ಕಸ ವಿಂಗಡಣೆ : ಜನ ಪಾಸ್, ಸರ್ಕಾರ ಫೇಲ್ : ಸಿಎನ್ ಅಶ್ವತ್ಥ ನಾರಾಯಣ
ಬೆಂಗಳೂರು, ಮಾರ್ಚ್ 02 : ಜನರು ವಿಂಗಡಿಸಿ ನೀಡಿದ ತ್ಯಾಜ್ಯವನ್ನು ವಿಲೇವಾರಿ ಮಾಡುವ ವಿಷಯದಲ್ಲಿಯೂ ಸರ್ಕಾರ ಹಾಗು ಬಿಬಿಎಂಪಿ ನಿರಂತರವಾಗಿ ವೈಫಲ್ಯವನ್ನು ಕಾಣುತ್ತಿದೆ ಎಂದು ಮಲ್ಲೇಶ್ವರಂ ಶಾಸಕರಾದ ಡಾ. ಸಿ. ಎನ್. ಅಶ್ವತ್ ನಾರಾಯಣ್ ಅವರು ಆರೋಪಿಸಿದ್ದಾರೆ.
ತನ್ನ ಸೋಲನ್ನು ಒಪ್ಪಿಕೊಳ್ಳದ ಸರ್ಕಾರ ಯಾವುದೇ ಸತ್ಯಾಂಶವಿಲ್ಲದ/ವಾಸ್ತವಕ್ಕೆ ನಿಲುಕದ ಪೊಳ್ಳು ಸಮೀಕ್ಷೆಯ ನಾಟಕವಾಡಿ, ಜನರ ವಿಶ್ವಾಸ ಗಳಿಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ ಎಂದು ಅಶ್ವತ್ ನಾರಾಯಣ್ ಅವರು ವಿಧಾನಸೌಧದ ಬಿಜೆಪಿ ಶಾಸಕಾಂಗ ಕಚೇರಿಯಲ್ಲಿ ಶುಕ್ರವಾರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ದೂರಿದರು.
ಅಭಿವೃದ್ಧಿ ಆಲೋಚನೆ ಹಂಚಿಕೊಳ್ಳಲು ಜನಪರ ಶಕ್ತಿ: ಶಾಸಕ ಅಶ್ವಥ್ ನಾರಾಯಣ್
ನಗರಾಭಿವೃದ್ದಿ ಸಚಿವರು, ಬಿಬಿಎಂಪಿ ಆಯುಕ್ತರು ಮತ್ತು ಜಂಟಿ ಆಯುಕ್ತರು, ಘನ ತ್ಯಾಜ್ಯ ತಂಡ ವಾರ್ಡ್ಗಳಲ್ಲಿ ಕಸ ವಿಂಗಡಣೆ ಪ್ರಮಾಣದ ಸಮೀಕ್ಷೆ ಮಾಡಿದ್ದು, 5 ವಾರ್ಡ್ಗಳಲ್ಲಿ ಶೇ.80ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕಸ ವಿಂಗಡಣೆಯಾಗುತ್ತಿದೆ ಎಂದು ಸಮೀಕ್ಷಾ ವರದಿಯಲ್ಲಿ ತಿಳಿಸಿದ್ದಾರೆ.
ಬೊಮ್ಮನಹಳ್ಳಿ, ದಾಸರಹಳ್ಳಿ ಮತ್ತು ಯಲಹಂಕ ವಲಯದಲ್ಲಿ ಶೇ.60ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕಸ ವಿಂಗಡಣೆಯಾಗುತ್ತಿದೆ. ಆರ್.ಆರ್. ನಗರ, ದಕ್ಷಿಣ, ಪಶ್ಚಿಮ, ಪೂರ್ವ ಮತ್ತು ಮಹದೇವಪುರ ವಲಯಗಳಲ್ಲಿ ಶೇ.40ರಿಂದ 60ರಷ್ಟು ಪ್ರಮಾಣದಲ್ಲಿ ಕಸ ವಿಂಗಡಣೆಯಾಗುತ್ತಿದೆ.
ಅಧಿಕಾರಿಗಳ ಹೇಳಿಕೆಯಂತೆ, ಶೇ.75 ಅಂದರೆ 1143 ಟನ್ ಹಸಿ ಕಸ ಉತ್ಪತಿಯಾಗುತ್ತಿದ್ದು. ವಿಲೇವಾರಿ ಘಟಕಗಳಿಗೆ ಕೇವಲ 165ರಿಂದ 180 ಟನ್ ಮಾತ್ರ ರವಾನೆಯಾಗುತ್ತಿದೆ. ಹಾಗಾದರೇ ಉಳಿದ ಹಸಿ ಕಸ ಎಲ್ಲಿಗೆ ರವಾನಿಸಲಾಗುತ್ತಿದೆ ಅಥವಾ ನೀಡಿರುವ ಅಂಕಿಗಳು ತಪ್ಪಾಗಿದೆಯೇ? ಎಂದು ಅವರು ಸರ್ಕಾರ ಹಾಗು ಬಿಬಿಎಂಪಿಯನ್ನು ಪ್ರಶ್ನಿಸಿದರು.
ನಿಮ್ಮ ಪ್ರಶ್ನೆ, ಮಲ್ಲೇಶ್ವರ ಶಾಸಕ ಅಶ್ವತ್ಥ ನಾರಾಯಣರ ಉತ್ತರ
ಅಲ್ಲದೇ, ಕಸ ವಿಲೇವಾರಿಯಲ್ಲಿ ಬಿ.ಬಿ.ಎಂ.ಪಿ ವೈಫಲ್ಯವನ್ನು ಜನರ ಮೇಲೆ ಹಾಕಿ, ಜನರು ಕಸ ಬೇರ್ಪಡಿಸಲು ಸಹಕರಿಸುತ್ತಿಲ್ಲ ಎಂದು ಹೇಳುವ ಅಧಿಕಾರಿಗಳು, ಬೇರ್ಪಡಿಸಿದ ಕಸ ಎಲ್ಲಿಗೆ ಹೋಗುತ್ತಿದೆ ಹಾಗೂ ಆ ಕಸ ಹೇಗೆ ವಿಲೇವಾರಿ ಯಾಗುತ್ತಿದೆ ಎಂದು ಮೊದಲು ತಿಳಿಸಲಿ ಎಂದು ಆಗ್ರಹಿಸಿದರು.
ಕಸ ವಿಂಗಡಣೆಯಲ್ಲಿ ಜನರು ಪಾಸ್, ವಿಂಗಡಿಸಿದ ಕಸ ವಿಲೇವಾರಿಯಲ್ಲಿ ಸರ್ಕಾರ ಫೇಲ್! ವಿಲೇವಾರಿಯಾಗುತ್ತಿರುವ ಹಸಿ ಕಸ 180 ಟನ್ ಮಾತ್ರ. ಉಳಿದ ಹಸಿ ಕಸ ಎಲ್ಲಿಗೆ ಹೋಗುತ್ತಿದೆ? ಬಹುತೇಕ ಸ್ಥಳಗಳ ಖಾಲಿ ನಿವೇಶನ, ಮೋರಿ, ರಸ್ತೆ ಬದಿಗಳಲ್ಲಿ ಕಸದ ರಾಶಿ ಬೀಳುತ್ತಿದ್ದು, ಹಲವೆಡೆ ಬೆಂಕಿ ಹಾಕಲಾಗುತ್ತಿದೆ ಎಂದು ಆರೋಪಿಸಿದರು.
ಬಿಬಿಎಂಪಿ ಸುಮಾರು 800 ಕೋಟಿಗೂ ಹೆಚ್ಚು ಹಣ ಖರ್ಚು ಮಾಡಿ, ಪ್ರತಿದಿನ 2800 ಟನ್ ಸಾಮರ್ಥ್ಯದ ಕಸ ವಿಲೇವಾರಿ ಘಟಕ ನಿರ್ಮಿಸಿದ್ದು, ಶೇ.7 ಸಾಮರ್ಥ್ಯ ಕೂಡ ಬಳಕೆಯಾಗುತ್ತಿಲ್ಲ. ಜನರ ತೆರಿಗೆ ಹಣದಲ್ಲಿ 1 ಕೆ.ಜಿ ಕಸ ವಿಲೇವಾರಿಗೆ ರೂ.13 ಖರ್ಚು. ಆದರೂ ಫಲಿತಾಂಶ ಮಾತ್ರ ಶೂನ್ಯ ಎಂದು ಅವರು ವ್ಯಂಗ್ಯವಾಡಿದರು.
ತ್ಯಾಜ್ಯಕ್ಕೆ ಬೆಂಕಿ ಇಟ್ಟವರಿಗೆ ಬೀಳುತ್ತೆ 2 ಲಕ್ಷ ದಂಡ
ಬಿಬಿಎಂಪಿಯು ವಾರ್ಷಿಕ ರೂ.1632 ಕೋಟಿ ಹಣವನ್ನು ಕಸ ಸಂಗ್ರಹಣೆ ಹಾಗೂ ವಿಲೇವಾರಿಗೆ ಖರ್ಚು ಮಾಡುತ್ತಿದೆ. ಜನರು ಬೇರ್ಪಡಿಸಿ ನೀಡಿದ ಕಸವನ್ನು ಕೂಡ ವೈಜ್ಞಾನಿಕ ವಿಲೇವಾರಿ ಮಾಡಲಾಗುತ್ತಿಲ್ಲ. ನಿಜವಾಗಿಯೂ ಈ ಹಣ ಕಸ ವಿಲೇವಾರಿಗೆ ಖರ್ಚು ಮಾಡಲಾಗುತ್ತಿದೆಯೆ? ಎಂದು ಅವರು ಪ್ರಶ್ನಿಸಿದರು.
ಒಂದೆಡೆ ಎಲೆಕ್ಟ್ರಿಕ್ ವಾಹನ ಖರೀದಿಸಿ ಬೆಂಗಳೂರಿನ ಮಾಲಿನ್ಯ ತಡೆಯಲು ಮುಂದಾಗಿರುವ ಸರ್ಕಾರ, ಇನ್ನೊಂದೆಡೆ ಅವೈಜ್ಞಾನಿಕ ರೀತಿ ಕಸ ವಿಲೇವಾರಿ ಮಾಡಿ, ಈ ಮೂಲಕ ಉತ್ಪತಿಯಾಗುತ್ತಿರುವ ಮಿಥೇನ್ ಅನಿಲದಿಂದ ಪರಿಸರವನ್ನು ಮತ್ತಷ್ಟು ಹಾಳುಮಾಡಲು ಮುಂದಾಗಿದೆ. ಇದು ಯಾವ ಸೀಮೆ ಪರಿಸರ ಕಾಳಜಿ? ಎಂದು ಆಕ್ರೋಶ ವ್ಯಕ್ತಪಡಿಸಿದರು.