ಬೆಂಗಳೂರಿನತ್ತ ಶಶಿಕಲಾ: ಪೊಲೀಸರ ಸಭೆ ನಡೆಸಿದ ಪರಮೇಶ್ವರ
ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ಅವರನ್ನು ಬೆಂಗಳೂರಿಗೆ ಕರೆತರುತ್ತಿರುವ ಹಿನ್ನೆಲೆ ಭದ್ರತೆ ಮತ್ತು ಮುನ್ನೆಚ್ಚರಿಕಾ ಕ್ರಮಗಳಿಗಾಗಿ ಗೃಹಸಚಿವ ಡಾ. ಜಿ.ಪರಮೇಶ್ವರ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಬೆಂಗಳೂರು, ಫೆಬ್ರವರಿ 15: ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಅವರನ್ನು ಬೆಂಗಳೂರಿಗೆ ಕರೆತರುತ್ತಿರುವ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮಗಳಿಗಾಗಿ ಗೃಹಸಚಿವ ಡಾ. ಜಿ.ಪರಮೇಶ್ವರ ಅವರು ಪೊಲೀಸ್ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ಸಭೆ ನಡೆಸಿದ್ದಾರೆ.
ಗೃಹ ಸಚಿವರ ಸಲಹೆಗಾರ ಕೆಂಪಯ್ಯ, ರಾಜ್ಯ ಪೊಲೀಸ್ ಮಹಾನಿರ್ದೇಶಕ ಆರ್.ಕೆ.ದತ್ತ , ನಗರ ಪೊಲೀಸ್ ಕಮೀಷನರ್ ಪ್ರವೀಣ್ ಸೂದ್, ಹಿರಿಯ ಅಧಿಕಾರಿಗಳಾದ ಎಂ.ಎನ್.ರೆಡ್ಡಿ , ಹೇಮಂತ್ ನಿಂಬಾಳ್ಕರ್ ಮುಂತಾದವರೊಂದಿಗೆ ಭದ್ರತಾ ವ್ಯವಸ್ಥೆ ಕುರಿತು ಸಭೆಯಲ್ಲಿ ಚರ್ಚಿಸಿದರು.[ಕಟಕಟನೆ ಹಲ್ಲು ಕಡಿದು ಸಮಾಧಿಗೆ ರಪ್ಪನೆ ಬಾರಿಸಿದ ಶಶಿ]
ವಿಶೇಷ ನ್ಯಾಯಾಲಯದಲ್ಲಿ ಶರಣಾದ ಮೇಲೆ ಅವರನ್ನು ಜೈಲಿಗೆ ಕರೆತರಲಾಗುವುದು. ಜೈಲಿನಲ್ಲಿ ಯಾವ ರೀತಿಯ ವ್ಯವಸ್ಥೆಗೆ ಶಶಿಕಲಾ ಮತ್ತು ಇತರರನ್ನು ಒಳಪಡಿಸಲಾಗುವುದು. ಜೊತೆಗೆ ಜೈಲಿನ ಮತ್ತು ವಿಶೇಷ ನ್ಯಾಯಾಲಯದ ಬಳಿ ಭದ್ರತಾ ವ್ಯವಸ್ಥೆಯೇನು. ಎಷ್ಟು ಜನ ಪೊಲೀಸರು ಇರುಬೇಕು ಎಂದು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಈಗಾಗಲೇ ಪರಪ್ಪನ ಅಗ್ರಹಾರ ಜೈಲಿನ ಬಳಿ ಪೊಲೀಸ್ ಬಿಗಿ ಭದ್ರತೆಯನ್ನು ಮಾಡಿರುವುದಾಗಿ ಹಿರಿಯ ಅಧಿಕಾರಿಗಳು ಗೃಹಸಚಿವರಿಗೆ ತಿಳಿಸಿದರು. ಅಲ್ಲದೆ ಮುಂಬರುವ ಬಜೆಟ್ ನಲ್ಲಿ ಪೊಲೀಸ್ ಇಲಾಖೆ ಬಗ್ಗೆ ಕೈಗೊಳ್ಳಬೇಕಾದ ಅಭಿವೃದ್ದಿ ಕ್ರಮಗಳ ಬಗ್ಗೆಯೂ ಕೂಡ ಅಧಿಕಾರಿಗಳೊಂದಿಗೆ ಸಚಿವರು ಚರ್ಚೆ ನಡೆಸಿದರು ಎನ್ನಲಾಗಿದೆ.