'ಆ ಸುದ್ದಿಗೆ 20 ವರ್ಷದಿಂದ ಕಾದಿದ್ದರು, ಕೊನೆಗೂ ಕೇಳಿಸಿಕೊಳ್ಳಲಿಲ್ಲ'
ಆ ಸುದ್ದಿಗಾಗಿಯೇ ಎರಡು ದಶಕಗಳಿಂದ ಅವರು ಎದುರು ನೋಡುತ್ತಿದ್ದರು. ಆ ಆಸ್ಪತ್ರೆಯ ಟೀವಿಯಲ್ಲಿ ದಪ್ಪ ಅಕ್ಷರಗಳಲ್ಲಿ ಆ ಸುದ್ದಿ ಪ್ರಸಾರ ಆಗುತ್ತಿತ್ತು. ಆದರೆ ಅದಕ್ಕಾಗಿ ಕಾಯುತ್ತಿದ್ದ ವ್ಯಕ್ತಿ ಚಲನೆಯೇ ಇಲ್ಲದೆ ಮಂಚದ ಮೇಲೆ ಮಲಗಿದ್ದರು. ತಮ್ಮ ಸುತ್ತ ಏನಾಗುತ್ತಿದೆ ಎಂಬ ಪರಿವೆ ಇಲ್ಲದೆ ಕೋಮಾ ಸ್ಥಿತಿಯಲ್ಲಿದ್ದರು. ಅವರ ಹೆಸರು ಚಂದ್ರಶೇಖರ್. ಇಸ್ರೋ ಬೇಹುಗಾರಿಕೆ ಪ್ರಕರಣದಲ್ಲಿ ಏಳು ಮಂದಿ ವಿರುದ್ಧ ಆರೋಪ ಮಾಡಲಾಗಿತ್ತು. ಅದರಲ್ಲಿ ಚಂದ್ರಶೇಖರ್ ಒಬ್ಬರು.
ಕಳೆದ ಶುಕ್ರವಾರ ಬೆಳಗ್ಗೆ 76 ವರ್ಷದ ಚಂದ್ರಶೇಖರ್ ಕೋಮಾಗೆ ಜಾರಿದರು. ಅದಾಗಿ ಕೆಲವೇ ಗಂಟೆಗಳಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿತು. 1994ರ ಇಸ್ರೋ ಬೇಹುಗಾರಿಕೆ ಪ್ರಕರಣದಲ್ಲಿ ಮಾಜಿ ವಿಜ್ಞಾನಿ ನಂಬಿ ನಾರಾಯಣನ್ ಮತ್ತು ಇತರ ನಾಲ್ವರ ಪಾತ್ರವಿಲ್ಲ. ನಂಬಿ ನಾರಾಯಣನ್ ಗೆ ನೀಡಿದ ಹಿಂಸೆಗೆ ಪರಿಹಾರವಾಗಿ ಕೇರಳ ಸರಕಾರ 50 ಲಕ್ಷ ರುಪಾಯಿ ಪರಿಹಾರ ನೀಡಬೇಕು ಎಂದು ಹೇಳಿತು.
ನಂಬಿನಾರಾಯಣನ್ ಪ್ರಕರಣ: ಕೇರಳ ಪೊಲೀಸರಿಗಷ್ಟೇ ಅಲ್ಲ, ದೇಶಕ್ಕೇ ಪಾಠ
ಅದೇ ಬೇಹುಗಾರಿಕೆ ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿ ನಿಂತು, ದಶಕಗಳ ಕಾಲ ಹಿಂಸೆಯನ್ನು ಅನುಭವಿಸಿದವರು ಚಂದ್ರಶೇಖರ್. ಇಸ್ರೋದ ಒಟ್ಟು ನಾಲ್ವರ ವಿರುದ್ಧ ಸುಳ್ಳು ಆರೋಪ ಮಾಡಲಾಗಿತ್ತು. ಇದೀಗ ಸುಪೀಂ ಕೋರ್ಟ್ ನ ತೀರ್ಪಿನಿಂದ ನಿರಾಳ ಆದಂತಾಗಿದೆ. ಆದರೆ ಆ ತೀರ್ಪು ಕೇಳಲು ಆಗದೆ ಉಸಿರು ಚೆಲ್ಲಿದ್ದಾರೆ ಚಂದ್ರಶೇಖರ್.
ಪ್ರಜ್ಞಾಹೀನರಾಗಿದ್ದ ಚಂದ್ರಶೇಖರ್ ಪ್ರತಿಕ್ರಿಯೆ ನೀಡುತ್ತಿರಲಿಲ್ಲ
"ಟೀವಿಯಲ್ಲಿ ಬರುತ್ತಿದ್ದ ಸುದ್ದಿಯನ್ನು ಅವರಿಗೆ ತೋರಿಸಲು ಪ್ರಯತ್ನ ಪಟ್ಟೆವು. ಆದರೆ ಅವರು ಪ್ರಜ್ಞಾಹೀನರಾಗಿದ್ದರು ಮತ್ತು ಪ್ರತಿಕ್ರಿಯೆ ನೀಡುತ್ತಿರಲಿಲ್ಲ" ಎಂದು ಹೇಳಿದ್ದಾರೆ ಚಂದ್ರಶೇಖರ್ ರ ಪತ್ನಿ ಕೆ.ವಿಜಯಮ್ಮ. ಅವರು ಎಚ್ ಎಂಟಿಯಲ್ಲಿ ಜನರಲ್ ಮ್ಯಾನೇಜರ್ ಆಗಿದ್ದವರು. "ಈ ದಿನಕ್ಕಾಗಿ ಅವರು ಎದುರು ನೋಡುತ್ತಿದ್ದರು. ಅದು ಕೊನೆಗೂ ಬಂತು. ಆದರೆ ಬಹಳ ತಡವಾಗಿತ್ತು" ಎಂದು ತಮ್ಮ ನೋವು ಹೊರಹಾಕಿದ್ದಾರೆ. ಭಾನುವಾರ, ಸೆಪ್ಟೆಂಬರ್ ಹದಿನಾರರ ರಾತ್ರಿ ಚಂದ್ರಶೇಖರ್ ತೀರಿಕೊಂಡಿದ್ದಾರೆ. ಕಳೆದ ಒಂದು ತಿಂಗಳಿಂದ ಅನಾರೋಗ್ಯದ ಕಾರಣಕ್ಕೆ ಬೆಂಗಳೂರಿನ ಹೆಬ್ಬಾಳದಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು.
ಚಿತ್ರ ಕೃಪೆ: @mohitmrao (Twitter)
ನಮಗೆ ಹೀಗ್ಯಾಕೆ ಮಾಡಿದರು ಎಂಬುದು ಗೊತ್ತಾಗಬೇಕು
ರಷ್ಯಾದ ಬಾಹ್ಯಾಕಾಶ ಸಂಸ್ಥೆ ಗ್ಲಾವ್ ಕೊಸ್ಮೋಸ್ ನಲ್ಲಿ ಭಾರತದ ಪ್ರತಿನಿಧಿಯಾಗಿ ಚಂದ್ರಶೇಖರ್ 1992ರಿಂದ ಕೆಲಸ ಮಾಡುತ್ತಿದ್ದರು. ತಮ್ಮ ಜೀವನ ಕೊನೆ ಎರಡು ದಶಕವನ್ನು ಚಂದ್ರಶೇಖರ್ ಕಳೆದಿದ್ದು ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ. ಅದಕ್ಕೂ ಮುನ್ನ ಕೇರಳ ಪೊಲೀಸರು ಹಾಗೂ ಗುಪ್ತಚರ ಇಲಾಖೆಯಿಂದ ಅವರು ಪಟ್ಟ ಪಡಿಪಾಟಲು ಅಷ್ಟಿಷ್ಟಲ್ಲ. "ಅವರನ್ನು ಅಪರಾಧಿ ಮಾಡುವ ಮೂಲಕ ಕೇರಳ ಪೊಲೀಸರು ಹಾಗೂ ಗುಪ್ತಚರ ಇಲಾಖೆ ಸಾಧಿಸಿದ್ದೇನು? ಈ ಎಲ್ಲ ವರ್ಷಗಳು ಅವರು ಅನುಭವಿಸಿದ ಹಿಂಸೆಗೆ ಯಾರು ಜವಾಬ್ದಾರರು? ಅವರ ವೃತ್ತಿಬದುಕು ಮತ್ತು ನಮ್ಮ ನೆಮ್ಮದಿಯನ್ನು ಹಾಳುಗೆಡವಿದರು. ಕೇರಳದಲ್ಲಿ ನಮ್ಮ ಮನೆ ಮೇಲೆ ದಾಳಿ ನಡೆಯಿತು. ಚಂದ್ರಶೇಖರ್ ರನ್ನು ದೇಶದ್ರೋಹಿ ಎಂದು ಜರಿದರು ಮತ್ತು ನಮಗೆ ಹಿಂಸೆ ನೀಡಿದರು. ನಮಗೆ ಹೀಗ್ಯಾಕೆ ಮಾಡಿದರು ಅಂತ ಗೊತ್ತಾಗಬೇಕು" ಎನ್ನುತ್ತಾರೆ ವಿಜಯಮ್ಮ.
ಚಂದ್ರಶೇಖರ್- ವಿಜಯಮ್ಮ ದಂಪತಿಗೆ ಮಕ್ಕಳಿಲ್ಲ
ಚಂದ್ರಶೇಖರ್- ವಿಜಯಮ್ಮ ದಂಪತಿಗೆ ಮಕ್ಕಳಿಲ್ಲ. ಕುಟುಂಬ ಸದಸ್ಯರು ಹೇಳುವ ಪ್ರಕಾರ, ಯಾವಾಗ ವಿವಾದ ಆಯಿತೋ ಆಗಿನಿಂದ ತಮ್ಮ ಇರುವಿನ ಬಗ್ಗೆಯೇ ಹೆಚ್ಚು ಸುದ್ದಿ ಮಾಡದೆ ಜೀವನ ಆರಂಭಿಸಿದರು ಚಂದ್ರಶೇಖರ್. "ಆ ಘಟನೆ ನಂತರ ಚಂದ್ರಶೇಖರ್ ಕುಗ್ಗಿಹೋದರು. ತಾನು ನಿರಪರಾಧಿ ಎಂಬುದನ್ನು ಕಾಲವೇ ಸಾಬೀತು ಪಡಿಸುತ್ತದೆ ಎನ್ನುತ್ತಿದ್ದರು. ಆದರೆ ಆ ಪ್ರಕರಣ ಮುಂದುವರಿಸಲಿಲ್ಲ. ಏಕೆಂದರೆ ಅವರ ಹೆಂಡತಿ ಕೇಂದ್ರ ಸರಕಾರಿ ನೌಕರಿಯಲ್ಲಿದ್ದರು. ಹಾಗೆ ಆ ಕೇಸು ಮುಂದುವರಿಸಿದರೆ ಆಕೆಗೆ ತೊಂದರೆ ಆಗಬಹುದು ಎಂಬ ಆತಂಕವಿತ್ತು. ಜತೆಗೆ ಆ ಆದಾಯದ ಮೇಲೆ ಗಂಡ-ಹೆಂಡತಿ ಅವಲಂಬಿಸಿದ್ದರು" ಎಂದು ಚಂದ್ರಶೇಖರ್ ಸಂಬಂಧಿಯೊಬ್ಬರು ಹೇಳಿದ್ದಾರೆ.
ಮನೆ ಬಿಟ್ಟು ಆಚೆ ಬರುತ್ತಿರಲಿಲ್ಲ
ಮತ್ತೊಬ್ಬ ಸಂಬಂಧಿ ಮಾತನಾಡಿ, ನಾನಾ ನಿಯೋಗಗಳ ಸದಸ್ಯರಾಗಿ ವಿದೇಶಗಳಿಗೆ ಚಂದ್ರಶೇಖರ್ ಹೋಗಿದ್ದನ್ನು ನೋಡಿದ್ದೇನೆ. ತುಂಬ ಶ್ರೀಮಂತಿಕೆಯಿಂದ ಕೂಡಿದ್ದ ಜೀವನ ಶೈಲಿ ಅವರದಾಗಿತ್ತು. ಆದರೆ ಬೇಹುಗಾರಿಕೆ ಆರೋಪ ಅವರ ಮೇಲೆ ಬಂದ ಕೂಡಲೇ ಎಲ್ಲವೂ ಬದಲಾಗಿ ಹೋಯಿತು. ಆರ್ಥಿಕ ಪರಿಣಾಮಗಳು ತೀರಾ ದೊಡ್ಡ ಮಟ್ಟದಲ್ಲಾಯಿತು. ಮನೆಯನ್ನು ಬಿಟ್ಟು ಆಚೆಯೇ ಹೋಗದಂತಾಗಿಬಿಟ್ಟರು ಚಂದ್ರಶೇಖರ್ ಎನ್ನುತ್ತಾರೆ. ತನಿಖಾಧಿಕಾರಿಗಳು ಚಂದ್ರಶೇಖರ್ ರನ್ನು ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆ ಮಾಡಿದರು ಎಂಬುದನ್ನು ಕೂಡ ನೆನಪಿಸಿಕೊಳ್ಳುತ್ತಾರೆ. ಕಳೆದ ಶುಕ್ರವಾರ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಲ್ಲಿ ಇಸ್ರೋ ಬೇಹುಗಾರಿಕೆ ಪ್ರಕರಣದ ಆರೋಪ ಸುಳ್ಳು ಎಂದು ತೀರ್ಪು ನೀಡಿದೆ ಜತೆಗೆ ನಂಬಿನಾರಾಯಣನ್ ಅವರಿಗೆ ಐವತ್ತು ಲಕ್ಷ ಪರಿಹಾರ ನೀಡುವಂತೆ ಕೇರಳ ಸರಕಾರಕ್ಕೆ ಸೂಚಿಸಿದೆ.