ಗೌರಿ ಸ್ಮಾರಕ ಟ್ರಸ್ಟ್ ನಿಂದ ಲಂಕೇಶ್ ಪತ್ರಿಕೆ ಮುಂದುವರಿಕೆ
ಬೆಂಗಳೂರು, ಡಿಸೆಂಬರ್ 4: ಇನ್ನು ಮುಂದೆ ಗೌರಿ ಸ್ಮಾರಕ ಟ್ರಸ್ಟ್ ಮೂಲಕ ಗೌರಿ ಲಂಕೇಶ್ ಪತ್ರಿಕೆ ಬರುತ್ತದೆ ಎಂದು ದೊಡ್ಡಿಪಾಳ್ಯ ನರಸಿಂಹ ಮೂರ್ತಿ ಹೇಳಿದರು.
ಇಲ್ಲಿ ಸೋಮವಾರ ಗೌರಿ ಸ್ಮಾರಕ ಟ್ರಸ್ಟ್ ನೋಂದಣಿಯಾದ ನಂತರ ಆಯೋಜಿಸಿದ್ದ ದಿಟವ ನುಡಿಯುವ ದಿಟ್ಟತನ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಈ ಟ್ರಸ್ಟ್ ನಲ್ಲಿ ಹದಿನೇಳು ಸದಸ್ಯರಿರುತ್ತಾರೆ. ಸ್ವಾತಂತ್ರ್ಯ ಹೋರಾಟಗಾರರಾದ ದೊರೆಸ್ವಾಮಿ ಅವರು ಸಹ ಇರುತ್ತಾರೆ ಎಂದರು.
ತುರ್ತು ಪರಿಸ್ಥಿತಿ ನಂತರದ ಕೆಟ್ಟ ಕಾಲಘಟ್ಟವಿದು: ಸಿದ್ಧಾರ್ಥ ವರದರಾಜನ್
'ದ ವೈರ್' ವೆಬ್ ಸೈಟ್ ನ ಸಿದ್ಧಾರ್ಥ ವರದರಾಜನ್ ಸಹ ಟ್ರಸ್ಟ್ ನ ಭಾಗವಾಗಿ ಇರಲು ಒಪ್ಪಿದ್ದಾರೆ ಎಂದು ತಿಳಿಸಿದ ಅವರು, ಟ್ರಸ್ಟ್ ನಿಂದ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ವಿಚಾರ ಸಂಕಿರಣಗಳನ್ನು ಆಯೋಜಿಸಲಾಗುವುದು. ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತ ವರ್ಗದ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.
ಈ ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆತಲ್ ವಾಡ್, ಚುಕ್ಕಿ ನಂಜುಂಡಸ್ವಾಮಿ, ಸಾಹಿತಿ ದೇವನೂರ ಮಹಾದೇವ, ಕವಿತಾ ಲಂಕೇಶ್, ಡಾ.ವಿಜಯಮ್ಮ, ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ, ಎ.ಕೆ.ಸುಬ್ಬಯ್ಯ, ರಹಮತ್ ತರೀಕೆರೆ, ಶಿವಸುಂದರ್, ಕೆ.ನೀಲಾ, ದಿನೇಶ್ ಅಮಿನ್ ಮಟ್ಟು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದರು. ಅನಾರೋಗ್ಯದ ಕಾರಣದಿಂದಾಗಿ ನಟ ಪ್ರಕಾಶ್ ರೈ ಬಂದಿರಲಿಲ್ಲ.