ಕಾಮುಕರಿಂದ ಮಕ್ಕಳ ರಕ್ಷಿಸಲು ಲಾವಣ್ಯ ಹೋರಾಟ
ಬೆಂಗಳೂರು, ನ. 7: ಖಾಸಗಿ ಶಾಲೆಗಳಲ್ಲಿ ಒಂದರ ಹಿಂದರೊಂದಂತೆ ಮಕ್ಕಳ ಮೇಲೆ ಅತ್ಯಾಚಾರಗಳು ನಡೆದಾಗ ಸರಕಾರ ದಿಕ್ಕೆಟ್ಟು ನಿಂತಾಗ, ಪೊಲೀಸರು ಕಾಮುಕರ ಹುಡುಕಾಟದಲ್ಲಿ ತೊಡಗಿದ್ದಾಗ, ಪಾಲಕರು ಹೀಗಾದರೆ ಗತಿಯೇನಪ್ಪಾ ಎಂದು ಚಿಂತಿಸುತ್ತ ಕುಳಿತಿದ್ದಾಗ, ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ ಎಂದು ದಿಟ್ಟ ಹೆಜ್ಜೆ ಇಟ್ಟವಳು ಬೆಂಗಳೂರಿನ ಹುಡುಗಿ ಲಾವಣ್ಯಾ ಕೃಷ್ಣ.
ಮಲ್ಯಾ ಅದಿತಿ ಇಂಟರ್ನ್ಯಾಶನಲ್ ಮಹಾವಿದ್ಯಾಲಯದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಲಾವಣ್ಯಾ ಕೃಷ್ಣ ಅವರು ವಿವಿಧ ಸರ್ಕಾರಿ ಶಾಲೆಗಳು ಹಾಗೂ ಅನಾಥಾಶ್ರಮಗಳಿಗೆ ತೆರಳಿ ಮಕ್ಕಳಿಗೆ ಜಾಗೃತಿ ಮೂಡಿಸುತ್ತಿದ್ದಾರೆ. ವಿಬ್ಗಯಾರ್ ಶಾಲೆಯಲ್ಲಿ ನಡೆದ ಲೈಂಗಿಕ ಅತ್ಯಾಚಾರದಿಂದ ತೀವ್ರ ನೊಂದ ಲಾವಣ್ಯಾ, ಮಕ್ಕಳಲ್ಲಿ ಜಾಗೃತಿ ಮೂಡಿಸಲು ಕೈಲಾದ ಸಹಾಯ ಮಾಡಲು ನಿರ್ಧರಿಸಿದರು.
ಈ ಯೋಚನೆಗೆ ಸಂಪೂರ್ಣ ಬೆಂಬಲ ನೀಡಿದ ತಾಯಿ ವಿದ್ಯಾ ಕೃಷ್ಣ ಮಗಳಿಗೆ ಹೆಗಲು ಕೊಟ್ಟು ನಿಂತರು. ಇಂಜಿನಿಯರಿಂಗ್ ಪದವೀಧರ ತಂದೆ ಕೃಷ್ಣ ಅವರು ನೈತಿಕ ಬೆಂಬಲ ನೀಡಿದ್ದಲ್ಲದೆ, ಇದಕ್ಕಾಗಿ Innocence Interupted community ಎಂಬ ಫೇಸ್ಬುಕ್ ಪುಟ ರಚಿಸಿಕೊಟ್ಟರು. ಇದೇ ವರ್ಷದ ಅಕ್ಟೋಬರ್ ತಿಂಗಳಿನಿಂದ ವಿವಿಧ ಶಾಲೆಗಳಿಗೆ ಭೇಟಿ ಕೊಟ್ಟು ತರಬೇತಿ ನೀಡಲು ಆರಂಭಿಸಿದ್ದಾರೆ.
ಪ್ರಸ್ತುತ ವಿವಿಧ ಶಾಲೆಗಳಿಗೆ ತಾಯಿ ವಿದ್ಯಾ ಜತೆ ಭೇಟಿ ನೀಡುತ್ತಿರುವ ಲಾವಣ್ಯಾ ಒನ್ಇಂಡಿಯಾ ಕನ್ನಡ ಜತೆ ಅನುಭವ ಹಂಚಿಕೊಂಡಿದ್ದಾರೆ.
ಪ್ರತಿ ವಾರ ವಿವಿಧ ಶಾಲೆಗಳಿಗೆ ಭೇಟಿ ನೀಡುತ್ತಿದ್ದೇನೆ. ಕನ್ನಡ ಮಾಧ್ಯಮದ ಶಾಲೆಗಳಲ್ಲಿ ತಾಯಿ ವಿದ್ಯಾ ಹಾಗೂ ಆಂಗ್ಲ ಮಾಧ್ಯಮದ ಶಾಲೆಗಳಲ್ಲಿ ನಾನು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತೇನೆ. ಮಕ್ಕಳಿಗೆ ಮತ್ತೊಬ್ಬರನ್ನು ದೈಹಿಕವಾಗಿ ಸ್ಪರ್ಶಿಸುವಾಗ ಹೇಗೆ ನಡೆದುಕೊಳ್ಳಬೇಕು ಹಾಗೂ ಗುಡ್ ಟಚ್ ಮತ್ತು ಬ್ಯಾಡ್ ಟಚ್ ಕುರಿತು ವಿವರಣೆ ನೀಡುತ್ತಿದ್ದೇವೆ. ಕೆಲವು ವಿದ್ಯಾರ್ಥಿಗಳು ಲೈಂಗಿಕ ವಿಷಯ ಪ್ರಸ್ತಾಪಿಸಿದ ತಕ್ಷಣ ಮುದುಡಿಕೊಳ್ಳುವುದು ಹಾಗೂ ಹಿಂಜರಿಯುತ್ತಾರೆ. ಅವರಿಗೆ ಸ್ವಲ್ಪ ವಿವರಿಸಿ ಹೇಳಬೇಕಾಗುತ್ತದೆ. ಮನೆಯಲ್ಲಿ ಮುಕ್ತ ವಾತಾವರಣ ಇಲ್ಲದಿರುವುದು ಅದಕ್ಕೆ ಕಾರಣವಿರಬಹುದು.
ಆದ್ದರಿಂದ ಪಾಲಕರು ಮಕ್ಕಳ ಜತೆ ಅವರ ವರ್ತನೆ ಹಾಗೂ ಸಮಾಜದಲ್ಲಿ ಇರಬೇಕಾದ ವರ್ತನೆ ಕುರಿತು ಮುಕ್ತವಾಗಿ ಚರ್ಚಿಸಬೇಕು. ಸಮಾಜದಲ್ಲಿ ಗಂಡು ಮಕ್ಕಳ ಮೇಲೂ ದೌರ್ಜನ್ಯ ನಡೆಯುತ್ತಿದೆ. ಅವರ ಮನಸ್ಸೂ ಸೂಕ್ಷ್ಯವಾಗಿರುತ್ತದೆ. ಆದ್ದರಿಂದ ಬಾಲಕರನ್ನು ನಿರ್ಲಕ್ಷಿಸದೆ ಕಾಳಜಿ ವಹಿಸಬೇಕೆಂದು ತಿಳಿಸಿದ್ದಾರೆ.
ಪಾಲಕರು ಪಾಲ್ಗೊಳ್ಳಲಿ: ಮುಖ್ಯವಾಗಿ ಶಾಲೆಯ ಚಟುವಟಿಕೆಯಲ್ಲಿ ಪಾಲಕರ ಪಾಲ್ಗೊಳ್ಳುವಿಕೆ ಇಲ್ಲ. ಎಲ್ಲ ಸ್ತರದ ಶಾಲೆಗಳಲ್ಲಿ ಈ ಸಮಸ್ಯೆ ಕಂಡುಬಂದಿದೆ. ಶಾಲೆ ಕೇವಲ ಶೈಕ್ಷಣಿಕ ಉದ್ದೇಶಕ್ಕೆಂದು ತಿಳಿಯಬಾರದು. ವ್ಯಕ್ತಿತ್ವ ಬೆಳವಣಿಗೆಗೂ ಪ್ರಾಮುಖ್ಯತೆ ನೀಡಬೇಕು. ಪಾಲಕರು ಶಿಕ್ಷಕರನ್ನು ಆಗಾಗ ಭೇಟಿಯಾಗಿ ಮಾಹಿತಿ ಹಾಗೂ ಮಾರ್ಗದರ್ಶನ ಪಡೆಯುತ್ತಿರಬೇಕು. ಅಮೆರಿಕದ ಶಾಲೆಗಳಲ್ಲಿ ಮಕ್ಕಳ ತಾಯಂದಿರು ಪ್ರತಿ ವಾರ ಒಬ್ಬರಂತೆ ಸ್ವಯಂ ಸೇವಕರಾಗಿ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಇದರಿಂದ ಅವರಿಗೆ ಶಾಲೆಯ ವಾತಾವರಣದ ಸ್ಪಷ್ಟ ಅರಿವಿರುತ್ತದೆ ಹಾಗೂ ಮಕ್ಕಳ ಜತೆ ಸಂಪರ್ಕವೂ ಹೆಚ್ಚುತ್ತದೆ. ಆದ್ದರಿಂದ ಪಾಲಕರು ಸ್ವಯಂಸೇವಕರ ಸಮೂಹ ಮಾಡಿಕೊಂಡು ಸೇವೆ ಸಲ್ಲಿಸಬೇಕೆಂದು ಲಾವಣ್ಯಾ ಅಭಿಪ್ರಾಯಪಟ್ಟಿದ್ದಾರೆ.
ಎಲ್ಲದಕ್ಕೂ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಸುಮ್ಮನಿದ್ದು ನಂತರ ಆರೋಪ ಮಾಡಿದರೆ ಪ್ರಯೋಜನವಿಲ್ಲ. ಶಿಕ್ಷಕರಿಗೆ ಶೈಕ್ಷಣಿಕ ಒತ್ತಡ ಇರುವ ಕಾರಣ ಪ್ರತಿ ಮಕ್ಕಳ ಮೇಲೆ ಗಮನ ಕೇಂದ್ರೀಕರಿಸುವುದು ಸಾಧ್ಯವಾಗುವುದಿಲ್ಲ. ಪಾಲಕರು ಶಾಲೆಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ ಮಕ್ಕಳ ಅನೇಕ ಸಮಸ್ಯೆಗಳು ಕಡಿಮೆ ಆಗುತ್ತವೆ. ಅಲ್ಲದೆ, ಮಕ್ಕಳ ವರ್ತನೆ ಕುರಿತು ಶಿಕ್ಷಕರು ಪಾಲಕರಿಗೆ ಮಾಹಿತಿ ನೀಡಿ, ಪಾಲಕರು ಮಕ್ಕಳಿಗೆ ಮಾರ್ಗದರ್ಶನ ನೀಡಿದರೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಉತ್ತಮ ಸ್ಪಂದನೆ: ಅಲ್ಲದೆ, ನಾವು ಮಾರ್ಗದರ್ಶನ ನೀಡಿದ ಮಕ್ಕಳಿಗೆ ಅವರು ತಮ್ಮ ಸ್ನೇಹಿತರಿಗೆ ಈ ಕುರಿತು ತಿಳಿಸಬೇಕೆಂದು ತಿಳಿಹೇಳುತ್ತಿದ್ದೇವೆ. ಮಕ್ಕಳಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ. ಈ ಕುರಿತು ಇಲ್ಲಿಯವರೆಗೆ ಸುಮಾರು 500 ಮಕ್ಕಳಿಂದ ಸಹಿಯನ್ನೂ ಪಡೆದಿದ್ದೇವೆ. ಅನೇಕ ಮಕ್ಕಳು ಹಿಂಜರಿಯದೆ ಅನುಮಾನಗಳನ್ನು ಪರಿಹರಿಸಿಕೊಳ್ಳುತ್ತಿದ್ದಾರೆ. ಚೈಲ್ಡ್ಲೈನ್ ಸಂಖ್ಯೆ ಪಡೆದಿದ್ದಾರೆ ಎಂದು ಲಾವಣ್ಯಾ ತೃಪ್ತಿ ವ್ಯಕ್ತಪಡಿಸಿದ್ದಾರೆ.
ನಮ್ಮ ಈ ಕೆಲಸಕ್ಕಾಗಿ ಫೇಸ್ ಬುಕ್ ಪುಟ ರಚಿಸಿದ್ದೇವೆ. ಅಲ್ಲದೆ ಇಮೇಲ್ ಖಾತೆ ([email protected]) ಯನ್ನೂ ಆರಂಭಿಸಿದ್ದೇವೆ. ಆಸಕ್ತರು ಫೇಸ್ ಬುಕ್ ಪುಟದಲ್ಲಿ ಅಥವಾ ಇಮೇಲ್ ಕಳಿಸಿ ಸಲಹೆ ನೀಡಬಹುದೆಂದು ಲಾವಣ್ಯಾ ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.