ಕೃತ್ರಿಮ ಗರ್ಭಧಾರಣೆ ಮನುಷ್ಯತ್ವಕ್ಕೆ, ಧಾರ್ಮಿಕತೆಗೆ ವಿರುದ್ಧ
ಬೆಂಗಳೂರು, ಸೆ 9: ಗೋವುಗಳಿಗೆ ಕೃತ್ರಿಮ ಗರ್ಭಧಾರಣೆ ಮಾಡುವುದು ಧಾರ್ಮಿಕತೆಗೆ ವಿರುದ್ಧ ಹೌದೋ ಅಲ್ಲವೋ ಅನ್ನುವುದಕ್ಕಿಂತ ಅದು ಮನುಷ್ಯತ್ವಕ್ಕೆ ವಿರುದ್ಧವಾಗಿದೆ ಎಂದು ಹೊಸನಗರ ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳು ಅಭಿಪ್ರಾಯ ಪಟ್ಟಿದ್ದಾರೆ.
ನಗರದಲ್ಲಿ ಗೋಚಾತುರ್ಮಾಸ್ಯ (ಸೆ 9) ಕಾರ್ಯಕ್ರಮದಲ್ಲಿ ಪ್ರವಚನ ನೀಡುತ್ತಾ ಶ್ರೀಗಳು, ತನ್ನಂತೆ ಪರರು ಎಂದು ಭಾವಿಸುವ ನಾವು ಗೋವುಗಳಿಗೆ ಮಾಡಿದಂತೆ, ಎಲ್ಲಾ ಮನುಷ್ಯರಿಗೆ ಕೃತ್ರಿಮ ಗರ್ಭಧಾರಣೆ ಮಾಡಲು ಒಪ್ಪುತ್ತೇವೆಯೇ ಎಂದು ಶ್ರೀಗಳು ಪ್ರಶ್ನಿಸಿದ್ದಾರೆ. (ರಾಮಚಂದ್ರಾಪುರ ಮಠಕ್ಕೆ ಪಿವಿ ಸಿಂಧು ಭೇಟಿ)
ಗೋವುಗಳಿಗೆ ಸಹಜ ಗರ್ಭಧಾರಣೆಗೆ ಅವಕಾಶಕೊಡದೆ, ಕೃತಕ ಗರ್ಭಧಾನ ಮಾಡುವುದು ಗೋವುಗಳ ಹಕ್ಕಿನ ಮೇಲಾಗುತ್ತಿರುವ ಆಕ್ರಮಣವಲ್ಲವೇ, ನಮ್ಮ ಹಕ್ಕುಗಳಿಗೆ ಚ್ಯುತಿ ಬಂದಾಗ ನ್ಯಾಯಾಲಯಗಳ ಮೆಟ್ಟಿಲೇರುವ ನಾವು ಗೋವುಗಳ ಹಕ್ಕನ್ನು ಕಸಿಯುವುದು ಎಷ್ಟು ಸರಿ ಎಂದು ವಿಷಾದ ವ್ಯಕ್ತ ಪಡಿಸಿದ್ದಾರೆ.
ದೇಶೀ ಹಸುಗಳಿಗೆ ಮಿಶ್ರತಳಿಯ ಧಾತುವನ್ನು ಬಳಸಿ ಕೃತಕ ಗರ್ಭಧಾನ ಮಾಡುವುದು ಅವೈಜ್ಞಾನಿಕವಾಗಿದ್ದು, ಸಣ್ಣ ತಳಿಯ ಹಸುಗಳಿಗೆ ದೊಡ್ಡ ಗಾತ್ರದ ಹಸುವಿನಿಂದ ಗರ್ಭವಾದರೆ ಕರು ಹೊರಬರಲಾಗದೇ ಹಸು-ಕರು ಎರಡೂ ದುರ್ಮರಣವನ್ನು ಹೊಂದುತ್ತದೆ.
ಕೃತ್ರಿಮ ಗರ್ಭಧಾರಣೆ ಮಾಡುವಾಗ ಗರ್ಭಕೋಶಕ್ಕೂ ಹಾನಿಯಾಗುವ ಸಂಭವವಿರುತ್ತದೆ, ಇದರಲ್ಲಿ ಯಶಸ್ಸಿನ ಅಂಶವೂ ಸರಾಸರಿ 50% ಮಾತ್ರ ಆಗಿದೆ.
ಹಾಗೆಯೇ ಇತ್ತೀಚಿನ ದಿನಗಳಲ್ಲಿ ಕೇಳಿಬರುತ್ತಿರುವ ಬ್ರೂಸೆಲ್ಲೋಸಿಸ್ ಮುಂತಾದ ಅನೇಕ ರೋಗಗಳ ಮೂಲ ಕೃತ್ರಿಮ ಗರ್ಭಧಾರಣೆಯಿಂದ ಹುಟ್ಟಿದ ಮಿಶ್ರತಳಿಗಳಲ್ಲಿ ಮಾತ್ರ ಕಾಣಲು ಸಾಧ್ಯ ಎಂದು ಶ್ರೀಗಳು ಹೇಳಿದರು.
ಯಾದಗಿರಿ ಸೊಪ್ಪಿನ ಬಸವೇಶ್ವರ ಮಠದ ಚನ್ನವೀರ ಸ್ವಾಮೀಜಿ ಹಾಗೂ ಗುರುಶಾಂತ ಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಂತಸಂದೇಶ ನೀಡಿ, ರಾಮಚಂದ್ರಾಪುರಮಠದ ಗೋಯಾತ್ರೆಗೆ ನಮ್ಮ ಬೆಂಬಲವಿದ್ದು, ಗೋವಿನ ಕುರಿತಾದ ಈ ಮಹಾ ಆಂದೋಲನಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಕರೆನೀಡಿದರು. (ಕಾಲ ಕೆಟ್ಟಿದೆಯೆಂದು ಕೂರಬೇಡ)
ಯಕ್ಷಗಾನ ಕಲೆಯ ಮೂಲಕ ವಿಶಿಷ್ಟವಾಗಿ ಕಲೆಯ ಮೂಲಕವೂ ಗೋವಿನ ಕುರಿತಾಗಿ ಜಾಗೃತಿ ಮೂಡಿಸಲು ಸಾಧ್ಯ ಎನ್ನುವುದನ್ನು ಸಾಧಿಸಿ ತೋರಿಸಿರುವ ಹೊಸನಗರದ ರಾಮಾರ್ಪಣ ಕಲಾವೇದಿಕೆ, ಮಾರುತೀಪುರ ಹಾಗೂ ಗೋಪ್ರೇಮಿ ನ್ಯಾಯವಾದಿ ಬಿ ಎಸ್ ಪೈ ಅವರಿಗೆ ಶ್ರೀಗಳು ಗೋಸೇವಾ ಪುರಸ್ಕಾರವನ್ನು ಅನುಗ್ರಹಿಸಿದರು.
ಶ್ರೀಭಾರತೀಪ್ರಕಾಶನವು ಹೊರತಂದ ಗೃಹವಾಸ್ತು ಪುಸ್ತಕ ಹಾಗೂ ಸಾಧನಾಪಂಚಕ ಪ್ರವಚನಮಾಲಿಕೆಯ ದೃಶ್ಯ ಮುದ್ರಿಕೆಯನ್ನು ಸಾನ್ನಿಧ್ಯವಹಿಸಿದ್ದ ಸಂತರು ಲೋಕಾರ್ಪಣೆ ಮಾಡಿದರು.
ಸಭಾಕಾರ್ಯಕ್ರಮದ ನಂತರ ಕಲಾರಾಮ ವೇದಿಕೆಯಲ್ಲಿ ಗೋಪ್ರೀತಿಯ ಮಕ್ಕಳು ಎಂಬ ನಾಟಕವನ್ನು ಮಕ್ಕಳು ನಡೆಸಿಕೊಟ್ಟರು.