ಕೊರಿಯಾ ಸರ್ವಾಧಿಕಾರಿಯ ಕ್ಷಿಪಣಿ ಉಡಾವಣೆಗೆ ಬೆಚ್ಚಿಬಿದ್ದ ವಿಶ್ವ
ಜಪಾನ್ ನ ಈಶಾನ್ಯ ಕರಾವಳಿಯತ್ತ ಉತ್ತರ ಕೊರಿಯಾದ ವಿಲಕ್ಷಣ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ 4 ಖಂಡಾಂತರ ಕ್ಷಿಪಣಿಗಳನ್ನು ಉಡಾಯಿಸಿ ಅಟ್ಟಹಾಸ ಮೆರೆದಿದ್ದಾನೆ.
ಬೆಂಗಳೂರು, ಮಾರ್ಚ್ 6: ಜಪಾನ್ ನ ಈಶಾನ್ಯ ಕರಾವಳಿಯತ್ತ ಉತ್ತರ ಕೊರಿಯಾದ ವಿಲಕ್ಷಣ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ 4 ಖಂಡಾಂತರ ಕ್ಷಿಪಣಿಗಳನ್ನು ಉಡಾಯಿಸಿ ಅಟ್ಟಹಾಸ ಮೆರೆದಿದ್ದಾನೆ.
ಸೋಮವಾರ ಉತ್ತರ ಕೊರಿಯಾದ ಪ್ಯೊಂಗ್ಯಾನ್ ಪ್ರಾಂತ್ಯದಿಂದ ಪೂರ್ವ ಸಮುದ್ರಕ್ಕೆ ನಾಲ್ಕು ಖಂಡಾಂತರ ಕ್ಷಿಪಣಿಗಳನ್ನು ಉಡಾಯಿಸಲಾಗಿದೆ ಎಂದು ಪಕ್ಕದ ರಾಷ್ಟ್ರ ದಕ್ಷಿಣ ಕೊರಿಯಾ ಹೇಳಿದೆ. ಸದ್ಯ ಈ ಗಂಭೀರ ಪರಿಸ್ಥಿತಿಯನ್ನು ಅವಲೋಕನ ಮಾಡುತ್ತಿರುವುದಾಗಿ ಅಮೆರಿಕಾ ಮತ್ತು ದಕ್ಷಿಣ ಕೊರಿಯಾ ಹೇಳಿವೆ.[ಕೊರಿಯಾ ಸರ್ವಾಧಿಕಾರಿಯ ಅಣ್ಣನ ಕೊಲೆ ಸುತ್ತಾ ಮುಂದುವರಿದ ನಿಗೂಢತೆ]
ಜಂಟಿ ಸಮರಾಭ್ಯಾಸಕ್ಕೆ ಪ್ರತ್ಯುತ್ತರ?
ಕಳೆದ ವಾರವಷ್ಟೆ ಅಮೆರಿಕಾ ಮತ್ತು ದಕ್ಷಿಣ ಕೊರಿಯಾ ಜಂಟಿಯಾಗಿ ಸಮರಾಭ್ಯಾಸ ಆರಂಭಿಸಿತ್ತು. ಇದನ್ನು ತೀವ್ರವಾಗಿ ಖಂಡಿಸಿದ್ದ ಉತ್ತರ ಕೊರಿಯಾ ಈ ಕ್ಷಿಪಣಿಗಳನ್ನು ಉಡಾಯಿಸರಬಹುದು ಎನ್ನಲಾಗಿದೆ.
ಜಪಾನ್ ಸಮುದ್ರದಲ್ಲಿ ಕೊರಿಯಾ ಕ್ಷಿಪಣಿ
"ಉತ್ತರ ಕೊರಿಯಾದ ಮೂರು ಕ್ಷಿಪಣಿಗಳು ಟೋಕ್ಯೋದ ಎಕ್ಸ್ ಕ್ಲೂಸಿವ್ ಎಕನಾಮಿಕ್ ಝೋನ್ (ತೀರದಿಂದ 200 ನಾಟಿಕಲ್ ಮೈಲು, ಅಂದರೆ 370 ಕಿಲೋಮೀಟರ್ ದೂರ) ಒಳಕ್ಕೆ ಬಂದಿವೆ," ಎಂದು ಜಪಾನ್ ಪ್ರಧಾನಿ ಶಿಂಜೋ ಅಬೆ ಹೇಳಿದ್ದಾರೆ.[ಅಣ್ಣನನ್ನೇ ವಿಷವುಣಿಸಿ ಕೊಂದ ಉತ್ತರ ಕೊರಿಯಾ ಸರ್ವಾಧಿಕಾರಿ?]
ಭದ್ರತಾ ನಿಯಮಗಳ ಉಲ್ಲಂಘನೆ
"ಇದರಿಂದ ಉತ್ತರ ಕೊರಿಯಾ ಹೊಸ ಬೆದರಿಕೆ ಹಾಕಿದೆ ಎಂಬುದು ಸ್ಪಷ್ಟವಾಗುತ್ತದೆ" ಎಂದು ಅಬೆ ಅಭಿಪ್ರಾಯಪಟ್ಟಿದ್ದಾರೆ. "ಇದು ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಒಪ್ಪಂದದ ಸ್ಪಷ್ಟ ಉಲ್ಲಂಘನೆ. ಇದೊಂದು ಅಪಾಯಕಾರಿ ನಡೆ," ಎಂದು ದಕ್ಷಿಣ ಕೊರಿಯಾ ಕಿಡಿಕಾರಿದೆ.
ಸಾಮರ್ಥ್ಯ ಎಷ್ಟು?
ಈ ಎಲ್ಲಾ ಕ್ಷಿಪಣಿಗಳು 260 ಕಿಲೋಮೀಟರ್ ಎತ್ತರ ಹಾಗೂ 1,000 ಕಿಲೋಮೀಟರ್ ದೂರ ಕ್ರಮಿಸುವ ಸಾಮರ್ಥ್ಯ ಹೊಂದಿವೆ. ಕೆಲವು ಕ್ಷಿಪಣಿಗಳು ಜಪಾನ್ ತೀರದಿಂದ300 ಕಿಲೋ ಮೀಟರ್ ಸಮೀಪದ ವರೆಗೂ ತಲುಪಿವೆ. ಉತ್ತರ ಕೊರಿಯಾದ ನಡೆಯಿಂದ ಬೆಚ್ಚಿ ಬಿದ್ದಿರುವ ದಕ್ಷಿಣ ಕೊರಿಯಾ ತಾನು ರಕ್ಷಣೆಗಾಗಿ ಕ್ಷಪಣಿ ನಿರೋಧಕ ವ್ಯವಸ್ಥೆಯನ್ನು ಅಮೆರಿಕಾದಿಂದ ತರಿಸಿಕೊಳ್ಳುತ್ತಿರುವುದಾಗಿ ಹೇಳಿದೆ.
ಅಣ್ಣನ ಕೊಲೆಯ ಸೂತ್ರದಾರ
ಈ ಹಿಂದೆ ಹಲವು ಬಾರಿ ಕ್ಷಿಪಣಿ ಮತ್ತು ಅಣ್ವಸ್ತೃಗಳನ್ನು ಪರೀಕ್ಷೆ ಮಾಡಿ ಉತ್ತರ ಕೊರಿಯಾ ಬೆದರಿಕೆ ಹಾಕಿದ್ದಿದೆ. ಆದರೆ ಈ ಬಾರಿ ಅದು ನೇರವಾಗಿ ಜಪಾನ್ ಸಮುದ್ರಕ್ಕೆ ದಾಗುಂಡಿ ಇಟ್ಟು ಬೆದರಿಕೆ ಹಾಕಿದೆ.
ಕೆಲವೇ ವಾರಗಳ ಹಿಂದಷ್ಟೆ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅಣ್ಣ ಕಿಮ್ ಜಾಂಗ್ ನಾಮ್ ರನ್ನು 'ವಿಎಕ್ಸ್ ನರ್ವ್ ಏಜೆಂಟ್' ಎಂಬ ವಿಷಕಾರಿ ರಾಸಾಯನಿಕ ಸ್ಪ್ರೇ ಮಾಡಿ ಕೊಲೆ ಮಾಡಲಾದ ಸುದ್ದಿ ಹೊರ ಬಿದ್ದಿತ್ತು. ಇದರಲ್ಲಿ ಕೊರಿಯಾ ಸರ್ವಾಧಿಕಾರಿಯ ಕೈವಾಡ ಸಾಬೀತಾಗುವ ಹಂತದಲ್ಲಿರುವಾಗಲೇ ಕ್ಷಿಪಣಿ ಉಡಾಯಿಸಿ ಮತ್ತೊಂದು ದುಸ್ಸಾಹಸ ಮೆರೆದಿದ್ದಾನೆ.