ಬೆಂಗಳೂರಿಗೆ ವಿದಾಯ ಹೇಳಿದ 'ಪಂಕ್ಚರ್ ಮಾಫಿಯಾ' ಪತ್ತೆದಾರ ಬೆನೆಡಿಕ್ಟ್
ಬೆನ್ನುಹತ್ತಿ ರಿಂಗ್ ರೋಡ್ ಹಾಗೂ ಅದರ ಸುತ್ತಲಿನ ಪ್ರದೇಶಗಳಲ್ಲಿ ಪ್ರತಿ ದಿನ ರಾಶಿಗಟ್ಟಲೆ ಬೀಳುತ್ತಿದ್ದ ಮೊಳೆಗಳನ್ನು ಪತ್ತೆ ಹಚ್ಚಿದ್ದರು. ಈವರೆಗೆ 50 ಕೆಜಿಗೂ ಹೆಚ್ಚು ಮೊಳೆಗಳನ್ನು ಸಂಗ್ರಹಿಸಿದ್ದು, ಅದರ ವಿಲೇವಾರಿಯೂ ಕಷ್ಟವಾಗಿದೆಯಂತೆ.
ಬೆಂಗಳೂರು, ಫೆಬ್ರವರಿ 8: ಬೆಂಗಳೂರು ನಗರದ ಪಂಕ್ಚರ್ ಮಾಫಿಯಾ ಪತ್ತೆ ಹಚ್ಚಿದ್ದ ಬೆನೆಡಿಕ್ಟ್ ಜೆಬಕುಮಾರ್ ಅವರು ಶೀಘ್ರವೇ ಬೆಂಗಳೂರಿಗೆ ವಿದಾಯ ಹೇಳಲಿದ್ದಾರೆ.
ಇದೇ ಶುಕ್ರವಾರ (ಫೆಬ್ರವರಿ 10) ಅವರು ಬೆಂಗಳೂರನ್ನು ತೊರೆಯಲಿರುವುದಾಗಿ ತಿಳಿಸಿದ್ದಾರೆ. ಆದರೆ, ಅವರು ನಗರವನ್ನು ತೊರೆಯಲಿರುವ ಕಾರಣ ಬಹಿರಂಗಗೊಂಡಿಲ್ಲ. [ಪಂಕ್ಚರ್ ಮಾಫಿಯಾ ಪತ್ತೆ ಹಚ್ಚಿದ ಬೆಂಗಳೂರು ಇಂಜಿನಿಯರ್]
ಮುಂದೆ ಅವರು ಯಾವ ಊರಿಗೆ ತೆರಳಲಿದ್ದಾರೆ ಎಂಬ ಬಗ್ಗೆಯೂ ಮಾಹಿತಿಯಿಲ್ಲ.
ಕಂಪನಿಯೊಂದರಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದ ಅವರು, ಐದು ವರ್ಷಗಳ ಹಿಂದೆ ಕೆಲಸಕ್ಕೆ ಹೋಗಿ ಬರುವಾಗ ತಮ್ಮ ವಾಹನ ಪದೇ ಪದೇ ಪಂಕ್ಚರ್ ಆಗುತ್ತಿದ್ದುದನ್ನು ಗಮನಿಸಿದ್ದರಲ್ಲದೆ, ಅನೇಕರೂ ಇಂಥದ್ದೇ ತೊಂದರೆಗೊಳಗಾಗುತ್ತಿದ್ದನ್ನು ನೋಡಿದ್ದರು.
ಇದರ ಹಿಂದೆ ಯಾರದ್ದೋ ಕೈವಾಡವಿರಬೇಕೆಂದು ನಿರ್ಧರಿಸಿದ್ದ ಅವರು, ಅದರ ಬೆನ್ನುಹತ್ತಿ ರಿಂಗ್ ರೋಡ್ ಹಾಗೂ ಅದರ ಸುತ್ತಲಿನ ಪ್ರದೇಶಗಳಲ್ಲಿ ಪ್ರತಿ ದಿನ ರಾಶಿಗಟ್ಟಲೆ ಬೀಳುತ್ತಿದ್ದ ಮೊಳೆಗಳನ್ನು ಪತ್ತೆ ಹಚ್ಚಿದ್ದರು. ಸುಮಾರು ಐದು ವರ್ಷಗಳಿಂದ ಇಂಥ ಮೊಳೆಗಳನ್ನು ಪತ್ತೆ ಹಚ್ಚುತ್ತಿದ್ದ ಅವರು, 50 ಕೆಜಿಗಿಂತಲೂ ಹೆಚ್ಚು ಮೊಳೆಗಳನ್ನು ಸಂಗ್ರಹಿಸಿದ್ದಾರೆ.
ಅವರ ಈ ಸೇವೆ, ದೇಶ ವಿದೇಶಗಳಲ್ಲೂ ಮಾಧ್ಯಮಗಳ ಮೂಲಕ ಹರಿದಾಡಿತ್ತು.
ಈ ಪ್ರಾಂತ್ಯದಲ್ಲಿ ಪಂಕ್ಚರ್ ಅಂಗಡಿಗಳ ಕೆಲಸಗಾರರು ವಾಹನಗಳು ಪಂಕ್ಚರ್ ಆಗಲೆಂದೇ ಇಂಥ ಕುತಂತ್ರಗಳನ್ನು ಮಾಡುತ್ತಿದ್ದರೆಂಬುದು ಅವರ ವಾದವಾಗಿತ್ತು.
ಈವರೆಗೆ ಸಂಗ್ರಹಿಸಲಾಗಿರುವ ಸುಮಾರು 50 ಕೆಜಿ ಮೊಳೆಗಳನ್ನು ವಿಲೇವಾರಿ ಮಾಡುವುದೇ ಅವರಿಗೆ ಕಷ್ಟವಾಗಿದೆಯೆಂದು ಅವರು ಹೇಳಿಕೊಂಡಿದ್ದಾರೆ.