ಗೌರಿ ಲಂಕೇಶ್ ಹಂತಕನ ಪತ್ತೆಗೆ ನೆರವು ಮಾಡಿದ ಆ 'ಪರೀಕ್ಷೆ' ಯಾವುದು?
ಪತ್ರಕರ್ತೆ- ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ಅವರ ಹತ್ಯೆಯಾಗಿ ಸೆಪ್ಟೆಂಬರ್ 5ನೇ (ಬುಧವಾರ) ತಾರೀಕಿಗೆ ಒಂದು ವರ್ಷವಾಯಿತು. ಆರಂಭದಲ್ಲಿ ಹಂತಕರ ಜಾಡು ಹಿಡಿಯಲು ಬಹಳ ಕಷ್ಟವಾಗಿದ್ದು ಹೌದು. ಆದರೆ ಹೊಟ್ಟೆ ಮಂಜ ಅಲಿಯಾಸ್ ನವೀನ್ ಕುಮಾರ್ ಸಿಕ್ಕಿಹಾಕಿಕೊಂಡ ನಂತರ ವಿಚಾರಣೆ ವೇಗ ಪಡೆದುಕೊಂಡು, ಅನೇಕ ಸ್ಫೋಟಕ ಸತ್ಯಗಳು ಹೊರಬರುತ್ತಲೇ ಇವೆ.
ಕಳೆದ ವರ್ಷ ಆ ಕತ್ತಲೆ ರಾತ್ರಿಯಲ್ಲಿ ಗೌರಿ ಲಂಕೇಶ್ ರ ರಾಜರಾಜೇಶ್ವರಿ ನಗರದ ಮನೆ ಬಳಿ ಗುಂಡು ಹಾರಿಸಿದ್ದು ಯಾರು ಎಂದು ಖಾತ್ರಿ ಪಡಿಸಿಕೊಳ್ಳಲು ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಗೇಯ್ಟ್ ವಿಶ್ಲೇಷಣೆ ಅನುಸರಿಸಲಾಗಿದೆ. ವಿಧಿವಿಜ್ಞಾನ ಪ್ರಯೋಗಾಲಯದಿಂದ ಆ ಪರೀಕ್ಷೆ ಮಾಡಿ, ಅಂದು ಗುಂಡು ಹಾರಿಸಿದವನು ಪರಶುರಾಮ್ ವಾಘ್ಮೋರೆ ಎಂಬ ವಾದವನ್ನು ಎಸ್ ಐಟಿಯಿಂದ ತೀರ್ಮಾನಕ್ಕೆ ಬರಲಾಗಿದೆ.
ಗೌರಿ ಹತ್ಯೆಗೆ ವರ್ಷ: ತನಿಖೆಯಲ್ಲಿ ಇಲ್ಲಿವರೆಗೆ ನಡೆದಿರುವುದೇನು?
ಸಿಸಿಟಿವಿ ಕ್ಯಾಮೆರಾದ ಫೂಟೇಜ್ ಗಳಲ್ಲಿ ಹಂತಕರ ಚಿತ್ರಗಳು ಮಬ್ಬಾಗಿ ಸೆರೆಯಾಗಿದ್ದರೂ ಗುಂಡು ಹಾರಿಸಿದ ವ್ಯಕ್ತಿ ಈತನೇ ಎಂದು ಎಸ್ ಐಟಿ ತೀರ್ಮಾನಕ್ಕೆ ಬರಲು ಸಹಾಯ ಮಾಡಿದ ತಂತ್ರಜ್ಞಾನ ಗೇಯ್ಟ್ ವಿಶ್ಲೇಷಣೆ. ಇದರ ಬಗ್ಗೆ ವಿವರವಾಗಿ ತಿಳಿಸುವ ಪ್ರಯತ್ನ ಇದು.
ಜಗತ್ತಿನಾದ್ಯಂತ ನೂರಾರು ಪ್ರಕರಣಗಳು ಹೀಗೇ ಬಗೆಹರಿದಿವೆ
ಗೇಯ್ಟ್ ವಿಶ್ಲೇಷಣೆಯನ್ನು ವಿಧಿವಿಜ್ಞಾನ ಪ್ರಯೋಗಾಲಯದ ತಂತ್ರಜ್ಞರು ಮೊದಲಿಗೆ ಬಳಕೆ ಮಾಡಿದ್ದು ಯುನೈಟೆಡ್ ಕಿಂಗ್ ಡಮ್ ನಲ್ಲಿ, ಹದಿನೆಂಟು ವರ್ಷಗಳ ಹಿಂದೆ. ಇದೀಗ ವಿಡಿಯೋ ಫೂಟೇಜ್, ಹೆಜ್ಜೆ ಗುರುತು ಮತ್ತು ಪಾದರಕ್ಷೆ ಮತ್ತಿತರ ನೆರವಿನಿಂದ ಜಗತ್ತಿನಾದ್ಯಂತ ನೂರಾರು ಪ್ರಕರಣಗಳನ್ನು ಭೇದಿಸಿ, ಅಪರಾಧಿಗಳನ್ನು ಪತ್ತೆ ಹಚ್ಚಲು ಇದರಿಂದ ನೆರವಾಗುತ್ತಿದೆ.
ಹೋಲಿಕೆ-ವಿಶ್ಲೇಷಣೆ ಮೂಲಕ ನಿರ್ಧಾರ
ಅಪರಾಧಿಗಳು ಕೃತ್ಯ ಎಸಗುವ ಸಂದರ್ಭದಲ್ಲಿ, ತಪ್ಪಿಸಿಕೊಳ್ಳುವಾಗ ಸಿಸಿಟಿವಿ ಕ್ಯಾಮೆರಾದಲ್ಲಿ ಆ ದೃಶ್ಯಗಳು ಸೆರೆಯಾಗುತ್ತವೆ ಅಂದುಕೊಳ್ಳೋಣ. ಬೆಳಕು ಕಡಿಮೆ ಇರುವ ಕಾರಣಕ್ಕೋ ಅಥವಾ ಕ್ಯಾಮೆರಾ ಯಾವುದೋ ದಿಕ್ಕಿಗೆ ತಿರುಗಿರುವುದರಿಂದಲೋ ತನಿಖಾಧಿಕಾರಿಗಳಿಗೆ ಆ ವಿಡಿಯೋದಲ್ಲಿ ಅಪರಾಧಿಯ ಮುಖಚಹರೆ ಪತ್ತೆ ಮಾಡಲು ಸಾಧ್ಯವಾಗದಿದ್ದಲ್ಲಿ ಅಪರಾಧಿಯ ನಡೆಯನ್ನು ಹೋಲಿಕೆ ಮತ್ತು ವಿಶ್ಲೇಷಣೆ ಮಾಡುವ ಮೂಲಕ ಪತ್ತೆ ಹಚ್ಚಲು ಪ್ರಯತ್ನ ಮಾಡಲಾಗುತ್ತದೆ.
ಗೌರಿಗೆ ಗುಂಡಿಕ್ಕಿದ್ದು ವಾಘ್ಮೋರೆಯೇ: ಎಫ್ಎಸ್ಎಲ್ ವರದಿಯಿಂದ ದೃಢ
ಶಂಕಿತರ ದೃಶ್ಯಾವಳಿಗಳನ್ನು ಚಿತ್ರೀಕರಿಸಿಕೊಳ್ಳಬೇಕು
ಮನುಷ್ಯರು ಅಥವಾ ಪ್ರಾಣಿಗಳ ನಡೆಯುವ ಭಂಗಿ, ನಿಲ್ಲುವ ರೀತಿ ಮತ್ತಿತರ ದೈಹಿಕ ನಡವಳಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತದೆ. ಮುಖ್ಯವಾಗಿ ವ್ಯಕ್ತಿಯ ನಡೆಯುವ ಹಾಗೂ ಓಡುವ ರೀತಿಯನ್ನು ಸೂಕ್ಷ್ಮವಾಗಿ ವಿಶ್ಲೇಷಿಸಲಾಗುತ್ತದೆ. ಈ ರೀತಿ ವಿಶ್ಲೇಷಣೆ ಮಾಡುವ ಮುನ್ನ ಶಂಕಿತರನ್ನು ತನಿಖಾಧಿಕಾರಿಗಳು ಬಂಧಿಸಿರಬೇಕು. ಆ ನಂತರ ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿಗಳನ್ನು ಜತೆಯಲ್ಲಿಟ್ಟುಕೊಳ್ಳಬೇಕು. ಸಾಮಾನ್ಯವಾಗಿ ನಾನಾ ಆಯಾಮಗಳಿಂದ ಶಂಕಿತರ ವಿಡಿಯೋ ಮಾಡಿಕೊಳ್ಳಬೇಕು. ಇದರ ಜತೆಗೆ ಅಪರಾಧ ಕೃತ್ಯ ನಡೆದ ದಿನ ಸಿಸಿಟಿವಿ ಕ್ಯಾಮೆರಾಗೆ ತೀರಾ ಹತ್ತಿರದಲ್ಲಿ ಸೆರೆಯಾಗಿರುವ ಆಯಾಮದಿಂದ ಮತ್ತು ಕೃತ್ಯ ನಡೆದ ದಿನ ಆರೋಪಿಯು ನಡೆದಾಡಿದ ಅಥವಾ ಓಡಿದ ವೇಗದಲ್ಲಿಯೇ ಶಂಕಿತರ ದೃಶ್ಯಗಳನ್ನು ಚಿತ್ರೀಕರಿಸಿಕೊಳ್ಳಬೇಕು.
ಗೌರಿ ಲಂಕೇಶ್ ಹತ್ಯೆಯ ಕಡೆಯ ಕ್ಷಣಗಳು ಹೇಗಿದ್ದವು?
ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ತೀರ್ಮಾನಕ್ಕೆ ಬಂದಿದ್ದು ಹೀಗೆ
ಈ ರೀತಿ ಶಂಕಿತರ ವಿಡಿಯೋ ಚಿತ್ರೀಕರಣ ಮಾಡಿದ ನಂತರ ವಿಧಿವಿಜ್ಞಾನ ಪ್ರಯೋಗಾಲಯದ ತಂತ್ರಜ್ಞರು ಕೃತ್ಯ ನಡೆದ ದಿನದ ವಿಡಿಯೋವನ್ನು ಹೊಸದಾಗಿ ಚಿತ್ರೀಕರಿಸಿದ ವಿಡಿಯೋದ ಜತೆಗೆ ಸಮೀಕರಿಸಿ ನೋಡುತ್ತಾರೆ. ನಿರ್ದಿಷ್ಠ ಚಹರೆ, ನಡಾವಳಿಗಳು, ಭಂಗಿ ಇತ್ಯಾದಿ ಹೋಲಿಕೆಗಳು ಯಾವ ಪ್ರಮಾಣದಲ್ಲಿ ಆಗುತ್ತಿವೆ ಎಂಬುದರ ಆಧಾರದಲ್ಲಿ ಅಂತಿಮ ತೀರ್ಮಾನಕ್ಕೆ ಬರಲಾಗುತ್ತದೆ. ಈಗ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಗುಂಡು ಹಾರಿಸಿದವರು ಯಾರು ಎಂಬ ತೀರ್ಮಾನಕ್ಕೆ ಬಂದಿರುವುದು ಈ ಪರೀಕ್ಷೆ ಮೂಲಕ.