ಗಜ ಚಂಡಮಾರುತ ಎಫೆಕ್ಟ್: ಬೆಂಗಳೂರಲ್ಲಿ ಮೂರು ದಿನ ಮಳೆ ಸಾಧ್ಯತೆ
Recommended Video
ಬೆಂಗಳೂರು, ನವೆಂಬರ್ 13: ಗಜ ಚಂಡಮಾರುತದ ಪರಿಣಾಮದಿಂದ ನವೆಂಬರ್ 15,16,1ರಂದು ಬೆಂಗಳೂರಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇಂದು ತಮಿಳುನಾಡು ಹಾಗೂ ಆಂಧ್ರಪ್ರದೇಶವನ್ನು ಪ್ರವೇಶಿಸಲಿದ್ದು, ನವೆಂಬರ್ 15ರ ವೇಳೆಗೆ ಕರ್ನಾಟಕವನ್ನು ತಲುಪಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರೆಡ್ ಅಲರ್ಟ್ :ದಕ್ಷಿಣ ರಾಜ್ಯಗಳತ್ತ ನುಗ್ಗುತ್ತಿರುವ 'ಗಜ' ಚಂಡಮಾರುತ
ಅಂಡಮಾನ್ ನಿಕೋಬಾರ್ ಬಳಿ ಸೃಷ್ಟಿಯಾಗಿರುವ ಚಂಡಮಾರುತದ ಪರಿಣಾಮ ನಗರಕ್ಕೆ ಸ್ವಲ್ಪ ಮಟ್ಟಿಗೆ ತಟ್ಟಲಿದೆ. ಇದರಿಂದಾಗಿ ಅಲ್ಲಲ್ಲಿ ಮೂರು ದಿನ ಸಾಧಾರಣ ಮಳೆಯಾಗಬಹುದು ಎಂದು ಹವಮಾನ ಇಲಾಖೆ ಹೇಳಿದೆ. ಕಳೆದ ಒಂದು ತಿಂಗಳ ಹಿಂದೆ ತಿತ್ಲಿ ಚಂಡಮಾರುತದಿಂದ ಸಾಕಷ್ಟು ಅನಾಹುತಗಳು ಸೃಷ್ಟಿಯಾಗಿದ್ದು, ನೂರಾರು ಮಂದಿ ಬಲಿಯಾಗಿದ್ದರು.
ಚಳಿ ಕಡಿಮೆಯಾಗುವ ನಿರೀಕ್ಷೆ
ನಗರದಲ್ಲಿ ಮಳೆ ಬಂದರೆ ಅಥವಾ ಮೋಡ ಮುಸುಕಿದ ವಾತಾವರಣ ಕಂಡುಬಂದರೆ ಚಳಿ ಕಡಿಮೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ. ಕಳೆದ ಒಂದು ತಿಂಗಳಿಂದ ಬೆಳಗಿನ ಜಾವ ಚಳಿ ವಿಪರೀತವಾಗಿದೆ. ಹಗಲಿನಲ್ಲಿ ತಂಪು ಗಾಳಿ ಬೀಸುತ್ತಿದೆ. ಸಂಜೆ ಹಾಗೂ ರಾತ್ರಿ ಚಳಿಯ ಅನುಭವವಾಗುತ್ತಿದೆ.
ತಾಪಮಾನ ಮೇಲಕ್ಕೇರುವ ಸಾಧ್ಯತೆ
ಸದ್ಯಕ್ಕೆ ಗರಿಷ್ಠ ತಾಪಮಾನ 29-30ನಷ್ಟಿದ್ದು ಕನಿಷ್ಠ ತಾಪಮಾನ 17-18 ಡಿಗ್ರಿ ಸೆಲ್ಸಿಯಸ್ ನಷ್ಟಿದೆ. ಒಂದೊಮ್ಮೆ ಮಳೆ ಬಾರದಿದ್ದರೆ ಮೋಡ ಮುಸುಕಿದ ವಾತಾವರಣ ಸೃಷ್ಟಿಯಾದರೆ ತಾಪಮಾನ ಹೆಚ್ಚಾಗುವ ಸಾಧ್ಯತೆ ಇದೆ.
ತಿತ್ಲಿ ಚಂಡಮಾರುತದ ಹೊಡೆತಕ್ಕೆ 62 ಬಲಿ, 8 ದಿನದಿಂದ ವಿದ್ಯುತ್ ಇಲ್ಲ
ಚೆನ್ನೈನಿಂದ ಗಜ 840 ಕಿ.ಮೀ ದೂರದಲ್ಲಿದೆ
ಗಜ ಚಂಡ ಮಾರುತ ಇದೀಗ ಚೆನ್ನೈ ನಿಂದ ಪೂರ್ವಭಾಗದಲ್ಲಿ 930 ಕಿ.ಮೀ ದೂರದಲ್ಲಿತ್ತು ಇದೀಗ 840 ಕಿ.ಮೀ ದೂರದಲ್ಲಿದೆ. ಮಂಗಳವಾರ ಗಂಟೆಗಳಲ್ಲಿ ತಮಿಳುನಾಡು ಮತ್ತು ಆಂಧ್ರ ಪ್ರದೇಶದ ಕರಾವಳಿ ಪ್ರದೇಶಕ್ಕೆ ಗಜ ಅಪ್ಪಳಿಸಲಿದೆ ಎಂದು ಹೇಳಿದ್ದಾರೆ.
ಎಲ್ಲೆಲ್ಲಿ ಮಳೆ ಸಾಧ್ಯತೆ
ಅಂಡಮಾನ್ ದ್ವೀಪದ ಕಡೆಯಿಂದ ಚಂಡಮಾರುತ ಬರುತ್ತಿದೆ. ನ.14 ಅಥವಾ 15ರಂದು ತಮಿಳುನಾಡಿನ ಕರಾವಳಿ ತಲುಪುವ ನಿರೀಕ್ಷೆ ಇದೆ. ಚಂಡಮಾರುತದ ಪ್ರಭಾವದಿಂದ ನಮ್ಮ ರಾಜ್ಯದ ದಕ್ಷಿಣ ಒಳನಾಡು ಹಾಗೂ ಕರಾವಳಿ ಭಾಗದಲ್ಲಿ ಮೂರು ದಿನಗಳ ಕಾಲ ಮಳೆಯಾಗುವ ನಿರೀಕ್ಷೆ ಇದೆ.ನ.15ರಂದು ಮಳೆ ಪ್ರಾರಂಭವಾಗುವ ಸಾಧ್ಯತೆಗಳಿವೆ. 16ರಂದು ಹೆಚ್ಚಿನ ಮಳೆಯನ್ನು ನಿರೀಕ್ಷಿಸಲಾಗುತ್ತಿದೆ. 17ವರೆಗೂ ರಾಜ್ಯದಲ್ಲಿ ಮಳೆಯಾಗುವ ಮುನ್ಸೂಚನೆಗಳಿವೆ.ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಗಜ ಚಂಡಮಾರುತ ತೀವ್ರಗೊಳ್ಳುವ ಸಾಧ್ಯತೆಗಳಿದ್ದು, ಯಾವ ಕಡೆಗೆ ಮುನ್ನುಗ್ಗಲಿವೆ ಎಂಬ ಆಧಾರದ ಮೇಲೆ ರಾಜ್ಯದಲ್ಲಾಗುವ ಮಳೆ ಪ್ರಮಾಣವನ್ನು ನಿರ್ಧರಿಸಲಾಗುವುದು. ಇನ್ನೆರಡು ದಿನಗಳ ನಂತರ ಮಳೆ ನಿರ್ದಿಷ್ಟ ಲಕ್ಷಣ ಗೋಚರವಾಗಲಿದೆ.