ದೊಡ್ಡಬಿದರಕಲ್ಲು ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಪರಮೇಶ್ವರ್ ಭೇಟಿ
ಬೆಂಗಳೂರು, ಜೂನ್ 15: ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ದೊಡ್ಡಬಿದರಕಲ್ಲು ಸಮೀಪದ ಕಸ ಸಂಸ್ಕರಣಾ ಘಟಕಕ್ಕೆ ಶುಕ್ರವಾರ ಭೇಟಿನೀಡಿ ಪರಿಶೀಲಿಸಿದರು.
ಸಂದರ್ಭ ಮಾತನಾಡಿದ ಅವರು, ಎರಡೂವರೆ ವರ್ಷ ಹಿಂದೆ ಸ್ಥಾಪನೆ ಮಾಡಿರುವ ಈ ತ್ಯಾಜ್ಯ ಸಂಸ್ಕರಣಾ ಘಟಕವು ವೈಜ್ಞಾನಿಕವಾಗಿ ಸಿದ್ಧಪಡಿಸಲಾಗಿದೆ. ಇಲ್ಲಿ ನಿತ್ಯ 130 ಟನ್ ತ್ಯಾಜ್ಯ ಸಂಸ್ಕರಿಸಿ ಅದರಿಂದ ಸಿಗುವ ಗೊಬ್ಬರ, ಪೌಷ್ಠಿಕ ಅಂಶವನ್ನು ಸಂಸ್ಕರಿಸಿ ರೈತರಿಗೆ ಒದಗಿಸುವ ಕಾರ್ಯ ಆಗುತ್ತಿದೆ. ಈ ಕಾರ್ಯವನ್ನು ಬಿಬಿಎಂಪಿಯವರು ಅತ್ಯಂತ ಪರಿಣಾಮಕಾರಿಯಾಗಿ ಮಾಡುತ್ತಿದ್ದಾರೆ ಎಂದರು.
ಬೆಂಗಳೂರಿನ ಕೆರೆ ಒತ್ತುವರಿ ಪರಿಶೀಲಿಸಿದ ಡಿಸಿಎಂ ಜಿ.ಪರಮೇಶ್ವರ್
ಬಫರ್ ವಲಯ ನಿರ್ಮಾಣ: ಕಸದ ಸಂಸ್ಕರಣೆಯಿಂದ ಸಾಕಷ್ಟು ವಾಸನೆ ಬರುತ್ತದೆ ಎಂದು ಸ್ಥಳೀಯರು ದೂರುತ್ತಿದ್ದಾರೆ. ಇದರ ಪ್ರಮಾಣ ಅತ್ಯಂತ ಕಡಿಮೆ ಎನ್ನುವುದು ನಮ್ಮ ಅಭಿಪ್ರಾಯ. 200 ಮೀಟರ್ ಬಫರ್ ವಲಯ ಸ್ಥಾಪನೆ ಮಾಡಿದರೆ ತುಂಬಾ ಅನುಕೂಲವಾಗಲಿದೆ.
ಆಗ ಜನರಿಗೆ ಸಮಸ್ಯೆ ಎದುರಾಗುವುದಿಲ್ಲ. ಈ ಬಗ್ಗೆ ಸರ್ಕಾರ ಗಮನ ಹರಿಸಲಿದೆ. ಸದ್ಯ ಬೆಂಗಳೂರಿನಲ್ಲಿ 4.5 ಸಾವಿರ ಟನ್ ತ್ಯಾಜ್ಯ ನಿತ್ಯ ಉತ್ಪತ್ತಿ ಆಗುತ್ತಿದೆ. ಇದನ್ನು ಯಾವುದಾದರೂ ರೂಪದಲ್ಲಿ ಈ ಮಾದರಿಯ ತಂತ್ರಜ್ಞಾನ ಬಳಸಿ ನಿವಾರಿಸಬೇಕಿದೆ.
ತ್ಯಾಜ್ಯ ವಿದ್ಯುತ್ ಇಲ್ಲವೇ ತ್ಯಾಜ್ಯ ಗೊಬ್ಬರದಂತಹ ಪರಿಹಾರ ಮಾರ್ಗದ ಮೂಲಕ ನಾವು ಇದರ ಸಮಸ್ಯೆ ನಿವಾರಿಸಿಕೊಳ್ಳಬೇಕಿದೆ. ಇದಕ್ಕೆ ಬೇರೆ ಬೇರೆ ರೀತಿಯಲ್ಲಿ ಬೆಂಗಳೂರಿನಲ್ಲಿ ಉತ್ಪನ್ನವಾಗುವ ತ್ಯಾಜ್ಯವನ್ನು ವ್ಯವಸ್ಥಿತವಾಗಿ ಸಂಸ್ಕರಿಸಿ ಜನರಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇವೆ. ಸರ್ಕಾರ ಯಾರಿಗೂ ಸಮಸ್ಯೆ ಆಗದಂತೆ ನೋಡಿಕೊಳ್ಳಲಿದೆ ಎಂದು ಭರವಸೆ ನೀಡಿದರು.
ಹಸಿ ಮತ್ತು ಒಣ ತ್ಯಾಜ್ಯ ವಿಲೇವಾರಿ ಮಾಡಬೇಕಾಗಿರುವುದು ನಮ್ಮದೇ ಹಿತಕ್ಕೆ. ತ್ಯಾಜ್ಯ ವಿಂಗಡಿಸುವುದರಿಂದ ಪರಿಸರ ಸಂರಕ್ಷಣೆಗೆ ನಿಮ್ಮ ಕೊಡುಗೆ ನೀಡಿದಂತಾಗುತ್ತದೆ ಅಲ್ಲದೆ ಬೆಂಗಳೂರು ಮಹಾನಗರ ಪಾಲಿಕೆಗೂ ತನ್ನ ಕೆಲಸ ಸುಲಭವಾಗಿ ಮಾಡಲು ಸಾಧ್ಯವಾಗುತ್ತದೆ ಎಂದು ಪರಮೇಶ್ವರ್ ಹೇಳಿದರು.
ಅತ್ಯಂತ ಪರಿಣಾಮಕಾರಿಯಾಗಿ ಈ ಯಂತ್ರಗಳನ್ನು ಬಳಸಿ ಕಾರ್ಯನಿರ್ವಹಿಸಲಾಗುತ್ತಿದೆ. ತ್ಯಾಜ್ಯ ಸಂಗ್ರಹದಿಂದ ಹಿಡಿದು, ಸಾಗಣೆ, ಸಂಶ್ಕರಣೆಗೆ ಪ್ರತ್ಯೇಕ ಮೂರು ಹಂತವನ್ನು ವ್ಯವಸ್ಥಿತವಾಗಿ ಮಾಡಲಾಗುತ್ತಿದೆ. ಈ ಕಾರ್ಯ ಸಾಕಷ್ಟು ವ್ಯವಸ್ಥಿತವಾಗಿ ಸಾಗಿದೆ. ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಲು ನಾನು ಮುಂದಿನ ತಿಂಗಳು ವಿಶೇಷ ಸಭೆ ಕರೆಯುತ್ತಿದ್ದೇನೆ. ಬೇರೆ ಬೇರೆ ದೇಶಗಳಲ್ಲಿ ಕಸ ಸಂಸ್ಕರಣೆಗೆ ಎಷ್ಟು ಹಣ ವಿನಿಯೋಗಿಸಲಾಗುತ್ತಿದೆ ಎನ್ನುವುದನ್ನು ಗಮನಿಸಿಯೇ ನಗರದಲ್ಲಿ ಕೂಡ ಆಧುನಿಕ ತಂತ್ರಜ್ಞಾನ ಅಳವಡಿಸಲಾಗಿದೆ ಎಂದರು.
ಜನ ಸಹಕರಿಸಬೇಕು: ಮಂಡೂರಿನ ತ್ಯಾಜ್ಯ ವಿಲೇವಾರಿಗೆ ಸಾಕಷ್ಟು ಚರ್ಚೆ ಆಗಿದೆ. ಈ ನಿಟ್ಟಿನಲ್ಲಿ ಚಿಂತನೆ ನಡೆಸಿದ್ದೇವೆ. ಆದಷ್ಟು ಬೇಗ ಕ್ರಮ ಕ್ರಮ ಕೈಗೊಳ್ಳುತ್ತೇವೆ. ಕಸ, ತ್ಯಾಜ್ಯ ವಿಲೇವಾರಿಗೆ ಅನುಕೂಲವಾಗುವ ರೀತಿ ಜನರಲ್ಲಿ ನಾವು ಮನವಿ ಮಾಡಿದ್ದೇವೆ.
ಕಸವನ್ನು ಬೇರ್ಪಡಿಸಿ ಕೊಡಿ ಎಂದು ಹೇಳಿದ್ದೇವೆ. ಅದಕ್ಕೆ ಜನ ಸಹಕರಿಸಬೇಕು. ಸಹಕರಿಸಿದರೆ ಬಿಬಿಎಂಪಿ ಕೆಲಸ ಸುಲಭ. ಅಲ್ಲದೇ ಪರಿಸರ ಉತ್ತಮವಾಗಲು ಸಹಕಾರಿಯಾಗುತ್ತದೆ. ದಂಡ ಹಾಕುವುದು ಎರಡು ನಿಮಿಷದ ಕೆಲಸ. ಆದರೆ ಇದೇ ಪರಿಹಾರವಲ್ಲ. ಜನರೇ ಸ್ವಯಂ ಪ್ರೇರಣೆಯಿಂದ ಸಹಕರಿಸಬೇಕೆಂದು ಮನವಿ ಮಾಡಿದರು.