ಗೀತಾಲಕ್ಷ್ಮೀ ಕುಟುಂಬಕ್ಕೆ ಮೂರು ಲಕ್ಷ ಪರಿಹಾರ
ಬೆಂಗಳೂರು, ಅ.8 : ಚರಂಡಿಯಲ್ಲಿ ಕೊಚ್ಚಿ ಹೋದ ಬಾಲಕಿ ಗೀತಾ ಲಕ್ಷ್ಮೀ ಕುಟುಂಬಕ್ಕೆ ಮೂರು ಲಕ್ಷ ರೂ. ಪರಿಹಾರ ನೀಡುವುದಾಗಿ ಬೆಂಗಳೂರು ನಗರ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. ಬಾಲಕಿ ಮೃತದೇಹವನ್ನು ತಮಿಳುನಾಡಿಗೆ ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆ ಮಾಡಲು ಬೇಕಾದ ವ್ಯವಸ್ಥೆಯನ್ನು ಬಿಬಿಎಂಪಿಯಿಂದ ಮಾಡಿಕೊಡಲಾಗುವುದು ಎಂದು ಆಯುಕ್ತ ಎಂ.ಡಿ.ಲಕ್ಷ್ಮೀನಾರಾಯಣ ಹೇಳಿದ್ದಾರೆ.
ಹಿಂದಿನ ಸುದ್ದಿ : ಬನ್ನೇರುಘಟ್ಟ ರಸ್ತೆಯ ಬಿಳೇಕಹಳ್ಳಿ ಬಳಿ ಕಾಲುಜಾರಿ ಚರಂಡಿಗೆ ಬಿದ್ದಿದ್ದ 9 ವರ್ಷದ ಬಾಲಕಿ ಗೀತಾ ಲಕ್ಷ್ಮೀ ಶವ ಬುಧವಾರ ಮಧ್ಯಾಹ್ನ ಪತ್ತೆಯಾಗಿದೆ. ಮಡಿವಾಳ ಕೆರೆಯ ಬಳಿಯ ರಾಜಾ ಕಾಲುವೆಯಲ್ಲಿ ಶವ ಪತ್ತೆಯಾಗಿದ್ದು, ಹತ್ತು ಅಡಿ ಆಳದಲ್ಲಿ ಸಿಲುಕಿರುವ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಲಾಗಿದೆ.
ಬಿಬಿಎಂಪಿ, ಅಗ್ನಿಶಾಮಕ, ಗೃಹ ರಕ್ಷಕ ದಳ ಹಾಗೂ ಎನ್ಡಿಆರ್ಎಫ್ನ 150ಕ್ಕೂ ಹೆಚ್ಚು ಸಿಬ್ಬಂದಿ ಬುಧವಾರ ಬಾಲಕಿ ಶವ ಹುಡುಕುವ ಕಾರ್ಯಾಚರಣೆಯನ್ನು ಆರಂಭಿಸಿದ್ದರು. ಮಧ್ಯಾಹ್ನ 2 ಗಂಟೆ ಸುಮಾರಿಗೆ ಆಕೆಯ ಶವ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಗೀತಾಲಕ್ಷ್ಮೀ ಕಾಲು ಜಾರಿ ಬಿದ್ದ ಸ್ಥಳದಿಂದ 2 ಕಿ.ಮೀ ದೂರದಲ್ಲಿ ಮೃತದೇಹ ಸಿಕ್ಕಿದೆ. [ಮೋರಿಯಲ್ಲಿ ಕೊಚ್ಚಿಹೋದ ಬಾಲಕಿ]
ದಸರಾ ರಜೆ ಕಳೆಯಲು ತಮಿಳುನಾಡಿನ ಕಡಲೂರಿನಿಂದ ಬೆಂಗಳೂರಿನ ಚಿಕ್ಕಮ್ಮನ ಮನೆಗೆ ಬಂದಿದ್ದ ಗೀತಾಲಕ್ಷ್ಮೀ ಸೋಮವಾರ ರಾತ್ರಿ 8.15ರ ಸುಮಾರಿಗೆ ಚರಂಡಿಗೆ ಕಾಲುಜಾರಿ ಬಿದ್ದಿದ್ದಳು. ಮಳೆಯ ರಭಸಕ್ಕೆ ಚರಂಡಿ ತುಂಬಿ ಹರಿಯುತ್ತಿದ್ದರಿಂದ ನೀರಿನಲ್ಲಿ ಕೊಚ್ಚಿ ಹೋಗಿದ್ದಳು. ಸೋಮವಾರ ರಾತ್ರಿ 9 ಗಂಟೆಯಿಂದ ಗೀತಾಳ ಶವಕ್ಕಾಗಿ ಹುಡುಕಾಟ ನಡೆಸಲಾಗುತ್ತಿತ್ತು. [ಗೀತಾ ಲಕ್ಷ್ಮೀಗಾಗಿ ಮಂಗಳವಾರವೂ ಶೋಧ]
ತಮಿಳುನಾಡಿನ ಕಡಲೂರಿನ ಶಂಕರ್ ಮತ್ತು ಕಸ್ತೂರಿ ದಂಪತಿಯ ಪುತ್ರಿ ಗೀತಾ ಸೋಮವಾರ ರಾತ್ರಿ ಚಿಕ್ಕಮ್ಮನ ಜೊತೆ ಪುಟ್ಪಾತ್ ಮೇಲೆ ನಡೆದು ಹೋಗುತ್ತಿದ್ದಾಗ, ಚಪ್ಪಲಿ ಕಳಚಿ ಹೋಗಿತ್ತು. ಅದನ್ನು ತೆಗೆದುಕೊಳ್ಳಲು ಕೆಳಗೆ ಬಾಗಿದಾಗ ಕಾಲು ಜಾರಿ ಚರಂಡಿಗೆ ಬಿದ್ದು, ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಳು.
ಗೀತಾ ಚರಂಡಿಗೆ ಬಿದ್ದ ಸ್ಥಳಕ್ಕೆ ಹತ್ತಿರಲ್ಲೇ ಬೃಹತ್ ರಾಜಾ ಕಾಲುವೆ ಇತ್ತು. ಆಕೆ ಅಲ್ಲಿಗೆ ಕೊಚ್ಚಿ ಹೋಗಿರಬಹುದು ಎಂದು ಶಂಕಿಸಲಾಗಿತ್ತು. ಮಂಗಳವಾರ ದಿನಪೂರ್ತಿ ಅಲ್ಲಿ ಹುಡುಕಾಟ ನಡೆಸಿದರೂ ಶವ ಪತ್ತೆಯಾಗಿರಲಿಲ್ಲ. ಇಂದು 10 ಅಡಿ ಆಳದಲ್ಲಿ ಆಕೆಯ ಶವ ಪತ್ತೆಯಾಗಿದ್ದು, ಅದನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ.