ವಿಪ್ರೋ ಮಾಜಿ ಉದ್ಯೋಗಿ ಅಕ್ಷತಾ ಹತ್ಯೆಗೆ ಟ್ವಿಸ್ಟ್!
ಬೆಂಗಳೂರು, ಫೆಬ್ರವರಿ 11 : ವಿಪ್ರೋ ಮಾಜಿ ಉದ್ಯೋಗಿ ಅಕ್ಷತಾ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಪತಿಯೇ ಅಕ್ಷತಾಳನ್ನು ಹತ್ಯೆ ಮಾಡಿರುವ ಸತ್ಯ ಬಯಲಾಗಿದೆ.
ಅಕ್ಷತಾ (30) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ಚಂದ್ರಕಾಂತ್, ಚಂದ್ರಕಾಂತ್ಗೆ ಸಹಕಾರ ನೀಡಿದ ರಾಜ್ ಸಿಂಗ್ನನ್ನು ಬೆಂಗಳೂರಿನ ಸಂಪಂಗಿರಾಮನಗರ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು : ಬಿಜೆಪಿ ಕಾರ್ಪೊರೇಟರ್ ಪತಿ ಹತ್ಯೆ
ಅಕ್ಷತಾ ನಾಪತ್ತೆಯಾದ ಕುರಿತು ಅವರ ತಾಯಿ ರೇಖಾ ಅವರು ಜ.22ರಂದು ಸಂಪಂಗಿ ರಾಮನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಶನಿವಾರ ಪತಿ ಚಂದ್ರಕಾಂತ್ ಬಂಧನದ ಬಳಿಕ ಅವರು ಹತ್ಯೆಯಾಗಿರುವುದು ಬೆಳಕಿಗೆ ಬಂದಿದೆ.
ಪ್ರಕರಣದ ವಿವರ : ಚಂದ್ರಕಾಂತ್ ಶಾಂತಿನಗರದಲ್ಲಿ ಸಿಲ್ವರ್ ಸ್ಪೂನ್ ಎಂಬ ಹೋಟೆಲ್ ನಡೆಸುತ್ತಿದ್ದಾರೆ. ಚಂದ್ರಕಾಂತ್ ಮತ್ತು ಅಕ್ಷತಾ 10 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ 4 ವರ್ಷದ ಗಂಡು ಮಗುವಿದೆ.
ಬೆಂಗಳೂರು : ಪೇದೆ ಮೇಲೆ ನೈಜೀರಿಯನ್ ಮಹಿಳೆಯಿಂದ ಹಲ್ಲೆ
ಉತ್ತರ ಭಾರತದ ಪ್ರವಾಸಕ್ಕೆ ಹೋಗಲು ಅಕ್ಷತಾ ತಯಾರಿ ಮಾಡಿಕೊಳ್ಳುತ್ತಿದ್ದರು. ಅದಕ್ಕಾಗಿ ಚಂದ್ರಕಾಂತ್ ಬಳಿ ಹಣ ಕೇಳಿದ್ದರು. ಜ.6ರಂದು ಇದೇ ವಿಚಾರಕ್ಕೆ ಪತಿ-ಪತ್ನಿ ನಡುವೆ ಜಗಳವಾಗಿದೆ.
ಜಗಳ ಮುಂದುವರೆಸಿದ್ದ ಚಂದ್ರಕಾಂತ್ ಉಸಿರುಗಟ್ಟಿಸಿ ಅಕ್ಷತಾರನ್ನು ಹತ್ಯೆ ಮಾಡಿದ್ದ. ಹತ್ಯೆ ಬಳಿಕ ರಾಜ್ ಸಿಂಗ್ಗೆ ಕರೆ ಮಾಡಿ ವಿಷಯ ತಿಳಿಸಿದ್ದ. ಇಬ್ಬರು ಕಾರಿನಲ್ಲಿ ಶವವನ್ನು ಹಾಕಿಕೊಂಡು ಹೋಗಿ ಕಾಮನದೊಡ್ಡಿ ಅರಣ್ಯ ಪ್ರದೇಶಕ್ಕೆ ತೆರಳಿದ್ದರು. ಅಲ್ಲಿ ಶವದ ಮೇಲೆ ಡಿಸೇಲ್ ಸುರಿದು ಬೆಂಕಿ ಹಚ್ಚಿದ್ದರು. ನಂತರ ಬೆಂಗಳೂರಿಗೆ ವಾಪಸ್ ಆಗಿದ್ದರು.
ಅಕ್ಷತಾ ಉತ್ತರ ಭಾರತದ ಪ್ರವಾಸ ಹೋಗಿದ್ದಾಳೆ ಎಂದು ಎಲ್ಲರ ಬಳಿ ಹೇಳುತ್ತಿದ್ದರು. ಆದರೆ, ಅವರ ಫೋನ್ ಸಂಪರ್ಕ ಸಿಗದ ಕಾರಣ ತಾಯಿ ರೇಖಾ ಅವರು ಸಂಪಂಗಿರಾಮನಗರ ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣ ದಾಖಲು : ಕಾಮನದೊಡ್ಡಿ ಅರಣ್ಯ ಪ್ರದೇಶದಲ್ಲಿ ಬೆಂಕಿ ನೋಡಿದ್ದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳ ಪರಿಶೀಲನೆ ನಡೆಸಿದ ಪೊಲೀಸರಿಗೆ ಶವ ಸುಟ್ಟಿರುವುದು ತಿಳಿದಿತ್ತು. ಆದರೆ, ಶವದ ಗುರುತು ಸಿಕ್ಕಿರಲಿಲ್ಲ. ಬಟ್ಟೆಯ ತುಣಕು ಮತ್ತು ಆಭರಣ ವಶಕ್ಕೆ ಪಡೆದಿದ್ದ ಪೊಲೀಸರು ಸಾಕ್ಷಿನಾಶ ಪ್ರಕರಣ ದಾಖಲಿಸಿಕೊಂಡಿದ್ದರು.
ಅಕ್ಷತಾ ತಾಯಿ ರೇಖಾ ಪೊಲೀಸರಿಗೆ ದೂರು ನೀಡಿದಾಗ ದಂಪತಿಗಳ ಮಧ್ಯೆ ಜಗಳ ನಡೆಯುತ್ತಿತ್ತು ಎಂದು ಹೇಳಿದ್ದರು. ಇದನ್ನೇ ಮುಂದಿಟ್ಟುಕೊಂಡು ಪೊಲೀಸರು ಚಂದ್ರಕಾಂತ್ ವಿಚಾರಣೆ ನಡೆಸಿದಾಗ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ.
'ಪತ್ನಿ ಯುವಕನ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಈ ಬಗ್ಗೆ ಹಲವು ಬಾರಿ ಎಚ್ಚರಿಕೆ ನೀಡಿದ್ದೆ. ಆದರೂ ಸಂಬಂಧ ಮುಂದುವರೆಸಿದ್ದಳು. ಆದ್ದರಿಂದ, ಮದ್ಯ ಕುಡಿಸಿ ಹತ್ಯೆ ಮಾಡಿದ್ದೇನೆ' ಎಂದು ಚಂದ್ರಕಾಂತ್ ತಪ್ಪೊಪ್ಪಿಕೊಂಡಿದ್ದಾನೆ.