ಲಾಲ್ಬಾಗ್ ಫಲಪುಷ್ಪ ಪ್ರದರ್ಶನವನ್ನು ತ್ಯಾಜ್ಯಮುಕ್ತ ಮಾಡ್ತಾರೆ ಹೇಗೆ?
ಬೆಂಗಳೂರು, ಜು.24: ಲಾಲ್ಬಾಗ್ನಲ್ಲಿ ಆಗಸ್ಟ್ 4 ರಿಂದ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನ ಆರಂಭವಾಗಲಿದೆ.
ಈ ಬಾರಿಯ ಫಲಪುಷ್ಪ ಪ್ರದರ್ಶನವನ್ನು ತ್ಯಾಜ್ಯಮುಕ್ತವನ್ನಾಗಿಸಲು ತೋಟಗಾರಿಕೆ ಇಲಾಖೆ ಆಲೋಚಿಸಿದೆ, ಒಂದೊಮ್ಮೆ ಮಳಿಗೆಗಳು ಸ್ವಚ್ಛತೆ ಕಾಪಾಡದಿದ್ದರೆ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.
ಭಾರತೀಯ ಸೇನೆ: ಈ ಬಾರಿ ಲಾಲ್ ಬಾಗ್ ಫ್ಲವರ್ ಶೋ ಥೀಮ್
ಪ್ರದರ್ಶನದ ವೇಳೆ ಮತ್ತು ಮುಗಿದ ನಂತರ ಯಾರೂ ತಮ್ಮಲ್ಲಿ ಸಂಗ್ರಹವಾದ ತ್ಯಾಜ್ಯವನ್ನು ವಿಂಗಡಿಸಿ ವಿಲೇವಾರಿ ಮಾಡುವುದಿಲ್ಲವೋ ಅಂತಹ ಮಳಿಗೆದಾರರ ಠೇವಣಿ ಹಣವನ್ನು ಮುಟ್ಟುಗೋಲು ಹಾಕಿಕೊಂಡು ಆ ಹಣದಲ್ಲಿ ಸ್ವಚ್ಛಗೊಳಿಸಲಾಗುತ್ತದೆ.ಫಲಪುಷ್ಪ ಪ್ರದರ್ಶನದ ವೇಳೆ ಉದ್ಯಾನದಲ್ಲಿ ಸುಮಾರು 120 ಮಾರಾಟ ಮಳಿಗೆಗಳನ್ನು ತೆರೆಯಲಾಗುತ್ತದೆ. ಈ ವೇಳೆ ಸಾಕಷ್ಟು ತ್ಯಾಜ್ಯ ಸಂಗ್ರಹವಾಗುತ್ತದೆ.
ಕೆಲವು ಮಳಿಗೆಗಳು ಉದ್ಯಾನದ ಪರಿಸರಕ್ಕೆ ಧಕ್ಕೆಯಾಗದಂತೆ ತ್ಯಾಜ್ಯ ವಿಂಗಡಿಸಿ, ವಿಲೇವಾರಿ ಮಾಡುತ್ತದೆ. ಆದರೆ ಕೆಲವರು ಪ್ರದರ್ಶನ ಮುಗಿದ ನಂತರ ತ್ಯಾಜ್ಯ ಸ್ವಚ್ಛಗೊಳಿಸದೆ, ಎಲ್ಲೆಂದರಲ್ಲಿ ಎಸೆದು ಹೊರಟುಬಿಡುತ್ತಾರೆ, ಇದರಿಂದ ಉದ್ಯಾನದ ಅಂದಕ್ಕೆ ಧಕ್ಕೆಯಾಗುವುದಷ್ಟೇ ಅಲ್ಲದೆ ತೀವ್ರ ಮಾರಕವೂ ಹೌದು.
ಉರಗ ತಜ್ಞರು, ಜೇನು ತಜ್ಞರು, ಶ್ವಾನ ತಜ್ಞರು ಹೀಗೆ ವಿವಿಧ ತಜ್ಞರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿರುವ ಅಧಿಕಾರಿಗಳು ಈ ಬಾರಿಯ ಫಲಪುಷ್ಪ ಪ್ರದರ್ಶನದಲ್ಲಿ ಯಾವುದೇ ಅಹಿತರಕರ ಘಟನೆಗಳು ನಡೆಯದ ರೀತಿಯಲ್ಲಿ ಎಚ್ಚರಿಕೆ ವಹಿಸಲು ಕ್ರಮ ಕೈಗೊಳ್ಳಲಾಗಿದೆ.