಾರಿಗೆ ಗಸ್ತು ತಿರುಗಬೇಕಾದರೆ ಮನೆಯೊಂದರ ಬಳಿ ನಾಲ್ವರು ಕಾರು ನಿಲ್ಲಿಸಿಕೊಂಡು ಅನುಮಾನಾಸ್ಪದವಾಗಿ ನಿಂತಿದ್ದನ್ನು ಗಮನಿಸಿದ್ದಾರೆ. ಪೊಲೀಸರನ್ನು ನೋಡಿ ಆ ವ್ಯಕ್ತಿಗಳು ಅವಿತುಕೊಂಡಿದ್ದಾರೆ, ಅವಿತುಕೊಂಡ ಅಗಂತುಕರನ್ನು ಹಿಡಿಯಲು ಹೋದಾಗ ತಿರುಗಿ ಬಿದ್ದ ದುಷ್ಕರ್ಮಿಗಳು ಪೇದೆಗಳ ಮೇಲೆ ಹಲ್ಲೆ ಮಾಡಿದ್ದಾರೆ.
ಪೇದೆಗಳನ್ನು ಹಿಗ್ಗಾ-ಮುಗ್ಗಾ ಥಳಿಸಿದ ದುಷ್ಕರ್ಮಿಗಳು ಪೇದೆಗಳ ಬಳಿಯಿದ್ದ 303 ಬಂದೂಕನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ, ಹಲ್ಲೆಗೊಳಗಾದ ಪೇದೆಗಳು ಕೂಡಲೇ ಕೊಡಿಗೆಹಳ್ಳಿ ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ, ಹಿರಿಯ ಅಧಿಕಾರಿಗಳು, ಹೊಯ್ಸಳ ಪೊಲೀಸರು ಸ್ಥಳಕ್ಕೆ ಬಂದು ಸಾಕಷ್ಟು ಹುಡುಕಾಟ ನಡೆಸಿದರೂ ಹಲ್ಲೆಕೋರರು ದೊರಕಿಲ್ಲ. ಕೊಡಿಗೆಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.