ನೆ.ಲ ನರೇಂದ್ರ ಬಾಬು ಬಿಜೆಪಿ ಸೇರುವುದು ಖಚಿತ
ಬೆಂಗಳೂರು, ಸೆ. 21:ಕಾಂಗ್ರೆಸ್ಸಿನ ಮಾಜಿ ಶಾಸಕ ನೆ. ಲ ನರೇಂದ್ರ ಬಾಬು ಅವರು ಬಿಜೆಪಿ ಸೇರುತ್ತಿರುವುದನ್ನು ಖಚಿತ ಪಡಿಸಿದ್ದಾರೆ. ಮಹಾಲಕ್ಷ್ಮಿ ಲೇಔಟ್ನಲ್ಲಿ ತಮ್ಮ ಬೆಂಬಲಿಗರ ಸಭೆ ನಡೆಸಿದ ನಂತರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.
ಕಾಂಗ್ರೆಸ್ಸಿನಲ್ಲಿ ನಾನು ಅಧಿಕಾರದಿಂದ ವಂಚಿತನಾಗಿದ್ದೇನೆ, ಸಂಪೂರ್ಣವಾಗಿ ಕಾಂಗ್ರೆಸ್ ಸಖ್ಯ ತೊರೆದು ಬಿಜೆಪಿ ಸೇರುತ್ತಿದ್ದೇನೆ ಎಂದರು.ಕಾಮಾಕ್ಷಿಪಾಳ್ಯದ ಕಾಂಗ್ರೆಸ್ ಮುಖಂಡರಾದ ಸಿ.ರಾಜಣ್ಣ ಅವರು ಕೂಡ ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿ ಹಬ್ಬಿದೆ.
ಮಹಾಲಕ್ಷ್ಮಿ ಲೇಔಟ್ ವಿಧಾನಸಭೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ 2008ರಲ್ಲಿ ಗೆಲುವು ಸಾಧಿಸಿದ್ದರು. ಆದರೆ, 2013ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ನ ಗೋಪಾಲಯ್ಯ ವಿರುದ್ಧ ಸೋಲನುಭವಿಸಿದ್ದರು. ಕಾಂಗ್ರೆಸ್ ಇವರನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಿತ್ತು.
ಕಳೆದ ಆರು ತಿಂಗಳ ಹಿಂದೆ ಬಿಬಿಎಂಪಿ ಮಾಜಿ ಆಡಳಿತ ಪಕ್ಷದ ನಾಯಕ, ಹಿಂದುಳಿದ ವರ್ಗದ ಮುಖಂಡ ಎಂ.ನಾಗರಾಜ್ ಅವರು ಬಿಜೆಪಿ ಸೇರಿ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಬಳಿಕ ಈ ಬೆಳವಣಿಗೆ ಈ ಭಾಗದಲ್ಲಿ ನಡೆದಿದೆ. ಎಸ್.ಹರೀಶ್ ಇಲ್ಲಿನ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.