ರಸ್ತೆಯಲ್ಲಿ ಅಪರಿಚಿತರು ಬನ್ನಿ ಡ್ರಾಪ್ ಕೊಡುತ್ತೇನೆ ಎಂದರೆ ಹುಷಾರ್!
ಬೆಂಗಳೂರು, ಏಪ್ರಿಲ್ 04: ಕೇವಲ ಮಹಿಳೆಯರ ಚಿನ್ನಾಭರಣಗಳನ್ನು ಮಾತ್ರ ದುಷ್ಕರ್ಮಿಗಳು ಲೂಟಿ ಮಾಡುತ್ತಿಲ್ಲ, ಪುರುಷರನ್ನೂ ಇವರು ಬಿಡುತ್ತಿಲ್ಲ.
ಬಸ್ಗಾಗಿ ಕಾಯುತ್ತಿದ್ದ ವ್ಯಕ್ತಿಗೆ ಡ್ರಾಪ್ ನೀಡುವುದಾಗಿ ಹೇಳಿ ಕ್ಯಾಬ್ ನಲ್ಲಿ ಹತ್ತಿಸಿಕೊಂಡ ದರೋಡೆಕೋರರು ಚಾಕು ತೋರಿಸಿ ಬೆದರಿಸಿ, ಸರ, ಉಂಗುರ ಕಸಿದುಕೊಂಡು ಮಾರ್ಗ ಮಧ್ಯೆ ಕೆಳಗೆ ತಳ್ಳಿ ಪರಾರಿಯಾದ ಘಟನೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮಚ್ಚಿನಿಂದ ಹಲ್ಲೆ ನಡೆಸಿ ಚಿನ್ನಾಭರಣ ದರೋಡೆ, ವಿಡಿಯೋ ವೈರಲ್
ಹೊಸ್ ರೋಡ್ ಬಳಿಯ ಕೋನಪ್ಪನ ಅಗ್ರಹಾರ ಬಸ್ ನಿಲ್ದಾಣದ ಬಳಿ ಸದಾಶಿವ ರೆಡ್ಡಿ ಎಂಬುವರು ರಾತ್ರಿ 10.30ರ ಸುಮಾರಿಗೆ ಬಸ್ ಗಾಗಿ ಕಾಯುತ್ತಿದ್ದರು. ಈ ವೇಳೆ ಇವರ ಬಳಿ ಟಾಟಾ ಇಂಡಿಕಾ ಕ್ಯಾಬ್ ಬಂದಿದೆ, ಈ ಕ್ಯಾಬ್ ನಲ್ಲಿ ಮೊದಲೇ ಮೂವರು ಕುಳಿತಿದ್ದರು. ಚಾಲಕ ಎಲ್ಲಿಗೆ ಹೋಗಬೇಕು ಎಂದು ವಿಚಾರಿಸಿ ಡ್ರಾಪ್ ಕೊಡುವುದಾಗಿ ಅವರನ್ನು ಕ್ಯಾಬ್ ನಲ್ಲಿ ಹತ್ತಿಸಿಕೊಂಡಿದ್ದಾರೆ.
ಕಾರು ಸ್ವಲ್ಪ ದೂರ ಹೋಗುತ್ತಿದ್ದಂತೆಯೇ ಸದಾಶಿವ ರೆಡ್ಡಿ ಅವರಿಗೆ ಚಾಕು ತೋರಿಸಿ ಕಲ್ಲಿನಿಂದ ಹೊಡೆದು ಸರ, ಉಂಗುರ ಕಿತ್ತುಕೊಂಡು ಅವರನ್ನು ಕೆಳಗೆ ತಳ್ಳಿ ಪರಾರಿಯಾಗಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.