ಗೌರಿ ಕೊಲೆ ದಿನದ ಅಣಕು ದೃಶ್ಯ ಸೃಷ್ಠಿ ಮಾಡಿದ ಎಸ್ಐಟಿ
ಬೆಂಗಳೂರು, ಮಾರ್ಚ್ 06: ಗೌರಿ ಲಂಕೇಶ್ ಮನೆಯ ಬಳಿ ಕೊಲೆಯ ದಿನ ನಡೆದಿದ್ದ ದೃಶ್ಯಗಳನ್ನೇ ಎಸ್ಐಟಿ ಪೊಲೀಸರು ಮರು ಸೃಷ್ಠಿಸಿದರು. ಹತ್ಯೆಕೋರ ಧರಿಸಿದ್ದ ಬಣ್ಣದ ಬಟ್ಟೆಗಳನ್ನೆ ಆರೋಪಿ ನವೀನ್ಗೆ ಧರಿಸಲು ನೀಡಿ, ಬಿಳಿ ಹೆಲ್ಮೆಟ್ ಹಾಕಿಸಿ ಬೈಕ್ನಲ್ಲಿ ಓಡಾಡಿಸಲಾಯಿತು.
ನವೀನ್ ಕುಮಾರ್ ಅಲಿಯಾಸ್ ಹೊಟ್ಟೆ ಮಂಜ ಗೌರಿ ಆರೋಪಿಗಳಿಗೆ ಸಹಾಯ ಮಾಡಿದ್ದಾನೆ ಎಂಬ ಅನುಮಾನ ಎಸ್ಐಟಿ ತಂಡಕ್ಕೆ ಇದೆ. ಆದರೆ ಆತನೇ ಕೊಲೆ ಮಾಡಿರುವ ಸಾಧ್ಯತೆಯನ್ನೂ ತಳ್ಳಿಹಾಕಲು ಸಾಧ್ಯವಿಲ್ಲವಾದ್ದರಿಂದ ಈ ರೀತಿಯ ದೃಶ್ಯ ಮರುಸೃಷ್ಠಿ ಮಾಡಿಸಿ ಪರಿಶೀಲನೆ ಮಾಡಲಾಯಿತು.
ಗೌರಿ ಲಂಕೇಶ್ ಹತ್ಯೆ: ಸಿಸಿಟಿವಿ ಕ್ಯಾಮೆರಾದಲ್ಲಿದ್ದುದು ಹಂತಕನಾ..?!
ಆ ದಿನ ಹಂತಕ ಧರಿಸಿದ್ದಂತೆಯೇ ನವೀನ್ಗೂ ಬಿಳಿ ಬಣ್ಣದ ಹೆಲ್ಮೆಟ್ ಹಾಕಿಸಿ, ಮನೆ ಹತ್ತಿರ ಬೈಕ್ನಲ್ಲಿ ಓಡಾಡಿಸಿದರು. ನಂತರ ಮನೆಯ ಗೇಟ್ ಬಳಿ ನಿಂತು, ಗೌರಿಯತ್ತ ಗುಂಡು ಹಾರಿಸುವಂತೆ ಅಣಕು ಪ್ರದರ್ಶನ ಮಾಡಿಸಿದರು. ಈ ಸಂದರ್ಭದಲ್ಲಿ ವಿಧಿವಿಜ್ಞಾನ ಪ್ರಯೋಗಾಲಯದ (ಎಫ್ಎಸ್ಎಲ್) ತಜ್ಞರೂ ಸ್ಥಳದಲ್ಲಿದ್ದರು.
ಹಂತಕ ಬೈಕ್ನಲ್ಲಿ ಬಂದು ಗೌರಿಯತ್ತ ಗುಂಡು ಹಾರಿಸಿದ್ದ ದೃಶ್ಯಗಳು ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದವು. ಆದರೆ, ಆ ದೃಶ್ಯಗಳು ಸ್ಪಷ್ಟವಾಗಿರಲಿಲ್ಲ. ಕೃತ್ಯದಲ್ಲಿ ನವೀನ್ ಮೇಲೆ ಅನುಮಾನ ಹೊಂದಿರುವ ಎಸ್ಐಟಿ, ಆತನ ಹಾಗೂ ಹಂತಕನ ನಡುವೆ ಏನಾದರೂ ಸಾಮ್ಯತೆ ಇದೆಯೇ ಎಂಬುದನ್ನು ಪರಿಶೀಲಿಸಲು ಈ ಪ್ರಕ್ರಿಯೆ ಮಾಡಿಸಿತು.
ಗೌರಿ ಲಂಕೇಶ್ ಹತ್ಯೆ : ಸಿಸಿಟಿವಿ ದೃಶ್ಯಗಳು ಪೊಲೀಸರ ವಶಕ್ಕೆ
ನವೀನ್ ಬೈಕ್ ನಲ್ಲಿ ಓಡಾಡಿದ ದೃಶ್ಯಗಳನ್ನು ಚಿತ್ರೀಕರಿಸಿಕೊಂಡು ಸಿಸಿಟಿವಿಯಲ್ಲಿ ಕಂಡ ದೃಶ್ಯಗಳಿಗೂ ಇದಕ್ಕೂ ಹೋಲಿಕೆ ಇರುವ ಬಗ್ಗೆ ಎಸ್ಐಟಿ ಪರಿಶೀಲನೆ ನಡೆಸಿತು.