ಬಿಬಿಎಂಪಿ ಗುತ್ತಿಗೆದಾರರ ಬಾಕಿ ಹಣ ಪಾವತಿಸುತ್ತೇವೆ :ಜಿ. ಪರಮೇಶ್ವರ್
ಬೆಂಗಳೂರು, ಜೂನ್ 11: ಬಿಬಿಎಂಪಿ ಗುತ್ತಿಗೆ ಪೌರಕಾರ್ಮಿಕರ ಬಾಕಿ ಹಣವನ್ನು ಪಾವತಿಸುವುದಾಗಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಾ. ಜಿ. ಪರಮೇಶ್ವರ್ ಭರವಸೆ ನೀಡಿದ್ದಾರೆ.
ಬಾಕಿ ಇರುವ ಬಿಲ್ ಪಾವತಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬಿಬಿಎಂಪಿ ಸ್ವಚ್ಛತೆ ಮತ್ತು ಲಾರಿ ಮಾಲೀಕರು ಹಾಗೂ ಗುತ್ತಿಗೆದಾರರ ಸಂಘ ಸೋಮವಾರ ತ್ಯಾಜ್ಯ ವಿಲೇವಾರಿ ಸ್ಥಗಿತಗೊಳಿಸಿತ್ತು. ಸುಮಾರು 7 ಸಾವಿರಕ್ಕೂ ಹೆಚ್ಚು ಸಹಾಯಕ ಸೇವೆ ಸ್ಥಗಿತಗೊಂಡಿತ್ತು, ಈ ಕುರಿತು ಪರಮೇಶ್ವರ್ ಮಾತನಾಡಿ, ಏನಾದರೂ ಸಮಸ್ಯೆಗಳಿದ್ದಲ್ಲಿ ಗುತ್ತಿಗೆದಾರರು ಸರ್ಕಾರದ ಮುಂದೆ ಹೇಳಿಕೊಳ್ಳಬೇಕು, ಕಸ ವಿಲೇವಾರಿ ಏಜೆನ್ಸಿಗಳ ಕಾರ್ಯಸ್ಥಗಿತ ನಮ್ಮ ಗಮನಕ್ಕೆ ಬಂದಿದೆ ಆದಷ್ಟು ಬೇಗ ಅವರ ಸಮಸ್ಯೆ ಬಗೆಹರಿಯಲಿದೆ ಎಂದರು.
ಬಿಬಿಎಂಪಿ: ತ್ಯಾಜ್ಯ ವಿಲೇವಾರಿ ಸ್ಥಗಿತಗೊಳಿಸಿ ಜೂ.11ರಿಂದ ಪ್ರತಿಭಟನೆ
ಬಿಬಿಎಂಪಿ ತ್ಯಾಜ್ಯ ಸಂಗ್ರಹಿಸಲು 4 ಸಾವಿರಕ್ಕೂ ಹೆಚ್ಚಿನ ಆಟೋ ಟಿಪ್ಪರ್ಗಳಿವೆ, 450ಕ್ಕೂ ಹೆಚ್ಚು ಕಾಂಪ್ಯಾಕ್ಟರ್ಗಳಿವೆ. ಈ ಕಾರ್ಯದಲ್ಲಿ 7 ಸಾವಿರಕ್ಕೂ ಹೆಚ್ಚಿನ ಸಹಾಯಕರು ಸೇವೆ ಮಾಡುತ್ತಿದ್ದಾರೆ. ತ್ಯಾಜ್ಯ ವಿಲೇವಾರಿ ಗುತ್ತಿಗೆದಾರರಿಗೆ ಕಳೆದ ಐದು ತಿಂಗಳ 220 ಕೋಟಿ ರೂ. ಬಿಲ್ ಬಾಕಿ ಉಳಿಸಿಕೊಳ್ಳಲಾಗಿದೆ ಇದನ್ನು ಕೂಡಲೇ ಪಾವತಿಸಬೇಕು ಎಂಬುದು ಗುತ್ತಿಗೆದಾರರ ಆಗ್ರಹವಾಗಿತ್ತು.
ಬಿಬಿಎಂಪಿ ವ್ಯಾಪ್ತಿಯಲ್ಲಿ 4 ಸಾವಿರ ಟನ್ ಕಸ ಉತ್ಪಾದನೆಯಾಗುತ್ತಿದೆ. ಅದರಲ್ಲಿ 2,100 ಟನ್ ಸಂಸ್ಕರಿಸಿ ಉಳಿದಿದ್ದನ್ನು ಕಲ್ಲು ಕ್ವಾರಿಗಳಿಗೆ ಸುರಿಯಲಾಗುತ್ತಿದೆ.