ಬೆಂಗಳೂರಿನಲ್ಲಿ ಯುವ ಜೋಡಿ ಮೇಲೆ ಹಲ್ಲೆ; ದೂರು ದಾಖಲು
ಇಂದಿರಾ ನಗರ ಎಂಪೈರ್ ಹೋಟೆಲ್ ನಲ್ಲಿ ನಡೆದ ಘಟನೆ; ಜೀವನಭೀಮಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ಬೆಂಗಳೂರು, ಜನವರಿ 23: ಯುವತಿಯೊಬ್ಬಳನ್ನು ಅವಾಚ್ಯ ಶಬ್ದಗಳಿಂದ ಚುಡಾಯಿಸಿದ ಕಾರಣಕ್ಕೆ ನಡೆದ ಗಲಾಟೆಯೊಂದರಲ್ಲಿ ಆಕೆಯ ನೆರವಿಗೆ ಧಾವಿಸಿದ ಆಕೆಯ ಜತೆಗಾರನೊಬ್ಬನ ಮೇಲೆ ಯುವಕರ ಗುಂಪೊಂದು ಹಲ್ಲೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಇಂದಿರಾ ನಗರದ ಎಂಪೈರ್ ಹೋಟೆಲ್ ನಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದೆ. ಅಂದು ರಾತ್ರಿ ಸುಮಾರು ಹನ್ನೊಂದುವರೆ ಸುಮಾರಿಗೆ ಯುವತಿ ಹಾಗೂ ಆಕೆಯ ಜತೆಗೆ ಯುವಕನೊಬ್ಬ ಹೋಟೆಲ್ ಗೆ ಊಟಕ್ಕೆಂದು ಆಗಮಿಸಿದ್ದರು.
ಊಟ ಮುಗಿಸಿ ಯುವತಿಯು ಶೌಚಾಲಯಕ್ಕೆ ತೆರಳಿದ್ದ ಸಂದರ್ಭದಲ್ಲಿ ಅವರ ಪಕ್ಕದ ಟೇಬಲ್ಲಿನಲ್ಲಿ ಕೂತಿದ್ದ ಯುವಕರ ಗುಂಪೊಂದು ಆಕೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದೆ.
ತಕ್ಷಣವೇ ಆಕೆ ಸಿಟ್ಟಿಗೆದ್ದು ಯುವಕನ್ನು ಬೈಯ್ದಿದ್ದಾರೆ. ಇದರಿಂದ ರೊಚ್ಚಿಗೆದ್ದ ಯುವಕರ ಗುಂಪು ಜಗಳಕ್ಕೆ ನಿಂತಿದೆ. ಆಗ ಯುವಕನೂ ಯುವತಿಯ ಬೆಂಬಲಕ್ಕೆ ಬಂದಿದ್ದಾನೆ.
ಹೀಗೇ ಆರಂಭವಾದ ಜಗಳ ಮಾತಿಗೆ ಮಾತು ಬೆಳೆದು ದೊಡ್ಡ ರಾದ್ಧಾಂತವಾಗಿ ಯುವಕರ ಗುಂಪು ಯುವತಿ ಹಾಗೂ ಆಕೆಯ ಜತೆಗಾರನ ಮೇಲೆ ಹಲ್ಲೆ ಮಾಡಿದೆ. ಅಷ್ಟರಲ್ಲಿ ಹೋಟೆಲ್ ಸಿಬ್ಬಂದಿ ಮಧ್ಯೆ ಪ್ರವೇಶಿಸಿ ಎಲ್ಲರನ್ನೂ ಸಮಾಧಾನಪಡಿಸಿದ್ದಾರೆ. ಆನಂತರ ಯುವತಿ, ಯುವಕನನ್ನು ಮನೆಗೆ ಕಳುಹಿಸಿದ್ದು, ಯುವಕರಿಗೆ ಊಟ ಮುಂದುವರಿಸಲು ಮನವಿ ಮಾಡಿದ್ದಾರೆ.
ಈ ಘಟನೆಯಿಂದ ಅಸಮಾಧಾನಗೊಂಡಿರುವ ಯುವತಿಯು ಸೋಮವಾರ ಹೋಟೆಲ್ ಗೆ ಆಗಮಿಸಿ ಅಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆದು ಜೀವನಭೀಮಾ ನಗರದ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.