ಗೌರಿ ಹತ್ಯೆಯ ಮಿಸ್ಟರಿ : ಅಸಲಿಗೆ ಟ್ರಿಗರ್ ಎಳೆದದ್ದು ಯಾರು?
ಬೆಂಗಳೂರು, ಜೂನ್ 08 : "ಗೌರಿ ಲಂಕೇಶ್ ಹಿಂದೂ ವಿರೋಧಿಯಾಗಿದ್ದರಿಂದ ಅವರನ್ನು ಹತ್ಯೆಗೈಯಲಾಯಿತು" ಎಂದು ಈ ಪ್ರಕರಣದಲ್ಲಿ ಬಂಧಿತನಾಗಿರುವ ಶಂಕಿತ ಹಂತಕ ಕೆಟಿ ನವೀನ್ ಕುಮಾರ್ ತನಿಖಾಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದಾನೆ.
ಗೌರಿ ಹತ್ಯೆಯ ತನಿಖೆ ಚುರುಕು ಪಡೆದುಕೊಂಡಿದ್ದು, ಗೌರಿ ಕೊಲೆ ಪ್ರಕರಣದ ಜೊತೆಗೆ ಹಳೆಯ ಪ್ರಕರಣಗಳ ಮೇಲೂ ಬೆಳಕು ಚೆಲ್ಲುವ ಲಕ್ಷಣ ತೋರುತ್ತಿದೆ. ಅಲ್ಲದೆ, ಇನ್ನೂ ಹಲವಾರು ಎಡಪಂಥೀಯ ಸಿದ್ಧಾಂತದ ಸಾಹಿತಿಗಳ ಹತ್ಯೆಗೂ ಷಡ್ಯಂತ್ರ ರಚಿಸಲಾಗಿತ್ತು ಎಂಬ ಸಂಗತಿಗಳು ಹೊರಬರುತ್ತಿವೆ.
ಗೌರಿ ಹತ್ಯೆ ದಿನವೇ ಪತ್ನಿಯನ್ನು ಮಂಗಳೂರಿಗೆ ಕರೆದೊಯ್ದಿದ್ದ ಆರೋಪಿ
ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ನಿವಾಸದ ಮುಂದೆ ಸೆಪ್ಟೆಂಬರ್ 5ರಂದು ಸಂಜೆ 8 ಗಂಟೆಯ ಸುಮಾರಿಗೆ ಅಪರಿಚಿತ ವ್ಯಕ್ತಿಯೊಬ್ಬ ಗೌರಿ ಲಂಕೇಶ್ ಮೇಲೆ ಗುಂಡಿನ ಸುರಿಮಳೆಗರೆದು ಸ್ಥಳದಲ್ಲಿಯೇ ಹತ್ಯೆ ಮಾಡಿದ್ದ. ಹೆಲ್ಮೆಟ್ ಹಾಕಿದ್ದ ಆತ ಕತ್ತಲಲ್ಲಿಯೇ ಕೊಲೆಗೈದು ಪರಾರಿಯಾಗಿದ್ದ.
ಗೌರಿ ಲಂಕೇಶ್ ಹತ್ಯೆ ಆರೋಪಿ ಕಲಬುರ್ಗಿ ಕೊಲೆಯಲ್ಲೂ ಭಾಗಿ?
ಕಡೆಗೂ ಶಂಕಿತ ಹಂತಕ ನವೀನ್ ಕುಮಾರ್ ನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಆರೋಪಪಟ್ಟಿಯ ಭಾಗವಾಗಿರುವ 12 ಪುಟಗಳ ಹೇಳಿಕೆಯನ್ನು ನವೀನ್ ಕುಮಾರ್ ನಿಂದ ಪಡೆದುಕೊಂಡಿದ್ದಾರೆ. ಒಟ್ಟು 131 ಅಂಶಗಳನ್ನು ಸಾಕ್ಷಿಯಾಗಿ ಪೊಲೀಸರು ಸಿದ್ಧಪಡಿಸಿದ್ದಾರೆ. ಅದರಲ್ಲಿ ಗೌರಿ ಹತ್ಯೆಗೆ ಹೇಗೆ ಸಂಚು ರೂಪಿಸಲಾಗಿತ್ತು ಎಂಬುದರ ನಕ್ಷೆಯೂ ಇದೆ.
ಹಿಂದೂ ಯುವ ಸೇನೆ ಸಂಘಟನೆಯ ಸಂಸ್ಥಾಪಕ
ಮೈಸೂರಿನ ಕಾಲೇಜಿನಲ್ಲಿ ಕಾಮರ್ಸ್ ಓದನ್ನು ಅರ್ಧಕ್ಕೆ ಬಿಟ್ಟಿರುವ ನವೀನ್ ಕುಮಾರ್ ಅಲಿಯಾಸ್ ಹೊಟ್ಟೆ ಮಂಜ, ಹಿಂದೂ ಸಿದ್ಧಾಂತಕ್ಕೆ ಮನಸೋತು ಹಿಂದೂ ಯುವ ಸೇನೆ ಎಂಬ ಸಂಘಟನೆಯನ್ನು 2014ರಲ್ಲಿ ಹುಟ್ಟುಹಾಕಿದ್ದ. ಜೊತೆಗೆ ಆತ ಗುಂಡುಗಳನ್ನು ವಿತರಿಸುವ ದಂಧೆಯನ್ನೂ ಮಾಡುತ್ತಾನೆ ಎಂದು ತನಿಖೆಯಿಂದ ತಿಳಿದುಬಂದಿದೆ. ನವೀನ್ ಕುಮಾರ್ ಮಂಗಳೂರಿಗೆ ಹೋಗಿ ಶ್ರೀರಾಮ ಸೇನೆಯ ಮುಖಂಡ ಪ್ರಮೋದ್ ಮುತಾಲಿಕ್ ಅವರನ್ನೂ ಭೇಟಿಯಾಗಿದ್ದಾನೆ.
ಸಂಚು ನಡೆದಿದ್ದು ಬೆಳಗಾವಿ, ಬೆಂಗಳೂರಲ್ಲಿ
ಆತ ವಿಶೇಷ ತನಿಖಾ ದಳಕ್ಕೆ ನೀಡಿರುವ ಹೇಳಿಕೆ ಪ್ರಕಾರ, ಹಿಂದೂ ಜಾಗೃತಿ ಸಮಾವೇಶವೊಂದರಲ್ಲಿ ಪ್ರವೀಣ್ ಎಂಬಾತ ಈತನ ಮನೆಗೆ ಬಂದು ತನಗೆ ಗುಂಡು ಬೇಕೆಂದು ಕೇಳಿದ್ದಾನೆ. ನವೀನ್ ತನ್ನಲ್ಲಿರುವ ಗುಂಡುಗಳನ್ನು ಪ್ರವೀಣ್ ಗೆ ಕೊಟ್ಟಿದ್ದಾನೆ. ಈ ಗುಂಡುಗಳು ಹಿಂದೂ ವಿರೋಧಿ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಗೆ ಬೇಕೆಂದು ಪ್ರವೀಣ್ ಹೇಳಿದ್ದಾಗಿ ನವೀನ್ ಕುಮಾರ್ ತಿಳಿಸಿದ್ದಾನೆ. ಆದರೆ, ಗೌರಿ ಲಂಕೇಶ್ ಹತ್ಯೆಯನ್ನು ತಾನೇ ಮಾಡಿದ್ದೇನೆ ಎಂದು ಪ್ರವೀಣ್ ಒಪ್ಪಿಕೊಂಡಿಲ್ಲ. ಇಡೀ ಕೊಲೆಯ ಸಂಚು ಬೆಂಗಳೂರು ಮತ್ತು ಬೆಳಗಾವಿಯಲ್ಲಿ ರೂಪಿಸಲಾಗಿದೆ.
ಗೌರಿ ಹತ್ಯೆ ಶಂಕಿತನ ಮಾಹಿತಿ ಪಡೆದ ಸಿಬಿಐ, ತೆಲಂಗಾಣ, ಮಹಾರಾಷ್ಟ್ರ
ಕೆಎಸ್ ಭಗವಾನ್ ಹತ್ಯೆಗೆ ಸುಪಾರಿ
ಕೊಲೆ ನಡೆದ, ಸೆಪ್ಟೆಂಬರ್ 5ರಂದು ನವೀನ್ ಕುಮಾರ್ ತನ್ನ ಹೆಂಡತಿಯೊಡನೆ ಮಂಗಳೂರಿಗೆ ತೆರಳಿದ್ದು, ಕೊಲೆಗೂ ಮತ್ತು ತನಗೂ ಯಾವುದೇ ಸಂಬಂಧವಿಲ್ಲವೆಂದು ಋಜುವಾತುಪಡಿಸಲು ಮತ್ತು ತನಿಖೆಯ ದಾರಿ ತಪ್ಪಿಸಲು ಯತ್ನಿಸಿದ್ದಾನೆ. ಆದರೆ, ಆದರೆ, ವಿಶೇಷ ತನಿಖಾ ದಳ ನಡೆಸಿರುವ ತನಿಖೆಯಲ್ಲಿ ಎಲ್ಲವೂ ಬಯಲಾಗಿದೆ. ಆತನಿಗೆ ಮತ್ತೊಬ್ಬ ಹಿಂದೂ ವಿರೋಧಿ ಸಾಹಿತಿ, ಸಂಶೋಧಕ ಪ್ರೊ. ಕೆಎಸ್ ಭಗವಾನ್ ಅವರನ್ನು ಕೂಡ ಹತ್ಯೆಗೈಯಲು ಸುಪಾರಿ ನೀಡಲಾಗಿತ್ತು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. ಈ ವಿಷಯ ಬಹಿರಂಗವಾದ ನಂತರ ಕೆಎಸ್ ಭಗವಾನ್ ಅವರಿಗೆ ಭದ್ರತೆಯನ್ನು ಒದಗಿಸಲಾಗಿದೆ.
ಗೌರಿ ಹತ್ಯೆ ಚಾರ್ಜ್ ಶೀಟ್, ಭಗವಾನ್ ಹತ್ಯೆ ಸಂಚು ಹಾಗೂ ಬಂಧನ ಸುತ್ತ...
ಹಂತಕರ ಹಿಟ್ ಲಿಸ್ಟ್ ನಲ್ಲಿ ಯಾರ್ಯಾರಿದ್ದಾರೆ
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಪುಣೆಯ ಅಮೋಲ್ ಕಾಳೆನಿಂದ ಪಡೆದಿರುವ ಡೈರಿಯಲ್ಲಿ ಮತ್ತಷ್ಟು ಆಘಾತಕಾರಿ ಸಂಗತಿಗಳು ಬಟಾಬಯಲಾಗಿವೆ. ಆತ ತೀರ ಅಮಾಯಕನೆಂದು ನೆರೆಹೊರೆಯವರು ಹೇಳಿದ್ದರೂ, ಆತನ ಡೈರಿಯಲ್ಲಿರುವ ಹಿಟ್ ಲಿಸ್ಟ್ ನಲ್ಲಿ ಎಡಪಂಥೀಯ ಚಿಂತಕರಾದ ನಾಟಕಕಾರ ಗಿರೀಶ್ ಕಾರ್ನಾಡ್, ಕವಿ ಚಂದ್ರಶೇಖರ ಪಾಟೀಲ, ಸಂಶೋಧಕ ಕೆಎಸ್ ಭಗವಾನ್, ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪ, ಮಾಜಿ ಸಚಿವೆ ಬಿಟಿ ಲಲಿತಾ ನಾಯಕ್ ಅವರ ಹೆಸರುಗಳಿವೆ.
ಸಂಕೇತಾಕ್ಷರಗಳಿಂದಲೇ ಸಂವಹನ
ಸುಮಾರು 200ಕ್ಕೂ ಹೆಚ್ಚು ದೂರವಾಣಿ ಕರೆಗಳನ್ನು ಪರಿಶೀಲಿಸಲಾಗಿ, ನವೀನ್ ಕುಮಾರ್ ನನ್ನು ಭೇಟಿಯಾಗಿದ್ದ ಪ್ರವೀಣ್ ಎಂಬಾತನ ಮೂಲ ಹೆಸರು ಸುಜೀತ್ ಕುಮಾರ್ ಎಂದು ತಿಳಿದುಬಂದಿದೆ. ಆತನಿಗೆ ಪ್ರವೀಣ್ ಹೆಸರಿನ ಜೊತೆ ಇನ್ನೂ ಹಲವಾರು ಹೆಸರುಗಳಿವೆ. ಆತ ಯಾರೊಂದಿಗೂ ನೇರಾನೇರವಾಗಿ ಮಾತನಾಡುವ ಆಸಾಮಿಯೇ ಇಲ್ಲ. ಪಕ್ಕಾ ಸುಪಾರಿ ಕಿಲ್ಲರ್ ಆಗಿರುವ ಸುಜೀತ್, ಸೀಕ್ರೆಟ್ ಸಂದೇಶಗಳಿಂದಲೇ ಸಂವಹನ ಮಾಡುತ್ತಿದ್ದ. ಔರತ್ ಅಂದ್ರೆ ಮಹಿಳೆ (ಗೌರಿ ಲಂಕೇಶ್), ಬಲ್ಬ್ ಅಂದ್ರೆ ಸಿಸಿಟಿವಿ, ಚನ್ನಾ ಅಂದ್ರೆ ಗುಂಡುಗಳು, ಘೋಡಾ ಅಂದ್ರೆ ಪಿಸ್ತೂಲು.
ಒಟ್ಟು ಐವರು ಶಂಕಿತ ಆರೋಪಿಗಳ ಬಂಧನ
ನವೀನ್ ಕುಮಾರ್ ಕೊಟ್ಟ ಸುಳಿವಿನ ಮೇರೆಗೆ ಕಡೆಗೂ ಉಪ್ಪಾರಪೇಟೆ ಪೊಲೀಸರು ಆತನನ್ನು ಜೀವಂತ ಬುಲೆಟ್ ಗಳ ಜೊತೆ ಬಂಧಿಸಿದ್ದಾರೆ. ಆತ, ತನಗೆ ಕೆಎಸ್ ಭಗವಾನ್ ನನ್ನು ಹತ್ಯೆ ಮಾಡಲು ಸುಪಾರಿ ನೀಡಲಾಗಿತ್ತು ಎಂಬುದನ್ನು ಒಪ್ಪಿಕೊಂಡಿದ್ದಾನೆ. ಸುಜೀತ್ ಕುಮಾರ್ ನೀಡಿರುವ ಸುಳಿವಿನ ಮೇರೆಗೆ ಪುಣೆಯ ಅಮೋಲ್ ಕಾಳೆ, ಅಮಿತ್ ದಗವೇಕರ್, ಮನೋಹರ್ ಎಡವೇ ಎಂಬ ಮೂವರನ್ನೂ ಎಸ್ಐಟಿ ಪೊಲೀಸರು ಬಂಧಿಸಿದ್ದಾರೆ.
ಅಸಲಿಗೆ ಟ್ರಿಗರ್ ಎಳೆದಿದ್ದು ಯಾರು?
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದವನಾಗಿರುವ ಸುಜೀತ್ ಕುಮಾರ್ ಅಲಿಯಾಸ್ ಪ್ರವೀಣ್ ಮತ್ತು ಮೈಸೂರಿನ ಕೆಟಿ ನವೀನ್ ಕುಮಾರ್ ಅವರು ಗೌರಿ ಲಂಕೇಶ್ ಹತ್ಯೆಯ ಸಂಚಿನಲ್ಲಿ ಭಾಗಿಯಾಗಿದ್ದಾರೆಯೇ ಹೊರತು ತಾವೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿಲ್ಲ. ಅಸಲಿಗೆ ಗೌರಿ ಲಂಕೇಶ್ ಹತ್ಯೆ ಮಾಡಿದ್ದು ಯಾರು ಎಂಬುದು ಇನ್ನೂ ಬಯಲಾಗಿಲ್ಲ. ಸಿಟಿಟಿವಿಯಲ್ಲಿ ದಾಖಲಾದ ವಿಡಿಯೋ ಚಿತ್ರೀಕರಣ ಮತ್ತು ಬಂಧಿತ ಆರೋಪಿಗಳ ಮುಖ ಚೆಹರೆಯ ಆಧಾರದ ಮೇಲೆ ಪೊಲೀಸರು ಕೊಲೆಗಡುಕನನ್ನು ಇನ್ನೂ ಪತ್ತೆ ಹಚ್ಚಬೇಕಿದೆ.
ಕಂಟ್ರಿ ಮೇಡ್ ಪಿಸ್ತೂಲು ಎಂದರೇನು? ಅಂಡರ್ ವರ್ಲ್ಡ್ ಗೆ ಇದೇಕೆ ಇಷ್ಟ?
ಗೌರಿ, ಕಲಬುರ್ಗಿ ಕೊಂದಿದ್ದು ಒಂದೇ ಗನ್
ಗೌರಿ ಲಂಕೇಶ್ ಹತ್ಯೆಯ ತನಿಖೆಯ ಜೊತೆಗೆ ಸಂಶೋಧಕ ಎಂಎಂ ಕಲಬುರ್ಗಿ ಅವರ ಹತ್ಯೆಯ ತನಿಖೆಯೂ ತೀವ್ರ ಸ್ವರೂಪ ಪಡೆದುಕೊಂಡಿದೆ. ತನಿಖೆಯ ಪ್ರಕಾರ, ಎರಡೂ ಕೊಲೆಗಳನ್ನು 7.65 ಎಂಎಂ ಕಂಟ್ರಿ ಬಂದೂಕಿನಿಂದ ಮಾಡಲಾಗಿದೆ. ವಿಧಿವಿಜ್ಞಾನ ಇಲಾಖೆ ನಡೆಸಿದ ಪರೀಕ್ಷೆಯಲ್ಲಿಯೂ ಇದು ದೃಢಪಟ್ಟಿದೆ. ಗೌರಿ ಲಂಕೇಶ್ ಹತ್ಯೆಗೆ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ಚಾರ್ಜ್ ಶೀಟ್ ನಲ್ಲಿ ಎರಡೂ ಕೊಲೆಗಳ ನಡುವೆ ಇರುವ ಸಾಮ್ಯತೆಯನ್ನು ವಿವರಿಸಲಾಗಿದೆ. ಕಲಬುರ್ಗಿ ಅವರನ್ನು ಧಾರವಾಡದಲ್ಲಿ 2015ರ ಆಗಸ್ಟ್ 30ರಂದು ಅವರ ಹಣೆಗೆ ನೇರವಾಗಿ ಗುಂಡಿಟ್ಟು ಹತ್ಯೆಗೈಯಲಾಗಿತ್ತು.